ಸ್ವಾತಂತ್ರ್ಯಾನಂತರ ಮೊದಲ ಮಹಿಳಾ ಕೈದಿಗೆ ಗಲ್ಲು ಶಿಕ್ಷೆ; ನೇಣಿಗೇರಲಿರುವ ಆಕೆಯ ಅಪರಾಧವೇನು?
2008ರಲ್ಲಿ ಶಬನಮ್ ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು! ಸ್ವಾತಂತ್ರ್ಯಾನಂತರ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಮೊದಲ ಮಹಿಳಾ ಕೈದಿ ಎನಿಸಿಕೊಳ್ಳಲಿದ್ದಾರೆ ಶಬನಮ್.
ನವದೆಹಲಿ (ಫೆ. 17): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಕೈದಿಯೊಬ್ಬರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ಅಮ್ರೋಹದ ಶಬನಮ್ ಎಂಬಾಕೆಯೇ ನೇಣಿಗೇರಲಿರುವ ಅಪರಾಧಿ. ಬಹಳ ಅಪರೂಪದ ಅಪರಾಧವೆಸಗಿರುವ ಈಕೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಉತ್ತರ ಪ್ರದೇಶದ ಮಥುರಾದಲ್ಲಿ ಇದುವರೆಗೂ ನೇಣುಗಂಬಕ್ಕೆ ಏರಿರುವ ಏಕೈಕ ಮಹಿಳಾ ಕೈದಿ ಈಕೆಯಾಗಲಿದ್ದಾಳೆ. ಅಷ್ಟಕ್ಕೂ ಆಕೆ ಮಾಡಿದ್ದ ಅಪರಾಧವಾದರೂ ಏನು ಅಂತೀರಾ? ಮುಂದೆ ಓದಿ...
2008ರಲ್ಲಿ ಶಬನಮ್ ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು! ಮದುವೆಯಾದ ಮೇಲೂ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕೊಲೆ ಮಾಡಿದ್ದಳು. ಆಕೆಗೆ ಗಲ್ಲು ಶಿಕ್ಷೆಯೂ ಆಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು. ಆದರೆ, ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಕೆಯ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ ಆಕೆಯ ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಹೀಗಾಗಿ, ಆಕೆಯನ್ನು ನೇಣಿಗೇರಿಸಲು ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ನಡೆದಿವೆ.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿದ್ದ ಅಪರಾಧಿಗಳನ್ನು ನೇಣಿಗೇರಿಸಿದ್ದ ಪವನ್ ಜಲ್ಲದ್ ಅವರೇ ಶಬನಮ್ಳನ್ನೂ ನೇಣಿಗೇರಿಸಲಿದ್ದಾರೆ. ಆದರೆ, ಆಕೆಯನ್ನು ನೇಣಿಗೇರಿಸುವ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಈ ಮೂಲಕ ಸ್ವಾತಂತ್ರ್ಯಾನಂತರ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಮೊದಲ ಮಹಿಳಾ ಕೈದಿ ಎನಿಸಿಕೊಳ್ಳಲಿದ್ದಾರೆ ಶಬನಮ್.
ಅಂದಹಾಗೆ, ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆ ಮೊದಲ ಮಹಿಳಾ ನೇಣುಗಂಬದ ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾವ ಮಹಿಳಾ ಕೈದಿಯೂ ಗಲ್ಲುಶಿಕ್ಷೆಗೆ ಒಳಗಾಗಿಲ್ಲ. ಈಗಾಗಲೇ ಶಬನಮ್ ನೇಣಿಗೇರಿಸಲು ಸಿದ್ಧತೆಗಳು ನಡೆಯುತ್ತಿದ್ದು, ನೇಣುಗಂಬದ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿದೆ. ಆಕೆಗೆ ಡೆತ್ ವಾರೆಂಟ್ ಜಾರಿಯಾದ ಕೂಡಲೆ ನೇಣಿಗೇರಿಸಲಾಗುವುದು.
ಪವನ್ ಜಲ್ಲದ್ ಈಗಾಗಲೇ 2 ಬಾರಿ ಮಥುರಾದ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಣಿಗೇರಿಸಲು ದಪ್ಪನೆಯ ಹಗ್ಗವನ್ನು ಕೂಡ ತರಿಸಲಾಗಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ