ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ (Sardar Vallabhbhai Patel) ಅವರ ಜನ್ಮ ದಿನದ (Birthday) ಪ್ರಯುಕ್ತ ನಡೆದಿದ್ದ ಏಕತಾ ದಿವಸ (Ekta Diwas) ಸಂದರ್ಭದಲ್ಲಿ ಗೀತೆ, ಲಾಲಿಹಾಡು, ರಂಗೋಲಿ ಸ್ಪರ್ಧೆ ನಡೆಸಲಾಗಿತ್ತು. ಚಾಮರಾಜನಗರ (Chamarajanagar) ಜಿಲ್ಲೆಯ ಬಿಎಂ ಮಂಜುನಾಥ್ (BM Manjunath) ಲಾಲಿ ಹಾಡು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಎಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ 98ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೋದಿ, ಮಂಜುನಾಥ್ ಅವರ ಮಲಗು ಕಂದಾ ಹಾಡಿನ ಕೆಲವು ಸಾಲುಗಳನ್ನು ಹಾಡಿದ್ದು ವಿಶೇಷವಾಗಿತ್ತು.
ಏಕತಾ ದಿವಸದ ಅಂಗವಾಗಿ ಭಕ್ತಿಗೀತೆ, ಲಾಲಿಹಾಡು ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ದೇಶದಾದ್ಯಂತ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಲಾಲಿ ಹಾಡು ವಿಭಾಗದಲ್ಲಿ ಮಂಜುನಾಥ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ಸುಭಾಷ್ ಚಂದ್ರ ಬೋಸ್ ಚಿತ್ರ ಬಿಡಿಸಿದ್ದ ಪಂಜಾಬ್ನ ಕಮಲ್ಸಿಂಗ್ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ವಿಜಯದುರ್ಗಾ ಎಂಬುವವರು ಪ್ರಥಮ ಸ್ಥಾನಪಡೆದುಕೊಂಡಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ಸಂಪ್ರದಾಯಗಳನ್ನು ಜೀವಂತವಾಗಿಡಬೇಕು
ಕಲೆ, ಸಂಪ್ರದಾಯಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ಜೀವಂತವಾಗಿ ಮತ್ತು ಉತ್ತಮವಾಗಿ ಇಡುವುದು ಮುಖ್ಯವಾಗಿದೆ. " ನಮ್ಮ ದೇಶದಲ್ಲಿ ಕಣ್ಮರೆಯಾಗಿ, ಜನರ ಮನಸ್ಸು ಮತ್ತು ಹೃದಯದಿಂದ ದೂರ ಸರಿದಿರುವ ಇಂತಹ ಅನೇಕ ಶ್ರೇಷ್ಠ ಸಂಪ್ರದಾಯಗಳಿವೆ. ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ 'ಮನ್ ಕಿ ಬಾತ್' ಇವುಗಳ ಬಗ್ಗೆ ಚರ್ಚಿಸುತ್ತದೆ. ಅದಕ್ಕಿಂತ ಉತ್ತಮವಾದ ವೇದಿಕೆ ಯಾವುದಿದೆ?'' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಂತಸ ವ್ಯಕ್ತಪಡಿಸಿದ ಮಂಜುನಾಥ್
ವಿಮಾ ಸಲಹೆಗಾರರಾಗಿರುವ 59 ವರ್ಷದ ಬಿಎಂ ಮಂಜುನಾಥ್ ಮೂಲತಃ ಕೊಳ್ಳೆಗಾಲ ತಾಲ್ಲೂಕಿನ ಬಾಳಗುಣಸೆ ಗ್ರಾಮದವರು. ಇಂದು ತಾವೂ ಬರೆದಿದ್ದ ಗೀತೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ಬಹುಮಾನ ಬಂದಿರುವುದದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅದನ್ನು ಘೋಷಣೆ ಮಾಡಿರುವುದಕ್ಕೆ ಖುಷಿ ನೀಡಿದೆ ಎಂದಿದ್ದಾರೆ.
ಡಿಜಿಟಲ್ ಇಂಡಿಯಾ ವ್ಯವಸ್ಥೆ ಬಗ್ಗೆ ಮಾತು
ಇದೇ ಸಂದರ್ಭದಲ್ಲಿ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಡಿಜಿಟಲ್ ಇಂಡಿಯಾದ ಶಕ್ತಿ ದೇಶದಲ್ಲಿ ಮೂಲೆ ಮೂಲೆಯನ್ನು ತಲುಪುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. ಇ-ಸಂಜೀವಿನಿ ಆ್ಯಪ್ ಹೆಚ್ಚು ಪ್ರಸಿದ್ಧ ಪಡೆಯುತ್ತಿದೆ. ಈ ಆಪ್ ಮೂಲಕ ಟೆಲಿ ಕನ್ಸಲ್ಟೇಶನ್ ಅಂದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಿಮ್ಮ ಅನಾರೋಗ್ಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಬಹುದಾಗಿದೆ. ಇಲ್ಲಿಯವರೆಗೆ ಸುಮಾರು 10 ಕೋಟಿ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ರೋಗಿಯ ಮತ್ತು ವೈದ್ಯರ ನಡುವಿನ ಈ ಅದ್ಭುತ ಬಾಂಧವ್ಯ ಒಂದು ದೊಡ್ಡ ಸಾಧನೆಯಾಗಿದೆ. ಈ ಸಾಧನೆಗಾಗಿ ನಾನು ಈ ಸೌಲಭ್ಯವನ್ನು ಪಡೆದ ಎಲ್ಲಾ ವೈದ್ಯರು ಮತ್ತು ರೋಗಿಗಳನ್ನು ಅಭಿನಂದಿಸುತ್ತೇನೆ ಎಂದು ಮೋದಿ ತಿಳಿಸಿದರು.
ವಿದೇಶಿಯರನ್ನು ಆಕರ್ಷಿಸಿದ ಯುಪಿಐ
ಮನ್ ಕಿ ಬಾತ್ನಲ್ಲಿ ಡಿಜಿಟಲ್ ಇಂಡಿಯಾ ಪ್ರಗತಿಯ ಮೋದಿ ಶ್ಲಾಘಿಸಿದರು. ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಯುಪಿಐ ವ್ಯವಸ್ಥೆ ಕಡೆಗೆ ಆಕರ್ಷಿತವಾಗಿವೆ. ಕೆಲವೇ ದಿನಗಳ ಹಿಂದೆ, ಭಾರತ ಮತ್ತು ಸಿಂಗಾಪುರದ ನಡುವೆ ಯಪಿಐ ಪೇ ಲಿಂಕ್ ಪ್ರಾರಂಭಿಸಲಾಗಿದೆ. ಈಗ, ಸಿಂಗಾಪುರ್ ಮತ್ತು ಭಾರತದ ಜನರು ತಮ್ಮ ಮೊಬೈಲ್ ಫೋನ್ಗಳಿಂದ ಹಣವನ್ನು ವರ್ಗಾಯಿಸಬಬಹುದು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದ ಹೂಗ್ಲಿಯ ತ್ರಿಬೇನಿ ಕುಂಭ ಮಹೋತ್ಸವದ ಕುರಿತು ಮಾತನಾಡಿದರು. ಬಳಿಕ, ಸ್ವಚ್ಛ ಭಾರತ್ ಮಿಷನ್ ಗಾಗಿ ದುಡಿಯುತ್ತಿರುವ ಹರಿಯಾಣ ಗ್ರಾಮದ ಯುವಕರನ್ನು ಪ್ರಧಾನಿ ಶ್ಲಾಘಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ