ಚೆನ್ನೈ: ಡಿಎಂಕೆ ಕೌನ್ಸಿಲರ್ನಿಂದ ಸೈನಿಕನ ಹತ್ಯೆಯನ್ನು ಖಂಡಿಸಿ ಡಿಎಂಕೆ ಸರ್ಕಾರದ ವಿರುದ್ಧ ಚೆನ್ನೈನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ನೇತೃತ್ವದ ಪಕ್ಷದ ಕಾರ್ಯಕರ್ತರು ಮೊಂಬತ್ತಿ ಮೆರವಣಿಗೆ ನಡೆಸಿದ್ದರು. ಪೊಲೀಸರ (Police) ಅನುಮತಿಯಿಲ್ಲದೆ ಪ್ರತಿಭಟನೆ (Protest) ಮತ್ತು ಮೊಂಬತ್ತಿ ಮೆರವಣಿಗೆ ನಡೆಸಲಾಗಿದೆ ಎಂದು 3,500 ಬಿಜೆಪಿ (BJP) ಕಾರ್ಯಕರ್ತರ ಮೇಲೆ ತಮಿಳುನಾಡು (Tamil Nadu) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 151, ಆರ್/ಡಬ್ಲು 41(6) ಅಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಚೆನ್ನೈ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಡಿಎಂಕೆ ಕೌನ್ಸಿಲರ್ ಭಾರತೀಯ ಸೈನಿಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು, ನಾಯಕರು ಮಂಗಳವಾರ ಚೆನ್ನೈನಲ್ಲಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮಾಜಿ ಸೈನಿಕರು ಕೂಡ ಭಾಗವಹಿಸಿದ್ದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಮಧ್ಯಸ್ಥಿಕೆ ವಹಿಸುವಂತೆ ಕೋರಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಕೆಲವು ಸೈನಿಕರು ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಡಿಎಂಕೆ ಸರ್ಕಾರದ ವಿರುದ್ಧ ಮೊಂಬತ್ತಿ ಬೆಳಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಹತ್ಯೆಗೀಡಾದ ಲ್ಯಾನ್ಸ್ ನಾಯಕ್ ಪ್ರಭು ಅವರ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರು.
ಸ್ಟಾಲಿನ್ ವಿರುದ್ಧ ಆಕ್ರೋಶ
ಈ ಪ್ರತಿಭಟನೆ ಓಮಂದೂರಾರ್ ಆಸ್ಪತ್ರೆಯ ಬಳಿ ಪ್ರಾರಂಭವಾಗಿ ಯುದ್ಧ ಸ್ಮಾರಕದಲ್ಲಿ ಕೊನೆಗೊಂಡಿತು. ಮೆರವಣಿಗೆಯ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಭಾರತೀಯ ಸೇನಾ ಯೋಧನನ್ನು ಕ್ರೂರವಾಗಿ ಹತ್ಯೆಗೈದರೂ, ಇಲ್ಲಿಯವರೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯಪಾಲರ ಭೇಟಿ
ಮಾಜಿ ಸೈನಿಕರು ತಮ್ಮ ಕುಂದುಕೊರತೆಗಳನ್ನು ರಾಜ್ಯಪಾಲರಿಗೆ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ತಾವು ಅಸುರಕ್ಷಿತರಾಗಿದ್ದೇವೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದಾರೆ. ರಾಜ್ಯಪಾಲರೂ ಕೂಡ ಮಾಜಿ ಸೈನಿಕರ ಮಾತುಗಳನ್ನು ಆಲಿಸಿದ್ದು, ಈ ಘಟನೆಯಿಂದ ತಮಗೂ ನೋವಾಗಿದೆ ಎಂದು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಪರಿಶೀಲಿಸುವುದಾಗಿ ಮತ್ತು ಅವರಿಗೆ ಮತ್ತೆ ಸೈನಿಕರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಕಾನೂನು ಬಾಹಿರ ರಾಜ್ಯ
ಎಂಕೆ ಸ್ಟಾಲಿನ್ ಅವರು ವಿಪಕ್ಷ ನಾಯಕರಾಗಿದ್ದಾಗ ನಾಲ್ಕು ವರ್ಷಗಳ ಹಿಂದೆ ಡಿಎಂಕೆ ಗೂಂಡಾಗಳಿಂದ ದಾಳಿಗೊಳಗಾಗಿದ್ದ ಬಿರಿಯಾನಿ ಅಂಗಡಿಗೆ ಭೇಟಿ ಮಾಡಿದ್ದರು. ಆದರೆ ಮುಖ್ಯಮಂತ್ರಿಯಾಗಿ ಆ ಕೆಲಸವನ್ನು ಈಗ ಮಾಡುವಲ್ಲಿ ವಿಫಲರಾಗಿದ್ದಾರೆ. ನಡುರಸ್ತೆಯಲ್ಲಿ ಸೈನಿಕನನ್ನು ಹತ್ಯೆ ಮಾಡಲಾಗಿದೆ. ಆದರೆ ಸಿಎಂ ಸೈನಿಕನ ಕುಟುಂಬಕ್ಕೆ ಸಾಂತ್ವನ ಹೇಳಲೂ ಸಹ ಹೋಗಿಲ್ಲ. ಡಿಎಂಕೆ ನೇತೃತ್ವದಲ್ಲಿ ತಮಿಳುನಾಡು ಕಾನೂನು ಬಾಹಿರ ರಾಜ್ಯವಾಗುತ್ತಿದೆ ಎಂದು ಬಿಜೆಪಿ ಮುಖಂಡ ನಾರಾಯಣ್ ತಿರುಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವಾಧಿಕಾರಿ ವರ್ತನೆ
ಡಿಎಂಕೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಮತ್ತು ಲ್ಯಾನ್ಸ್ ನಾಯಕ್ ಅವರ ದುರದೃಷ್ಟಕರ ಸಾವಿನ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವ ಬಿಜೆಪಿ ನಾಯಕರನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ. ಡಿಎಂಕೆ ಪಕ್ಷ ಭಾರತೀಯ ಸೇನೆಯನ್ನು ಗೌರವಿಸಬೇಕು. ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಭಾರತೀಯ ಸೇನೆಯ ಬಗ್ಗೆ ತಮಗೆ ಕಾಳಜಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಫ್ಯಾಸಿಸಂ ಎಂದರೆ ಏನು ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ