ಭಾರತೀಯ ಪರಂಪರೆಯಲ್ಲಿ (Indian Heritage) ಹಬ್ಬಗಳು ಪ್ರಕೃತಿ ಮತ್ತು ಮನುಷ್ಯನ ಸಮತೋಲನವನ್ನು ಸಾಧಿಸುವ ಅದ್ಭುತಗಳಲ್ಲಿ ಒಂದು. ಋತುಮಾನಕ್ಕೆ ಅನುಗುಣವಾಗಿ ಮನುಷ್ಯನ ದೈಹಿಕ (Physical) ಮತ್ತು ಮಾನಸಿಕ ಆರೋಗ್ಯವನ್ನು (Mental Health) ಸಮಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಸಾಮರ್ಥ್ಯಬೇಕು. ಸಾಮಾನ್ಯ ಜನರು ಅದನ್ನು ಹಬ್ಬ (Festival), ವ್ರತಗಳನ್ನು ಆಚರಿಸುವ ಮೂಲಕ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಅಧ್ಯಾತ್ಮದ ಪ್ರಪಂಚದಲ್ಲಿ ಇದೊಂದು ತಪಸ್ಸಿನಂತೆ. ಭಾರತದ ಪುಣ್ಯಭೂಮಿಯ ನಲೆಯಲ್ಲಿ ಸಾಧು, ಸಂತರು, ತಪಸ್ವಿಗಳು ಒಳಿತನ್ನು ಲೋಕಕ್ಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಟ್ಟು ನಿಟ್ಟಾದ ಆಚರಣೆ ಮಾಡಿ ದೇಹ ಮತ್ತು ಮನಸ್ಸನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇವೆ, ಕೇಳಿದ್ದೇವೆ ಈ ನಿಟ್ಟಿನಲ್ಲಿ ನವರಾತ್ರಿಯ (Chaitra Navratri) ದಿನ ಉಪಾವಸ ಮಾಡಿ ದೇವಿಯ ಕೃಪೆಗೆ ಪಾತ್ರರಾಗುವ ಆಚರಣೆಗಳು ಕೂಡ ನಮ್ಮಲ್ಲಿ ಇವೆ.
ಈ ಹಿನ್ನೆಲೆಯಲ್ಲಿ ಯುಗಾದಿಯಿಂದ (Ugadi) ಆರಂಭವಾಗಿರುವ ಚೈತ್ರ ನವರಾತ್ರಿಯ ಆರಾಧನೆಯಲ್ಲಿ ಬಹುತೇಕರು, ಜಪ ತಪ ಉಪವಾಸದಲ್ಲಿ ನಿರತರಾಗಿದ್ದಾರೆ. ಇನ್ನೇನೂ ಚೈತ್ರ ನವರಾತ್ರಿ ಮುಕ್ತಾಯದ ಹಂತದಲ್ಲಿದೆ. ಈ ಸಮಯದಲ್ಲಿ ಮಧ್ಯಪ್ರದೇಶದ ಭಕ್ತರೊಬ್ಬರು 9 ದಿನಗಳ ಕಾಲ ಕೇವಲ 2 ಚಮಚ ನೀರು ಮತ್ತು 2 ಚಮಚ ಮೊಸರು ಸೇವಿಸುವ ಮೂಲಕ ಕಠಿಣ ಉಪವಾಸದ ವ್ರತ ಕೈಗೊಂಡಿರುವ ವಿಷಯ ಅಚ್ಚರಿಗೆ ಕಾರಣವಾಗಿದೆ.
ಹೌದು, ದೇವಿ ಆದಿಶಕ್ತಿಯನ್ನು ಈ ಚೈತ್ರ ನವರಾತ್ರಿಯಲ್ಲಿ ಭಕ್ತಿಯಿಂದ ಪೂಜಿಸಿ ಆರಾಧಿಸಿದರೆ ಭಕ್ತರನ್ನು ಅನುಗ್ರಹಿಸುತ್ತಾಳೆ ಎನ್ನುವ ನಂಬಿಕೆ ಇದೆ. ಇದೇ ರೀತಿ 32 ವರ್ಷದ ವಯಸ್ಸಿನ ವ್ಯಕ್ತಿಯೊಬ್ಬರು ಕಠಿಣ ಸಂಕಲ್ಪದ ಮೂಲಕ ದೇವಿಯನ್ನು ಆರಾಧಿಸುತ್ತಿದ್ದಾರೆ. ದಿನಕ್ಕೆ ಎರಡು ಬಾರಿ ಎರಡು ಚಮಚ ನೀರು, ಎರಡು ಚಮಚ ಮೊಸರನ್ನು ಬಿಟ್ಟು ಬೇರೆ ಏನನ್ನೂ ತಿನ್ನದೇ ಕಠಿಣ ವ್ರತ ಮಾಡುತ್ತಿದ್ದಾರೆ. 9 ದಿನಗಳ ಧ್ಯಾನ ಮತ್ತು ಉಪವಾಸದಿಂದ ವ್ರತವನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಬುಂದೇಲ್ಖಂಡ್ ನಿವಾಸಿ ಕಮಲೇಶ್ ಕುರ್ಮಿ ಎನ್ನುವವರು ಚೈತ್ರ ನವರಾತ್ರಿಯ 9 ದಿನಗಳ ಉಪವಾಸ ವ್ರತವನ್ನು ಹಿಡಿಯಲು ನಿರ್ಧರಿಸಿದರು. ಇದಕ್ಕಾಗಿ ಅವರು 15 ದಿನಕ್ಕೂ ಮುನ್ನ ಸಾಕಷ್ಟು ಪೂರ್ವತಯಾರಿಯನ್ನು ಮಾಡಿಕೊಂಡಿದ್ದಾರೆ. ಪ್ರತಿದಿನ ಸ್ವಲ್ಪ ಸ್ವಲ್ಪವೇ ಆಹಾರವನ್ನು ತ್ಯಜಿಸುತ್ತಾ ಬಂದಿದ್ದಾರೆ. ನವರಾತ್ರಿ ಆರಂಭಕ್ಕೂ 5 ದಿನಗಳು ಮುನ್ನ ಆಹಾರ ಸೇವನೆ ಮತ್ತು ನೀರು ಕುಡಿಯುವುದನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಅಮವಾಸ್ಯೆ ಮತ್ತು ಚೈತ್ರ ಪ್ರತಿಪದದ ದಿನದಿಂದ ಅನ್ನ ಆಹಾರ, ನೀರು ತೊರೆದು ದೇವಿ ದುರ್ಗೆಯ ಮೂರ್ತಿಯ ಬಳಿ ಮರದ ಕುರ್ಚಿಯ ಮೇಲೆ ಧ್ಯಾನಸ್ಥರಾಗಿ ಕುಳಿತಿದ್ದಾರೆ.
ಕಮಲೇಶ್ ಅವರ ಈ ಕಠಿಣ ವ್ರತಾಚರಣೆ ಗ್ರಾಮಸ್ಥರಲ್ಲಿ ಅಚ್ಚರಿ ಮತ್ತು ಭಕ್ತಿಭಾವ ಮೂಡಿಸಿದೆ. ಕಮಲೇಶ್ ಅವರನ್ನು ನೋಡಲು ಪ್ರತಿ ನಿತ್ಯ ಗ್ರಾಮಸ್ಥರು ಅವರ ಸಹೋದರನ ಮನೆಯ ಬಳಿಗೆ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇನ್ನೂ ಅಲ್ಲಿ ಸೇರಿರುವ ಜನರೆಲ್ಲರೂ ಭಜನೆಯನ್ನೂ ಸಹ ಮಾಡುತ್ತಿದ್ದಾರೆ. ಕಮಲೇಶ್ ಅವರು ಮಧ್ಯಪ್ರದೇಶದ ದಿಯೋರಿ ಬ್ಲಾಕ್ನ ಸುನಾ ಗ್ರಾಮದವರು. ಆದರೆ ಅವರ ಸಹೋದರ ಧರ್ಮೇಂದ್ರ ವಿಶ್ವಕರ್ಮ ಅವರ ನಿವಾಸದಲ್ಲಿ ಪೂಜೆ ಮತ್ತು ಧ್ಯಾನ ಮಾಡುತ್ತಿದ್ದಾರೆ.
ಕಮಲೇಶ್ ಅವರು ಉಪವಾಸಕ್ಕೆ ಕೂರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಇಷ್ಟೇ ನಿಷ್ಠೆಯಿಂದ ಉಪವಾಸ ಕೈಗೊಂಡಿದ್ದಾರೆ. ಕಳೆದ ವರ್ಷ ದೇವಿ ಮೂರ್ತಿಯ ಸನಿಹದಲ್ಲೇ ಮಲಗಿಕೊಂಡು ಉಪವಾಸ, ಧ್ಯಾನ ಕೈಗೊಂಡಿದ್ದರು. ಕಮಲೇಶ್ ಅವರು ಶಿಲ್ಪಿಯಾಗಿರುವ ಕಾರಣ ದೇವಿ ದುರ್ಗೆಯ ಮೂರ್ತಿಯನ್ನು ಕೆತ್ತನೆ ಮಾಡಿ ಈ ಬಾರಿ ಅದರ ಮುಂದೆ ಕುಳಿತು ಧ್ಯಾನಸ್ಥರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ