ಮುಂಬೈನ (Mumbai) ಥಾಣೆಯ ಮೀರಾ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನಡೆದ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಲಿವ್ ಇನ್ ಸಂಗಾತಿ (Living together) ಸರಸ್ವತಿ ವೈದ್ಯಳನ್ನು (Saraswathi Vaidya) ಆಕೆಯ ಗೆಳೆಯ ಮನೋಜ್ ಸಾನೆ (Manoj sane) ಭಯಾನಕವಾಗಿ ಕೊಂದಿರುವ ಘಟನೆ ಎಂಥವರನ್ನೂ ಬೆಚ್ಚಿ ಬೀಳಿಸಿದೆ. ಈ ಕೊಲೆ ಘಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದಾಗ ಸ್ವತಃ ಪೊಲೀಸರೇ ಬೆಚ್ಚಿ ಬಿದ್ದಿದ್ದು ಮಾತ್ರವಲ್ಲದೇ, ಅಲ್ಲಿನ ಪರಿಸ್ಥಿತಿ ಕಂಡು ಇಡೀ ದಿನ ಊಟವೂ ಮಾಡಿಲ್ಲ, ನಿದ್ದೆಯೂ ಕಣ್ಣಿಗೆ ಹತ್ತಿಲ್ಲ ಎಂಬ ವಿಷಯ ತಿಳಿದು ಬಂದಿದೆ.
ಹೌದು.. ತಮ್ಮ ನೆರೆಹೊರೆಯವರೊಂದಿಗೆ ಎಂದಿಗೂ ಮಾತನಾಡದ ಮತ್ತು ಮುಂಬೈನ ತಮ್ಮ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಹೆಚ್ಚಾಗಿ ಅಪರಿಚಿತರಾಗಿಯೇ ಉಳಿದ ಈ ದಂಪತಿ ಕಳೆದ ಬುಧವಾರ ನಡೆದ ಭೀಕರ ಹತ್ಯೆಯ ನಂತರ ಗಮನ ಸೆಳೆದಿದ್ದಾರೆ. 32 ವರ್ಷದ ಸರಸ್ವತಿ ವೈದ್ಯ ಮತ್ತು 56 ವರ್ಷದ ಮನೋಜ್ ಸಾನೆ 15 ವರ್ಷಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ಪಡಿತರ ಅಂಗಡಿಯಲ್ಲಿ ಭೇಟಿಯಾಗಿದ್ದರು. ಪೊಲೀಸರ ಪ್ರಕಾರ ಅವರಿಬ್ಬರೂ ಅಹಮದ್ನಗರದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Mumbai Case: ಶವ ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ, ಸಿಕ್ಕಿದ್ದು ಕಾಲುಗಳಷ್ಟೇ: ಸರಸ್ವತಿ ಹತ್ಯೆ ಶ್ರದ್ಧಾಗಿಂತಲೂ ಭೀಕರ
ವಾಂತಿ ಮಾಡಿದ್ದ ಪೊಲೀಸರು!
ಅಪಾರ್ಟ್ಮೆಂಟ್ನಿಂದ ದುರ್ನಾತ ಬೀರುತ್ತಿರುವುದನ್ನು ಗಮನಿಸಿದ ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಬುಧವಾರ ಅಪಾರ್ಟ್ಮೆಂಟ್ ಒಳಗೆ ಕಾಲಿಟ್ಟಾಗ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಮನೆಯೊಳಗೆ ಮೂಗು ಮುಚ್ಚುವಂತೆ ದುರ್ನಾತ ಬರುತ್ತಿತ್ತು. ಹೆಜ್ಜೆ ಮುಂದಡಿಯಿಡುತ್ತಿದ್ದಂತೆ ಅಲ್ಲಲ್ಲಿ ದೇಹದ ತುಂಡಾದ ಭಾಗಗಳು ಹರಡಿಕೊಂಡಿದ್ದವು. ಅಡುಗೆ ಮನೆಗೆ ಹೋದರೆ ಅಲ್ಲಿ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಹುರಿದ ಮಾಂಸಗಳು ಇದ್ದವು. ಇದನ್ನು ಕಂಡು ತಡೆದುಕೊಳ್ಳಲಾರದ ಪೊಲೀಸರು ಅಲ್ಲೇ ವಾಂತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿಂದ ಸಂಜೆ ಮನೆಗೆ ಬಂದಾಗಲೂ ಪೊಲೀಸರಿಗೆ ಆ ಭಯಾನಕ ದೃಶ್ಯಗಳಿಂದ ಹೊರಬರಲಾಗಲಿಲ್ಲ. ಪರಿಣಾಮ ಅಂದು ರಾತ್ರಿ ಊಟವೇ ಮಾಡಿಲ್ಲ, ನಿದ್ದೆಯೂ ಮಾಡಿಲ್ಲ ಎಂದು ಪೊಲೀಸರೊಬ್ಬರು ಹೇಳಿದ್ದಾರೆ.
ಇನ್ನು ಈ ಕೊಲೆ ಪ್ರಕರಣದ ಬಗ್ಗೆ ಆರೋಪಿಯು ನೀಡುತ್ತಿರುವ ಒಂದೊಂದು ಹೇಳಿಕೆಗಳು ಕೂಡ ಪೊಲೀಸರನ್ನು ದಂಗು ಬಡಿಸಿದೆ. ಒಂದೊಮ್ಮೆ ಅವಳು ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಅನುಮಾನದ ಮೇಲೆ ಜಗಳ ಆಯಿತು ಎಂದು ಮನೋಜ್ ಸಾನೆ ಹೇಳಿದರೆ, ಮತ್ತೊಮ್ಮೆ ಅವಳು ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಹೀಗಾಗಿ ಗಾಬರಿಯಿಂದ ದೇಹ ವಿಲೇವಾರಿ ಮಾಡಲು ಕತ್ತರಿಸಿರುವುದಾಗಿ ಹೇಳಿದ್ದಾನೆ. ಇನ್ನೊಮ್ಮೆ ಆಕೆ ತನಗೆ ಮಗಳಿದ್ದಂತೆ ಎಂದೂ ಹೇಳುತ್ತಾನೆ. ಇನ್ನೊಂದು ಸಲ ತಾನು ಎಚ್ಐವಿ ಪೀಡಿತ ಎಂದೂ ಕಥೆ ಕಟ್ಟುತ್ತಾನೆ.
ಇದನ್ನೂ ಓದಿ: Borewell Tragedy: ಬೋರ್ವೆಲ್ಗೆ ಬಿದ್ದ ಕಂದಮ್ಮ, 50 ಗಂಟೆಗಳ ರಕ್ಷಣಾ ಕಾರ್ಯದ ಬಳಿಕ ಶವವಾಗಿ ಪತ್ತೆ!
ಗರಗಸದಿಂದ ದೇಹ ಕುಯ್ದಿದ್ದ ಕಿರಾತಕ!
ಕೊಲೆ ಮಾಡಿದ ನಂತರ ಆರೋಪಿಯು ತನ್ನ ಗೆಳತಿಯ ದೇಹವನ್ನು ಕತ್ತರಿಸಲು ಡೀಸೆಲ್ ಚಾಲಿತ ವಿದ್ಯುತ್ ಗರಗಸವನ್ನು ಖರೀದಿಸಿದ್ದಾನೆ. ಅದರಿಂದ ಆಕೆಯ ದೇಹವನ್ನು ತುಂಡರಿಸಿ ಬೇಯಿಸಿದ್ದಾನೆ. ಶ್ರದ್ಧಾ ವಾಲ್ಕರ್ ಪ್ರಕರಣದಿಂದ ತನಗೆ ಈ ಐಡಿಯಾ ಸಿಕ್ಕಿದೆ ಎಂದು ಪೊಲೀಸರಿಗೆ ಅವನು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಫ್ಲ್ಯಾಟ್ಗೆ ಹೋಗೋವಾಗ ಕಪ್ಪು ಕಸದ ಚೀಲಗಳು ಫ್ಲಾಟ್ನಾದ್ಯಂತ ಹರಡಿಕೊಂಡಿತ್ತು. ದೇಹ ವಾಸನೆ ಬರಬಹುದೆಂಬ ಭಯದಿಂದ ರೂಮ್ ಫ್ರೆಶ್ನರ್ ಸಿಂಪಡಿಸಿ ದೇಹದ ಭಾಗಗಳನ್ನು ಕುದಿಸಿ ಹುರಿಯಲು ಯತ್ನಿಸಿದ್ದ ಆರೋಪಿ ಇದರಿಂದ ವಿಲೇವಾರಿ ಸುಲಭವಾಗುತ್ತದೆ ಎಂದು ನಂಬಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಈ ದುರ್ನಾತಕ್ಕೆ ಸತ್ತ ಇಲಿಯೇ ಕಾರಣ ಎಂದು ನೆರೆಹೊರೆಯವರು ಭಾವಿಸಿದ್ದರು. ಮಂಗಳವಾರ ಬೆಳಗಿನ ವೇಳೆಗೆ ದುರ್ನಾತ ಹೆಚ್ಚಾದ ಕಾರಣ ಮನೋಜ್ ಸೇನ್ಗೆ ನೆರೆಹೊರೆಯವರು ಲಿಫ್ಟ್ನಲ್ಲಿ ದೂರು ನೀಡಿದರು. ಆತ ಕೆಲಸದಿಂದ ಹಿಂತಿರುಗಿದ ನಂತರ ಪರಿಶೀಲಿಸುವುದಾಗಿ ಹೇಳಿದ್ದ. ಸಂಜೆ ವೇಳೆಗೆ ಅವನ ನೆರೆಹೊರೆಯವರಾದ ಸೋಮೇಶ್ ಶ್ರೀವಾಸ್ತವ್ ಬಾಗಿಲು ಬಡಿದ ನಂತರ ನಿಜ ವಿಷಯ ತಿಳಿದು ಬಂದಿದೆ. ಆಗ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ