ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಈ ಮೂಲಕ ಚಂದ್ರನ ಅಧ್ಯಯನ ಮಾಡುವ ಉದ್ದೇಶ ಕೊನೆಗೂ ಸಫಲವಾಗಿಲ್ಲ.
ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಆಗಮಿಸಿದ್ದರು. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವುದರಲ್ಲಿದ್ದರು. ಆದರೆ, ಈಗ ಚಂದ್ರಯಾನ ಕೊನೆಯ ಕ್ಷಣದಲ್ಲಿ ವಿಫಲವಾಗಿರುವುದು ಬೇಸರ ಮೂಡಿಸಿದ್ದರೂ ಇಸ್ರೋದ ಪ್ರಯತ್ನಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನಿಂದ 2.1 ಕಿ.ಮೀ ದೂರದಲ್ಲಿರುವಾಗ ಎಲ್ಲವೂ ಸಾಮಾನ್ಯವಾಗಿತ್ತು. ಆನಂತರ ಲ್ಯಾಂಡರ್ ಹಾಗೂ ಭೂಮಿ ನಡುವೆ ಇದ್ದ ಸಂಪರ್ಕ ಕಡಿತಗೊಂಡಿದೆ. ಇದರ ದತ್ತಾಂಶ ವಿಶ್ಲೇಷಣೆ ಮಾಡಬೇಕಿದೆ ಎಂದು ಇಸ್ರೋ ಮುಂಜಾನೆ 2.15ಕ್ಕೆ ಹೇಳಿಕೆ ನೀಡಿತ್ತು. ಈಗ ಯೋಜನೆ ಯಶಸ್ವಿಯಾಗಿಲ್ಲ ಎಂದು ಇಸ್ರೋ ಅಧಿಕೃತವಾಗಿ ಘೋಷಿಸಿದೆ.
ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುವುದರಲ್ಲಿತ್ತು. ಆದರೆ, ಈ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ.
ಇದನ್ನೂ ಓದಿ: ಚಂದ್ರನ ಸ್ಪರ್ಶಕ್ಕೆ ಕೆಲವೇ ಗಂಟೆಗಳು ಬಾಕಿ; ಜಾಗತಿಕ ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಇಸ್ರೋ ಸಜ್ಜು
ಚಂದ್ರಯಾನ 2 ನಡೆದು ಬಂದ ಹಾದಿ:
ಜುಲೈ 15: ಚಂದ್ರಯಾನ ಯೋಜನೆ ಹಾರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಕ್ಕೆ ಯೋಜನೆ ಮುಂದೂಡಲ್ಪಟ್ಟಿತ್ತು.
ಜುಲೈ 22: ಜು.22ರಂದು ಮಧ್ಯಾಹ್ನ 2:43ಕ್ಕೆ ಚಂದ್ರಯಾನ್-2 ಗಗನನೌಕೆ ಹೊತ್ತ ಜಿಎಸ್ಎಲ್ವಿ-MkIII-M1 ರಾಕೆಟ್ ನಭಕ್ಕೆ ಹಾರಿತ್ತು. ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಪಗ್ರಹ ಹಾರಿತ್ತು.
ಆಗಸ್ಟ್ 20: ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ 2 ನೌಕೆಯನ್ನು ಆ.22ರಂದು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತ್ತು. ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿತ್ತು. ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದರು.
ಆಗಸ್ಟ್ 22: ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ ಚಂದ್ರಯಾನ-2 ಉಪಗ್ರಹ ಆ.22ರಂದು ಮೊದಲ ಬಾರಿ ಚಂದ್ರನ ಚಿತ್ರಣವನ್ನು ಸೆರೆಹಿಡಿದು ಕಳುಹಿಸಿತ್ತು. ಚಂದ್ರನಿಂದ 2,650 ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು "ವಿಕ್ರಮ್ ಲ್ಯಾಂಡರ್" ಸೆರೆಹಿಡಿದಿತ್ತು.
ಆಗಸ್ಟ್ 31: ಚಂದ್ರನ ನಾಲ್ಕನೇ ಕಕ್ಷೆಗೇರುವಲ್ಲಿಯೂ ಚಂದ್ರಯಾನ-2 ನೌಕೆ ಆ.31ರಂದು ಯಶಸ್ವಿಯಾಗಿತ್ತು.
ಸೆಪ್ಟೆಂಬರ್ 7: ಚಂದ್ರಯಾನದ ಲ್ಯಾಂಡರ್, ಸೆಪ್ಟೆಂಬರ್ 7ರ ಮಧ್ಯರಾತ್ರಿ ಸುಮಾರು 1:30ರಿಂದ 2:30ರ ನಡುವೆ ಇಳಿಯಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಯೋಜನೆ ವಿಫಲವಾಗಿದೆ.
2007ರಲ್ಲಿ ಯೋಜನೆಗೆ ಸಿಕ್ಕಿತ್ತು ಅನುಮೋದನೆ:
ಭಾರತ ಹಾಗೂ ರಷ್ಯಾ 2007ರಲ್ಲಿ ಚಂದ್ರಯಾನ 2 ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್ ಹಾಗೂ ರೋವರ್ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾ ಲ್ಯಾಂಡರ್ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. ಆಗಸ್ಟ್ 2009ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ರಷ್ಯಾ ಲ್ಯಾಂಡರ್ ನೀಡಲು ವಿಳಂಬ ಮಾಡಿದ್ದರಿಂದ 2013ಕ್ಕೆ ಯೋಜನೆಯನ್ನು ಮುಂದೂಡಲಾಗಿತ್ತು. ನಂತರ 2016ಕ್ಕೆ ಯೋಜನೆಯನ್ನು ನಿಗದಿ ಮಾಡಲಾಗಿತ್ತು. ಕೊನೆಗೆ ರಷ್ಯಾ ಲ್ಯಾಂಡರ್ ನೀಡಲು ವಿಫಲವಾದ್ದರಿಂದ ಭಾರತವೇ ಅದನ್ನು ಸಿದ್ಧಪಡಿಸಿತ್ತು.
ಯೋಜನೆಯ ವೆಚ್ಛವೆಷ್ಟು?:
ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಛ 978 ಕೋಟಿ ರೂಪಾಯಿ. ಅಂದರೆ ಹಾಲಿವುಡ್ನ 'ಅವೆಂಜರ್ ಎಂಡ್ಗೇಮ್ ' ಸಿನಿಮಾ ಬಜೆಟ್ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. 'ಅವೆಂಜರ್ ಎಂಡ್ಗೇಮ್ ' ಸಿನಿಮಾಗೆ 2400 ಕೋಟಿ ರೂ. ವೆಚ್ಛ ಮಾಡಲಾಗಿತ್ತು. 386 ಕೋಟಿ ರೂಪಾಯಿ ಬಜೆಟ್ನಲ್ಲಿ ಚಂದ್ರಯಾನ 1 ಯೋಜನೆ ಸಿದ್ಧಗೊಂಡಿತ್ತು.
ದಾಖಲೆ ಬರೆಯುವ ಕನಸು ನುಚ್ಚು ನೂರು:
ಈವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುವುದರಲ್ಲಿತ್ತು. ಈ ಯೋಜನೆ ಯಶಸ್ವಿಯಾಗಿದ್ದರೆ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ