• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Congress Protest: ಅಗ್ನಿಪಥ್ & ರಾಹುಲ್ ಗಾಂಧಿ ED ವಿಚಾರಣೆ ವಿರೋಧಿಸಿ ಇಂದೂ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

Congress Protest: ಅಗ್ನಿಪಥ್ & ರಾಹುಲ್ ಗಾಂಧಿ ED ವಿಚಾರಣೆ ವಿರೋಧಿಸಿ ಇಂದೂ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ರಾಹುಲ್​ ಗಾಂಧಿ

ರಾಹುಲ್​ ಗಾಂಧಿ

ರಾಜ್ಯಸಭೆಯ ಪ್ರತಿಪಕ್ಷದ ನಾಯಕ  ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ನಿಯೋಗವು ಸಂಸದರಿಗೆ ಪ್ರತಿಭಟನೆ ಮಾಡಲು ಬಿಡದ ಪೊಲೀಸರ ವರ್ತನೆ ಹಾಗೂ ಪೊಲೀಸರು ಎಸಗಿರುವ ದೌರ್ಜನ್ಯದ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲಿದೆ.

ಮುಂದೆ ಓದಿ ...
  • Share this:

ನವದೆಹಲಿ, ಜೂ. 20: ಕೇಂದ್ರ ಸರ್ಕಾರವು ಹೊಸದಾಗಿ ಮಿಲಿಟರಿ ನೇಮಕಾತಿಗಾಗಿ ರೂಪಿಸಿರುವ ಅಗ್ನಿಪಥ (Agneepath) ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆಯುತ್ತಿದೆ. ಈ ಬಗ್ಗೆ ನಿನ್ನೆಯಿಂದ (ಜೂನ್ 19) ದೆಹಲಿಯ ಜಂತರ್ ಮಂತರ್ ನಲ್ಲಿ (Janthar Mantar) ಸತ್ಯಾಗ್ರಹ ಹಮ್ಮಿಕೊಂಡಿರುವ ಕಾಂಗ್ರೆಸ್ ಇಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಇನ್ನೊಂದೆಡೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಜಾರಿ ನಿರ್ದೇಶನಾಲಯದ (Enforcement Directorate) ವಿಚಾರಣೆ ವಿರೋಧಿಸಿ ಕೂಡ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.


ಅಗ್ನಿಪಥ್ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ
ಯುವಕರ ಪಾಲಿಗೆ ಕರಾಳ ಶಾಸನವಾಗಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ನಿರುದ್ಯೋಗಿ ಯುವಕರು, ಪೂರ್ಣಾವಧಿಗೆ ಸೇನೆ ಸೇರಬೇಕೆಂದು ಕನಸು ಕಂಡಿದ್ದ ಯುವಕರು ಮತ್ತವರ ಕುಟುಂಬದವರು ಕಳೆದ ನಾಲ್ಕೈದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಕೆಲವು ಕಡೆ ಹಿಂಸಾಚಾರ, ಸಾವು, ನೋವು, ಸಾರ್ವಜನಿಕ ಆಸ್ತಿಗಳ ನಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಯುವಕರ ಅಳಲಿಗೆ ದನಿಗೂಡಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಶಾಂತಿಯುತವಾದ ಸತ್ಯಾಗ್ರಹ ನಡೆಸಿತ್ತು. ಕಾಂಗ್ರೆಸ್ ಪಕ್ಷದ ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯರು ಮತ್ತು ಎಐಸಿಸಿ ಪದಾಧಿಕಾರಿಗಳು ಭಾಗವಹಿಸಿದ್ದರು.


ಜಂತರ್ ಮಂತರ್ ನಲ್ಲಿ ಸತ್ಯಾಗ್ರಹ
ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಸತ್ಯಾಗ್ರಹ ಆರಂಭವಾಗಲಿದೆ. ಇಂದಿನ ಸತ್ಯಾಗ್ರಹದಲ್ಲಿ ಎಲ್ಲ ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.‌ ಅಲ್ಲದೆ ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುವಂತೆಯೂ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಕರೆಕೊಟ್ಟಿದೆ. ಅಗ್ನಿಪಥ್ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆಯೂ ಘೋಷಿಸಿದೆ.


ಇಂದು ರಾಹುಲ್ ಗಾಂಧಿ ಇಡಿ ವಿಚಾರಣೆ
ರಾಹುಲ್ ಗಾಂಧಿ ಅವರು ಜೂನ್ 13ರಿಂದ ನಿರಂತರವಾಗಿ 3 ದಿನ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. 3 ದಿನದ ಬಳಿಕ ಜೂನ್ 16ರಂದು ವಿಚಾರಣೆ ಇರಲಿಲ್ಲ.‌ ಜೂನ್ 17ರಂದು ಮತ್ತೆ ವಿಚಾರಣೆಗೆ ಬರುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ಅವರು ತಮ್ಮ ತಾಯಿ, ಎಐಸಿಸಿ ಅಧ್ಯಕ್ಷೆ‌ ಸೋನಿಯಾ ಗಾಂಧಿ ಅವರು ದೆಹಲಿಯ ಗಂಗಾರಾಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನೋಡಬೇಕಿದೆ. ಅದಲ್ಲದೆ ಜೂನ್ ‌19ರಂದು ತಮ್ಮ ಹುಟ್ಟುಹಬ್ಬದ ಆಚರಣೆ ಇದೆ.‌ ಈ‌ ಹಿನ್ನೆಲೆಯಲ್ಲಿ ಜೂನ್ 17ರ ವಿಚಾರಣೆಗೆ ಬರಲು ಸಾಧ್ಯವಿಲ್ಲ. ‌ಜೂನ್ 20ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದರು. ಅದರಂತೆ ರಾಹುಲ್ ಗಾಂಧಿ ಅವರು ಇಂದು ಬೆಳಿಗ್ಗೆ 11ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.


ಇದನ್ನೂ ಓದಿ: Agnipath ಹಿಂಸಾತ್ಮಕ ಹೋರಾಟದಲ್ಲಿ ಭಾಗಿಯಾದವರಿಗೆ ಸೇನೆ ಸೇರಲು ಅವಕಾಶವಿಲ್ಲ: ಲೆಫ್ಟಿನೆಂಟ್ ಜನರಲ್


ಮೋತಿಲಾಲ್ ಓರಾ ಬಗೆಗಿನ‌ ಹೇಳಿಕೆ ಆಧರಿಸಿ ವಿಚಾರಣೆ
ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ವಿಚಾರಣೆ ವೇಳೆ ಇಂದು ಮೋತಿಲಾಲ್ ಓರಾ ಬಗೆಗಿನ‌ ಹೇಳಿಕೆ ಆಧರಿಸಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕಳೆದ ವಿಚಾರಣೆ ವೇಳೆ ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಆರ್ಥಿಕ ವ್ಯವಹಾರವನ್ನು ಎಐಸಿಸಿಯ ಖಜಾಂಚಿಯಾಗಿದ್ದ ಹಿರಿಯ ನಾಯಕ  ಮೋತಿಲಾಲ್ ಓರಾ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದರು. ತಮಗೆ ಆರ್ಥಿಕ ವ್ಯವಹಾರದ ಬಗ್ಗೆ ಗೊತ್ತಿಲ್ಲ ಎಂದಿದ್ದರು. ಈ ಬಗ್ಗೆ ಇಂದು ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.


ಇಡಿ ವಿಚಾರಣೆ ವಿರೋಧಿಸಿ ಇಂದು ಕೂಡ ಪ್ರತಿಭಟನೆ
ರಾಹುಲ್ ಗಾಂಧಿ ಅವರನ್ನು ದುರುದ್ದೇಶ ಪೂರ್ವಕವಾಗಿ ಇಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಇಂದು ಕೂಡ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇದಲ್ಲದೆ ದೇಶ್ ಬೇರೆ ಬೇರೆ ಭಾಗಗಳಲ್ಲಿ ಕೂಡ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

top videos


    ರಾಷ್ಟ್ರಪತಿಗೆ ದೂರು
    ಕಳೆದ ವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಸದರೊಂದಿಗೆ ಪೊಲೀಸರು ಅನುಚಿತ ವರ್ತನೆ ತೋರಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾಗಲಿದೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ  ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ನಿಯೋಗವು ಸಂಸದರಿಗೆ ಪ್ರತಿಭಟನೆ ಮಾಡಲು ಬಿಡದ ಪೊಲೀಸರ ವರ್ತನೆ ಹಾಗೂ ಪೊಲೀಸರು ಎಸಗಿರುವ ದೌರ್ಜನ್ಯದ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲಿದೆ.

    First published: