ಕೊಲ್ಕತ್ತಾ (ಮೇ 20): ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾವನ್ನು ನಿಯಂತ್ರಿಸುವಲ್ಲಿ ಅಧಿಕಾರದಲ್ಲಿರುವವರು ಸೋತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಸಂಘಟನೆಯೊಂದು ಮಂಗಳವಾರ ಕೋಲ್ಕತ್ತಾದ ರಾಜ್ ಭವನದ ಮುಂದೆ ಕುರಿಗಳ ಹಿಂಡಿನೊಟ್ಟಿಗೆ ಪ್ರತಿಭಟನೆ ನಡೆಸಿದೆ. ಕೋಲ್ಕತಾ ನಾಗರೀಕ್ ಮಂಚದ ವಕ್ತಾರರು ಕುರಿ ಕಾಯುವವರೊಟ್ಟಿಗೆ ರಾಜ್ಯಪಾಲರ ಹೌಸ್ನ ಉತ್ತರ ಗೇಟ್ ಬಳಿ ಕುರಿ ಮಂದೆ ತಂದು ನಿಲ್ಲಿಸಿದ್ದಾರೆ. ಪೊಲೀಸರು ಬರುವ 5 - 7 ನಿಮಿಷಗಳ ಮುಂಚೆ ಆ ಗುಂಪು ಅಲ್ಲಿಯೇ ನಿಂತಿತ್ತು. ಈ ಘಟನೆ ಕಂಡು ಪೊಲೀಸರು ಮೊದಲಿಗೆ ದಿಗ್ಭ್ರಮೆಗೊಂಡರು. ಆ ನಂತರ ಪೊಲೀಸರು ಚಳವಳಿಗಾರರನ್ನು ಮತ್ತು ಕುರಿಗಳನ್ನು ಭದ್ರತಾ ಸ್ಥಳದಿಂದ ದೂರಕ್ಕೆ ಕಳುಹಿಸಿದರು.
ಇನ್ನು ಮಂಗಳವಾರ ರಾಜ್ಯಪಾಲ ಜಗದೀಪ್ ಧಂಕರ್ ಅವರ ಹುಟ್ಟು ಹಬ್ಬವೂ ಇತ್ತು. ನಾಗರೀಕ್ ಮಂಚ ವಕ್ತಾರರು ಮಾತನಾಡಿ, 'ಈಗ ಕೊರೊನಾ ಸಮಸ್ಯೆ ಹೆಚ್ಚಾಗಿದ್ದು, ಈ ಸಾಂಕ್ರಾಮಿಕದ ಸಮಯದಲ್ಲಿ ಜನರು ಒಟ್ಟಿಗೆ ಸೇರಲು ಅನುಮತಿ ಇಲ್ಲ. ಅಲ್ಲದೇ ಈ ಪ್ರದೇಶದಲ್ಲಿ ನಿಷೇಧದ ಆದೇಶಗಳೂ ಇದೆ' ಎಂದಿದ್ದಾರೆ.
ಅಲ್ಲದೇ 'ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದ್ದೂ, ಕೋವಿಡ್ ರೋಗಿಗಳಿಗೆ ಹಾಸಿಗೆಯ ಕೊರತೆಯುಂಟಾಗುತ್ತಿದೆ. ಜನರು ವೈದ್ಯಕೀಯ ಸೌಲಭ್ಯ ಸಿಗದೇ ಸಾಯುತ್ತಿದ್ದಾರೆ. ಆದರೆ ರಾಜ್ಯಪಾಲ ಜಗದೀಪ್ ಧಂಕರ್ ಅವರು ಜನರ ನೆರವಿಗೆ ನಿಂತಿಲ್ಲ. ಕೊರೊನಾ ನಿರ್ಮೂಲನೆಗೆ ಕ್ರಮ ಕೈಗೊಂಡಿಲ್ಲ' ಎಂದು ವಕ್ತಾರರು ಹೇಳಿದ್ದಾರೆ. ಅಲ್ಲದೇ 'ರಾಜ್ಯಪಾಲರು ಬೇರೆಲ್ಲಾ ವಿಷಯಗಳ ಬಗ್ಗೆ ಗಮನಹರಿಸುತ್ತಿದ್ದಾರೆ ಹೊರತು ಕೋವಿಡ್ 19 ಬಗ್ಗೆ ಚಿಂತಿಸುತ್ತಿಲ್ಲ' ಎಂದಿದ್ದಾರೆ.
ಕೊಲ್ಕತ್ತಾ ನಾಗರೀಕ್ ಮಂಚ ಸಂಘವೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಅನುಪಮ್ ಹಾಜ್ರಾ ಅವರು ಮಾತನಾಡಿದ್ದಾರೆ. 'ರಾಜ ಭವನದ ಹೊರಗೆ ರಾಜ್ಯದ ಮೊದಲ ನಾಗರಿಕನ ವಿರುದ್ಧ ಇಂತಹ ಅಸಹ್ಯಕರ ವರ್ತನೆ ಬಂಗಾಳದ ಬಗ್ಗೆ ಸಣ್ಣ ನೋಟವನ್ನು ಕಲ್ಪಿಸಿಕೊಟ್ಟಿದೆ' ಎಂದಿದ್ದಾರೆ. ಆಡಳಿತದ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಅವರು ಮಾತನಾಡಿ 'ಈ ಘಟನೆಯ ಹಿಂದೆ ಯಾರಿದ್ದಾರೆ. ಅಲ್ಲದೇ ಇಂತಹ ಆಲೋಚನೆ ಬಂದಿದ್ದು ಹೇಗೆ? ಎನ್ನುವುದು ನಮಗೆ ತಿಳಿದಿಲ್ಲ' ಎಂದಿದ್ದಾರೆ.
'ಕೊರೊನಾ ಮಾರ್ಗಸೂಚಿ ಉಲ್ಲಂಘಿಸಬೇಡಿ. ಶಾಂತವಾಗಿರಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ' ಎಂದು ಘೋಷ್ ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ