ಜಾರ್ಖಂಡ್ ರಾಜ್ಯದ ನ್ಯಾಯಾಧೀಶರ ಸಾವಿನ ಬಗ್ಗೆ ಇದ್ದ ಅನುಮಾಗಳು ಬಗೆಹರಿದಿದ್ದು, ಅವರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎನ್ನುವುದಕ್ಕೆ ಸಿಸಿಟಿವಿ ಕ್ಯಾಮೆರಾ ತುಣುಕುಗಳು ಸಿಕ್ಕಿದ್ದು, ಈ ಸಾಕ್ಷ್ಯ ದೊರೆತ ಮೇಲೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ದೃಶ್ಯಾವಳಿ ಇರುವ ಟ್ವೀಟನ್ನು ಎನ್ಡಿಟಿವಿ ಪತ್ರಕರ್ತ ಮನಿಶ್ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.
ಜಾರ್ಖಂಡ್ ರಾಜ್ಯದ ಧನಬಾದ್ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್ರವರಿಗೆ ದುಷ್ಕರ್ಮಿಗಳು ಆಟೋದಿಂದ ಗುದ್ದಿದ ಸಿಸಿಟಿವಿ ವಿಡಿಯೋ ದೊರಕಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನಂತರ ಆಸ್ಪತ್ರೆಗೆ ಸೇರಿಸಿದರೂ ಸಹ ಅವರು ಬದುಕಿ ಉಳಿಯಲಿಲ್ಲ.
ಉತ್ತಮ್ ಆನಂದ್ರವರು ಬುಧವಾರ ಬೆಳಿಗ್ಗೆ 5 ಗಂಟೆಯ ಸಮಯದಲ್ಲಿ ಜಾಗಿಂಗ್ ಮಾಡುತ್ತಿದ್ದರು. ಅವರ ಮನೆಯಿಂದ ಕೇವಲ ಅರ್ಧ ಕಿ.ಮೀ ಅಂತರದಲ್ಲಿ ರಸ್ತೆ ಬದಿಯಲ್ಲಿ ಜಾಗ್ ಮಾಡುತ್ತಿರುವಾಗಿ ಹಿಂದಿನಿಂದ ಬಂದ ಆಟೋವೊಂದು ಅವರನ್ನೇ ಗುರಿಯಾಗಿಸಿಕೊಂಡು ಗುದ್ದಿದೆ. ಅವರು ಕುಸಿದುಬಿದ್ದ ನಂತರ ದುಷ್ಕರ್ಮಿಗಳು ಪರಾರಿಯಾಗಿರುವುದು ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.
https://twitter.com/manishndtv/status/1420398261072846853
ಸಿಸಿ ಟಿವಿ ಕ್ಯಾಮರ ದೃಶ್ಯಾವಳಿಗಳು ದೊರೆತ ನಂತರ ಇದು ಪೂರ್ವನಿಯೋಜಿತ ಹತ್ಯೆ ಎಂಬುದು ಸಾಬೀತಾಗಿದೆ. ನ್ಯಾಯಾಂಗದ ಮೇಲಿನ ಕ್ರೂರ ಹಲ್ಲೆ ಎಂದು ಕರೆದಿರುವ ವಕೀಲರೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರನ್ನು ಕೊಂದ ಆಟೋ ಯಾರದೆಂಬುದು ಇನ್ನು ಪತ್ತೆಯಾಗಿಲ್ಲ. ನ್ಯಾಯಾಧೀಶರನ್ನು ಆಸ್ಪತ್ರೆಗೆ ಸೇರಿಸಿದಾಗ ಆತ ಯಾರೆಂಬುದು ಸಹ ಗೊತ್ತಿರಲಿಲ್ಲ ಎನ್ನಲಾಗಿದೆ. ಅವರ ಕುಟುಂಬ 7 ಗಂಟೆಯಾದರೂ ಅವರು ಮನೆಗೆ ಬಾರದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸ್ ಹುಡುಕಾಟದಲ್ಲಿ ಅವರು ಆಸ್ಪತ್ರೆಯಲ್ಲಿ ಸಾವನಪ್ಪಿರುವುದು ಪತ್ತೆಯಾಗಿದೆ.
ನ್ಯಾಯಾಧೀಶರ ಕೊಲೆಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿರುವುದನ್ನು ಸಿಸಿಟಿವಿ ಸಾಕ್ಷಿಗಳು ದೃಢಪಡಿಸಿವೆ. ಆರಂಭಿಕ ತನಿಖೆಯಲ್ಲಿ ಹತ್ಯೆಯ ಕೆಲವೇ ಗಂಟೆಗಳ ಹಿಂದೆ ಆಟೋವನ್ನು ಅಪಹರಿಸಿರುವುದು ಬೆಳಕಿಗೆ ಬಂದಿದೆ. ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಉನ್ನತ ಮಟ್ಟದ ತನಿಖೆಗೆ ಒತ್ತಡ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಧೀಶರಾದ ಆನಂದ್ರವರು ಧನಬಾದ್ ನಗರದ ಮಾಫಿಯಾ ಕೊಲೆಗಳ ವಿಚಾರಣೆ ನಡೆಸುತ್ತಿದ್ದರು ಮತ್ತು ಇತ್ತೀಚೆಗೆ ಇಬ್ಬರು ಗ್ಯಾಂಗ್ಸ್ಟರ್ಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Rajasthan congress :ರಾಜಸ್ಥಾನ ಶಾಸಕರಿಗೆ ಸರ್ಕಾರದ ಬಗ್ಗೆ ಪರೀಕ್ಷೆ ಬರೆಸಲಿದೆ ಕಾಂಗ್ರೆಸ್ ಹೈಕಮಾಂಡ್!!
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಈ ಘಟನೆಯನ್ನು ವಿವರಿಸಿರುವ ವಕೀಲ ವಿಕಾಸ್ ಸಿಂಗ್ “ಇದು ನ್ಯಾಯಾಂಗದ ಮೇಲಿನ ಲಜ್ಜೆಗೆಟ್ಟ ದಾಳಿ. ಈ ಕುರಿತು ಸಿಬಿಐ ತನಿಖೆ ನಡೆಸಬೇಕಾಗಿದೆ. ಬೆಳಿಗ್ಗೆ ವಾಕಿಂಗ್ ಮಾಡುವಾಗ ನ್ಯಾಯಾಧೀಶರನ್ನು ಆಟೋದಲ್ಲಿ ಗುದ್ದಿ ಸಾಯಿಸುವುದು ಎಂದರೆ ಏನರ್ಥ? ಅವರು ಗ್ಯಾಂಗ್ಸ್ಟರ್ಗಳ ಜಾಮೀನು ವಿಚಾರಣೆ ನಡೆಸುತ್ತಿದ್ದರು. ಇದು ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ನೋವು ತೋಡಿಕೊಂಡಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಮುಂದೆ ಈ ಪ್ರಕರಣವನ್ನು ಪ್ರಸ್ತಾಪಿಸುವಂತೆ ಸೂಚಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ