ನವದೆಹಲಿ: ಮಹಾರಾಷ್ಟ್ರ (Maharashtra Governement) ಸಿಎಂ ಏಕನಾಥ್ ಶಿಂಧೆ (Eknath Eknath) ಮತ್ತು ಅವರ ಜೊತೆ ಹೋಗಿದ್ದ 15 ಮಂದಿ ಶಿವಸೇನೆ ಶಾಸಕರನ್ನು ಅನರ್ಹತೆಗೊಳಿಸುವಂತೆ ಹಾಗೂ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪಿಸಬೇಕೆಂದು ಮಾಜಿ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಬಣ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ. ಇದರಿಂದ ಶಿಂಧೆ ಬಣಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಶಿವಸೇನೆಯಿಂದ ಬಂಡಾಯವೆದ್ದಿದ್ದ ಹಿರಿಯ ನಾಯಕ ಏಕನಾಥ ಶಿಂಧೆ ಹಾಗೂ 16 ಮಂದಿ ಶಾಸಕರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಆದರೆ ಠಾಕ್ರೆ ನೇತೃತ್ವದ ಶಿವಸನೆ ಈ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿತ್ತು.
ಸುಪ್ರಿಂ ಕೋರ್ಟ್ ಹೇಳಿದ್ದೇನು?
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆಗಳನ್ನು ನೀಡಿದೆ. ಗೊಗಾವಾಲೆ ಅವರನ್ನು ಸ್ಪೀಕರ್ ವಿಪ್ ಆಗಿ ನೇಮಕ ಮಾಡಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಕ್ಷ ಇಬ್ಭಾಗವಾದಾಗ ಒಂದು ಗುಂಪಿಗೆ ಶಿವಸೇನೆ ಎಂದು ಹೇಳಿಕೊಳ್ಳುವ ಹಕ್ಕಿಲ್ಲ. ಬಲಾಬಲ ಪರೀಕ್ಷೆ ಪ್ರಸ್ತಾಪದ ಮೇಲೆ ಪಕ್ಷದ ಚಿಹ್ನೆ ನೀಡುವುದು ಸರಿಯಲ್ಲ ಎಂದು ಏಕನಾಥ್ ಶಿಂಧೆ ಬಣಕ್ಕೆ ಪಕ್ಷದ ಅಧಿಕೃತ ಚಿಹ್ನೆ ನೀಡಿದ್ದನ್ನು ಕೋರ್ಟ್ ಪ್ರಶ್ನಿಸಿದೆ.
ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಪಿಎಂ ಆದವರ ಬದುಕು ನರಕ, ದೇಶ ಬಿಡಿ ಇಲ್ಲವೇ ಪ್ರಾಣ ಬಿಡಿ ಇವೆರಡೇ ಆಪ್ಶನ್!
ಅಲ್ಲದೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರಿಂದ ಏಕನಾಥ ಶಿಂಧೆ ನೇತೃತ್ವದ ಬಣವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವ ರಾಜ್ಯಪಾಲರ ಕ್ರಮ ಸರಿಯಾಗಿತ್ತು. ಆದರೆ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿ ಸದನದಲ್ಲಿ ಬಹುಮತ ಸಾಬೀತುಪಡಿಸಲು ಶಿಂಧೆ ಬಣಕ್ಕೆ ಅವಕಾಶ ನೀಡಿದ್ದು ಸರಿಯಾದ ನಿರ್ಧಾರವಲ್ಲ ಎಂದು ರಾಜ್ಯಪಾಲರ ಕ್ರಮವನ್ನು ಖಂಡಿಸಿದೆ.
ಆದರೆ ಬಹುಮತ ಸಾಬೀತು ಪಡಿಸುವ ಮುನ್ನವೇ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರಿಂದ, ಅವರ ಸರ್ಕಾರವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಉದ್ಧವ್ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ ನಂತರ ಅವರ ಸರ್ಕಾರವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂದ ಸುಪ್ರಿಂ
ಉದ್ಧವ್ ಠಾಕ್ರೆ ಸರ್ಕಾರದ ಬಹುಮತವನ್ನು ರಾಜ್ಯಪಾಲರು ಅನುಮಾನಿಸುವುದಕ್ಕೆ ಸಾಧ್ಯವಿರಲಿಲ್ಲ. ಕೆಲವು ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನುವ ಮಾತ್ರಕ್ಕೆ ವಿಶ್ವಾಸಮತ ಯಾಚನೆಗೆ ಸೂಚಿಸಲು ಸಾಧ್ಯವಿಲ್ಲ. ಸದಸ್ಯರು ಠಾಕ್ರೆ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಉದ್ಧವ್ ಠಾಕ್ರೆ ಸರ್ಕಾರದ ಕೆಲವು ನೀತಿ ನಿರ್ಧಾರಗಳೊಂದಿಗೆ ಅವರು ಸಹಮತ ಹೊಂದಿರಲಿಲ್ಲ. ಆದರೆ ಶಿಂಧೆ ಬಣ ಈ ವಿಚಾರವಾಗಿ ಚರ್ಚಿಸುತ್ತಾರೆಯೇ ಅಥವಾ ಬೇರೆ ಪಕ್ಷದೊಂದಿಗೆ ವಿಲೀನಗೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿರಲಿಲ್ಲ, ಹಾಗಾಗಿ ಉದ್ಧವ್ ಠಾಕ್ರೆ ಅವರು ಸದನದಲ್ಲಿ ಬಹುಮತ ಕಳೆದುಕೊಂಡಿದ್ದಾರೆ ಎಂದು ರಾಜ್ಯಪಾಲರು ನಿರ್ಧರಿಸುವಲ್ಲಿ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ರಾಜಕೀಯ ಪಕ್ಷ ನೇಮಿಸುವ ವಿಪ್ಗೆ ಮಾತ್ರ ಸ್ಪೀಕರ್ ಮಾನ್ಯತೆ ನೀಡಬೇಕು. ಗೊಗವಾಲೆ ಅವರನ್ನು ಶಿವಸೇನಾ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಿದ ಸ್ಪೀಕರ್ ಅವರ ನಿರ್ಧಾರ ಕಾನೂನುಬಾಹಿರ ಎಂದಿರುವ ಸುಪ್ರೀಂ ಕೋರ್ಟ್ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸಲು ಬಹುಮತ ಸಾಬೀತುಪಡಿಸುವುದನ್ನು ಮಾಧ್ಯಮವಾಗಿ ಬಳಸುವುದು ತಪ್ಪು ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ