ದೆಹಲಿ (ಏ. 17): ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕು ನಾಗಾಲೋಟ ನಡೆಸಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಡ್, ಆಕ್ಸಿಜನ್ ಸಮಸ್ಯೆ ಉದ್ಭವಿಸಿದೆ.ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಶೇ 24ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಿದೆ. ನಾಲ್ವರಲ್ಲಿ ಒಬ್ಬರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ 24 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಕೋವಿಡ್ ಸೋಂಕಿತರ ಜೀವ ಉಳಿಸುವ ರೆಮ್ಡಿಸಿವಿರ್ ಔಷಧಿ ಕೊರತೆ ಕೂಡ ಉದ್ಭವಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಕೆಟ್ಟದಾಗಿದೆ. ಸೋಂಕು ಪ್ರಕರಣಗಳು ಶೀಘ್ರವಾಗಿ ಏರಿಕೆಯಾಗುತ್ತಿದೆ. ಇದೇ ಹಿನ್ನಲೆ ನಾವು ಬೆಡ್, ಆಕ್ಸಿಜನ್ ಕೊರತೆ ಎದುರಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಪರಿಸ್ಥಿತಿ ಎಲ್ಲವೂ ನಿಯಂತ್ರಣದಲ್ಲಿತ್ತು. ಆದರೆ, ವೇಗವಾಗಿ ಕೊರೋನಾ ಹರಡುತ್ತಿದ್ದು, ಈಗ ಮತ್ತೊಂದು ಅಲೆಯ ತುದಿಗೆ ಮುಟ್ಟಿದೆ ಎಂದರು
ಯಾವುದೇ ಆರೋಗ್ಯ ಮೂಲಸೌಕರ್ಯಗಳಿಗೆ ಮಿತಿಗಳಿವೆ. ಆದರೂ ಸರ್ಕಾರ ಬೆಡ್ ಸಂಖ್ಯೆಯನ್ನು ಹೆಚ್ಚಸಲು ಅವಿರಹಿತ ಪ್ರಯತ್ನ ನಡೆಸುತ್ತಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ 6,000 ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆ ವಿಕೇಂಡ್ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರತಿನಿತ್ಯ 2.3 ಲಕ್ಷ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್ ಸೇರಿದಂತೆ ಔಷಧಿಗಳಿಗಾಗಿ ಸೋಂಕಿತರು ಸಮಸ್ಯೆ ಎದುರಿಸುವಂತೆ ಆಗಿದೆ. ಇಂದು ದೇಶದಲ್ಲಿ 2.34 ಲಕ್ಷ ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1.45 ಕೋಟಿ ದಾಟಿದೆ. ಇಂದು 1,341 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ 1,75,649ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಮತ್ತು ಪ್ಯಾಬಿಫ್ಲೂನಂತರ ಔಷಧ ಕೊರತೆ ಉಂಟಾಗಿದ್ದು, ಇದು ಕಳ್ಳ ಸಂತೆಯಲ್ಲಿ ಮಾರಾಟವಾಗುವಂತೆ ಪ್ರೇರೇಪಿಸಿದೆ.
ಇದನ್ನು ಓದಿ: ಸೋನು ಸೂದ್ಗೆ ಕೋವಿಡ್; ದೇಶಕ್ಕೆ ನಿಮ್ಮ ಅಗತ್ಯವಿದೆ, ಹೆಚ್ಚಿನ ಕಾಳಜಿವಹಿಸಿ ಎಂದ ಅಭಿಮಾನಿಗಳು
ದೇಶದಲ್ಲಿ ಕೊರೋನಾ ಏರಿಕೆ ಪ್ರಕರಣದ ಬಗ್ಗೆ ರೆಡ್ಕ್ರಾಸ್ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದ್ದೇನೆ.
ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಸ್ಪಾಗಳು, ಸಭಾಂಗಣಗಳು, ಮಾಲ್ಗಳು ಹಾಗೂ ಜಿಮ್ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.ಈ ವೀಕೆಂಡ್ ಕರ್ಫ್ಯೂ ವೇಳೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪಾಸ್ ಹೊಂದಿರಲೇಬೇಕು. ಆ ಪಾಸ್ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಇದರ ಜೊತೆಗೆ ರೆಸ್ಟೋರೆಂಟ್ಗಳಲ್ಲಿ ಕೂತು ತಿನ್ನಲು ಅವಕಾಶವಿರುವುದಿಲ್ಲ. ಪಾರ್ಸಲ್ಗೆ ಮಾತ್ರ ಅವಕಾಶವಿರುತ್ತದೆ. ಮದುವೆ ಸಮಾರಂಭಗಳಿಗೆ ಕೇವಲ 50 ಮಂದಿಗಷ್ಟೇ ಅವಕಾಶವಿರುತ್ತದೆ. ಜೊತೆಗ ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ