ಚಾಮರಾಜನಗರ (ಅ. 21): ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಅರೆಯಲು ಮೊದಲ ಆದ್ಯತೆ ನೀಡಬೇಕೆಂಬ ಜಿಲ್ಲಾಧಿಕಾರಿಯ ಆದೇಶಕ್ಕೆ ಕಿಮ್ಮತ್ತಿಲ್ಲದಂತೆ ಇಲ್ಲಿನ ಕುಂತೂರು ಬಣ್ಣಾರಿ ಸಕ್ಕರೆ ಕಾರ್ಖಾನೆ ನಿರ್ಲಕ್ಷ್ಯ ವಹಿಸಿದೆ ಇದರಿಂದಾಗಿ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಕ್ಕರೆ ಕಾರ್ಖಾನೆಯು ರೈತರೊಡನೆ ಮಾಡಿಕೊಂಡ ಕರಾರಿನ ಪ್ರಕಾರ ಕಬ್ಬು ನಾಟಿ ಮಾಡಿದ ದಿನದಿಂದ 11ನೇ ತಿಂಗಳಿನಿಂದ 14ನೇ ತಿಂಗಳು ಅವಧಿ ಮುಗಿಯುವುದರೊಳಗೆ ಕಟಾವು ಮಾಡಬೇಕು. ಆದರೆ ಜಿಲ್ಲೆಯಲ್ಲಿ 16-17 ತಿಂಗಳಾದರು ಕಬ್ಬು ಕಟಾವು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆ ಮೂಲಕ ಸಕ್ಕರೆ ಕಾರ್ಖಾನೆಗಳು ಜಿಲ್ಲಾಧಿಕಾರಿಯ ಆದೇಶವನ್ನು ಗಾಳಿಗೆ ತೂರಲಾಗಿದೆ.
ಜಿಲ್ಲೆಯಲ್ಲಿನ ಕಬ್ಬುಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ತಿಂಗಳು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ರೈತ ಮುಖಂಡರು ಹಾಗೂ ಕುಂತೂರು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಸಭೆ ಕರೆದಿದ್ದರು. ಈ ವೇಳೆ ಐದು ಸಾವಿರ ಹೆಕ್ಟೇರ್ ಗಿಂತಲು ಹೆಚ್ಚು ಪ್ರದೇಶದ ಕಬ್ಬು 17 ತಿಂಗಳಾದರು ಕಟಾವು ಆಗಿಲ್ಲ ಎಂದು ರೈತರು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದರು.
ಈ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಅವಧಿ ಮೀರುತ್ತಿರುವ ಕಬ್ಬು ಕಟಾವು ಮಾಡಲು ಮೊದಲ ಆದ್ಯತೆ ನೀಡಬೇಕು. ನಂತರವಷ್ಟೇ ಸಾಮರ್ಥ್ಯಕ್ಕೆ ಅನುಗುಣವಾಗಿ ಇತರ ಜಿಲ್ಲೆಗಳ ಕಬ್ಬು ಅರೆಯಬಹುದು ಎಂದು ಕಾರ್ಖಾನೆಯ ಆಡಳಿತಕ್ಕೆ ನಿರ್ದೇಶನ ನೀಡಿದ್ದರು.
ಅದರಂತೆ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಕಬ್ಬನ್ನು ಅರೆಯಲು ಶುರು ಮಾಡಿದೆ. ಮಂಡ್ಯ, ಮೈಸೂರು ಜಿಲ್ಲೆಯ ರೈತರ ಕಬ್ಬು ಕಟಾವು ಮಾಡಿ ಒಣಗಿ ಹೋಗುತ್ತಿದ್ದು, ತಮ್ಮ ಕಬ್ಬನ್ನು ಸಕ್ಕರೆ ಕಾರ್ಖಾನೆ ತೆಗೆದುಕೊಂಡು ಹೋಗದೆ ನಿರ್ಲಕ್ಷ್ಯ ವಹಿಸಿದೆ ಎಂದು ಅಲ್ಲಿನ ರೈತರು ದೂರಿದ್ದರು. ಇದಾದ ಬಳಿಕ ಮೈಸೂರು ,ಮಂಡ್ಯ ಸೇರಿದಂತೆ ಹೊರಜಿಲ್ಲೆಗಳಿಂದ 11-12 ತಿಂಗಳ ಕಬ್ಬನ್ನು ಕಡಿಮೆ ಬೆಲೆಗೆ ಖರೀದಿಸಿದ ಸಕ್ಕರೆ ಕಾರ್ಖಾನೆಗಳು ಬಳಿಕ ಜಿಲ್ಲೆಯ ರೈತರ ಕಬ್ಬನ್ನು ನಿರ್ಲಕ್ಷ್ಯಿಸಿದ್ದಾರೆ. ಇದರಿಂದ ಈ ಭಾಗದಲ್ಲಿ ಬೆಳೆದುನಿಂತಿರುವ ಕಬ್ಬು ಒಣಗಿ ಹೋಗುತ್ತಿದೆ ಎಂದು ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.
ಇದನ್ನು ಓದಿ: ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳು
ಸಕ್ಕರೆ ಕಾರ್ಖಾನೆಯ ಈ ಧೋರಣೆಯಿಂದ ಒಂದೆಡೆ ಕಬ್ಬಿನ ಇಳುವರಿ ನಷ್ಟವಾಗಲಿದೆ, ಇನ್ನೊಂದೆಡೆ ಸಕ್ಕರೆ ಇಳುವರಿ ಕಡಿಮೆಯಾಗಿ ಬೆಲೆಯು ಕಡಿಮೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ