ನವ ದೆಹಲಿ (ಜನವರಿ 30); "ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ ಅಪ್ರಾಪ್ತ ವಯಸ್ಕಳ ಸ್ತನಗಳನ್ನು ಮುಟ್ಟುವುದು ಮತ್ತು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಕೈಗಳನ್ನು ಹಿಡಿದಿಟ್ಟುಕೊಳ್ಳುವ ಕ್ರಿಯೆಗಳು, ಅಥವಾ ಅವಳ ಎದುರು ಪ್ಯಾಂಟ್ ಜಿಪ್ ತೆರೆಯುವುದು ‘ಲೈಂಗಿಕ ದೌರ್ಜನ್ಯವಲ್ಲ" ಎಂಬ ಎರಡು ವಿವಾದಾತ್ಮಕ ತೀರ್ಪನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನೀಡಿತ್ತು. ಈ ತೀರ್ಪಿನಿಂದಾಗಿ ಸಾಮಾನ್ಯ ಜನ ಸಹ ನ್ಯಾಯಾಲಯಗಳ ತೀರ್ಪಿನ ಕುರಿತು ಅಪಹಾಸ್ಯ ಮತ್ತು ಟೀಕೆ ಮಾಡುವಂತಾಗಿತ್ತು. ಸಾಮಾಜಿಕ ವಲಯದಲ್ಲಿ ವ್ಯಾಪಕ ಚರ್ಚೆಗಳೂ ಶುರುವಾಗಿತ್ತು. ಇದರ ಬೆನ್ನಿಗೆ ಈ ತೀರ್ಪಿನ ವಿರುದ್ಧದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅರ್ಜಿಯ ಅನ್ವಯ ಆದೇಶವನ್ನು ಬುಧವಾರವೇ ತಡೆಹಿಡಿದಿದ್ದ ಸುಪ್ರೀಂ ಕೋರ್ಟ್, ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಅವರ ಶಾಶ್ವತ ಸ್ಥಾನಮಾನದ ದೃಢೀಕರಣದ ಕುರಿತು ತಾನು ಮಾಡಿದ್ದ ಶಿಫಾರಸನ್ನು ಇಂದು ಹಿಂತೆಗೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಕೊಲೆಜಿಯಂ, "ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ಗಣದೇವಾಲಾ ಪೋಕ್ಸೋ ಕಾಯ್ದೆಯ ಅಡಿ ನೀಡಿರುವ ತೀರ್ಪುಗಳು ಗೊಂದಲದ ಮತ್ತು ಅಪಾಯಕಾರಿ ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ. ಈ ನ್ಯಾಯಾಧೀಶೆಯ ವಿರುದ್ಧ ನಮಗೆ ವ್ಯಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರಿಗೆ ಇನ್ನೂ ಅನುಭವದ ಅಗತ್ಯವಿದೆ.
ಅವರು ವಕೀಲರಾಗಿದ್ದಾಗ ಇಂತಹ ಪ್ರಕರಣಗಳನ್ನು ಎದುರಿಸಿರಬಹುದು. ಆದರೆ, ವಕೀಲಿಕೆಗೂ ನ್ಯಾಯಾಧೀಶ ಸ್ಥಾನಮಾನಕ್ಕೂ ವ್ಯತ್ಯಾಸವಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ 'ಹೆಚ್ಚಿನ ಮಾನ್ಯತೆ' ನೀಡುವ ಅಗತ್ಯವನ್ನು ಆಧರಿಸಿ ಶಾಶ್ವತ ಸ್ಥಾನಮಾನವನ್ನು ನೀಡದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಉನ್ನತ ನ್ಯಾಯಾಲಯದ ಮೂಲಗಳು ತಿಳಿಸಿವೆ.
ಹೈಕೋರ್ಟ್ಗಳಿಗೆ ಖಾಯಂ ನ್ಯಾಯಾಧೀಶರನ್ನು ನೇಮಿಸುವ ಅಥವಾ ನ್ಯಾಯಾಧೀಶರನ್ನು ಶಾಶ್ವತಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ಕೊಲೆಜಿಯಂ ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳಿಸುತ್ತದೆ, ನಂತರ ಕೇಂದ್ರ ಅದನ್ನು ಅನುಮೋದಿಸುತ್ತದೆ. ಕೆಲವೊಮ್ಮೆ, ಶಿಫಾರಸುಗಳನ್ನು ಹಿಂದಿರುಗಿಸುವ ಅಧಿಕಾರ ಕೇಂದ್ರಕ್ಕೆ ಇರುತ್ತದೆ. ಅದೇ ರೀತಿ ತಾನು ಮಾಡಿದ ಶಿಫಾರಸನ್ನು ಸುಪ್ರೀಂ ಕೋರ್ಟ್ ಯಾವುದೇ ಸಂದರ್ಭದಲ್ಲಿ ಹಿಂಪಡೆಯಬಹುದು.
ಇದನ್ನೂ ಓದಿ: Drugs Mafia: ಮತ್ತೆ ನಾಲ್ವರು ಡ್ರಗ್ ಪೆಡ್ಲರ್ಗಳ ಬಂಧನ, ಅಪಾರ ಪ್ರಮಾಣದ ಮಾದಕ ವಸ್ತುಗಳ ವಶ!
ಅದರಂತೆ ಜನವರಿ 20 ರಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದ ಖಾಯಂ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ಹೆಸರನ್ನು ದೃಢಿಕರಿಸಲು ಸುಪ್ರೀಂ ಕೋರ್ಟ್ ಕೊಲೆಜಿಯಂ ಶಿಫಾರಸು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ