ಛತ್ತೀಸಗಡ್ (Chhattisgarh) ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರು ಬಿರಾನ್ಪುರ ಘಟನೆಯನ್ನು ಕೇಸರಿ ಪಕ್ಷವು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಮಗಳು ಮುಸ್ಲಿಮರನ್ನು ಮದುವೆಯಾಗುವುದು "ಪ್ರೀತಿ" ಎಂದು ಬಿಜೆಪಿಯ (BJP) ಹಿರಿಯ ನಾಯಕರು ಹೇಳುತ್ತಾರೆ. ಆದರೆ ಇತರರು ಅದೇ ರೀತಿ ಮದುವೆಯಾದರೆ "ಜಿಹಾದ್" (Jihad) ಎಂದು ಹಣೆಪಟ್ಟಿ ನೀಡುತ್ತಾರೆ ಎಂದು ಭೂಪೇಶ್ ಬಾಘೇಲ್ ಬಿಜೆಪಿ ನಾಯಕರ ಕುರಿತು ಕಿಡಿಕಾಡಿದ್ದಾರೆ.
ಬುಧವಾರ ಬಿಲಾಸ್ಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಘೇಲ್, “ಬಿಜೆಪಿಯವರು ಲವ್ ಜಿಹಾದ್ ಕುರಿತು ಮಾತನಾಡುತ್ತಿದ್ದಾರೆ, ಆದರೆ ಬಿಜೆಪಿಯ ಹಿರಿಯ ನಾಯಕರ ಹೆಣ್ಣುಮಕ್ಕಳು ಮುಸ್ಲಿಂ ಹುಡುಗನನ್ನು ಮದುವೆಯಾದರೆ ಅದು ಲವ್ ಜಿಹಾದ್ ಅಲ್ಲ. ಆದರೆ ಬೇರೆಯವರು ಆದ್ರೆ ಅದು ಜಿಹಾದ್ ಎಂದು ಹೇಳಿದ್ದಾರೆ.
ಈ ಕುರಿತು ನಿಮಗೆ ಸ್ಪಷ್ಟನೆ ಬೇಕು ಎಂದರೆ ಛತ್ತೀಸ್ಗಢದ ಅತ್ಯಂತ ಹಿರಿಯ ನಾಯಕರನ್ನು ಕೇಳಿ ಅವರು ನಿಮಗೆ ವಿವರಿಸುತ್ತಾರೆ. ಲವ್ ಹಾಗೂ ಜಿಹಾದ್ ಎಂದರೆ ಏನು ಅಂತ ಎಂದು ಟೀಕಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ನಿವೃತ್ತಿ ವಯಸ್ಸು ಏರಿಕೆಯ ವಿರುದ್ಧ ಭುಗಿಲೆದ್ದ ಆಕ್ರೋಶ; ಫ್ರಾನ್ಸ್ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ
ಛತ್ತೀಸಗಡ್ ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಅಭಿಪ್ರಾಯ
"ಅವರ ಹೆಣ್ಣುಮಕ್ಕಳು ಮುಸ್ಲಿಂ ಹುಡುಗನ ಮಾದುವೆಯಾದರೆ, ಅದು ಪ್ರೀತಿಯೇ ಆದರೆ ಬೇರೆಯವರು ಅದೇ ರೀತಿ ಮಾಡಿದರೆ ಜಿಹಾದ್ ಎಂದು ಕರೆಯುತ್ತಾರೆಯೇ?" ಎಂದು ಶ್ರೀ ಬಘೇಲ್ ಪ್ರಶ್ನಿಸಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ, ಶ್ರೀ ಬಘೇಲ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ, ಅವರನ್ನು ಲವ್ ಜಿಹಾದ್ನ 'ಅತಿದೊಡ್ಡ ಬೆಂಬಲಿಗ' ಎಂದು ಕರೆದರು.
"ಸಿಎಂ ಬಘೇಲ್ ಅವರ ಹೇಳಿಕೆಯು ಅವರು 'ಲವ್ ಜಿಹಾದ್'ನ ಅತಿದೊಡ್ಡ ಬೆಂಬಲಿಗರು ಎಂಬ ಸ್ಪಷ್ಟ ಸೂಚನೆಯನ್ನು ನೀಡುತ್ತದೆ" ಎಂದು ಶ್ರೀ ಚೌಧರಿ ಹೇಳಿದರು.
"ಈ ಹೇಳಿಕೆಯು ಹಿಂದೂಗಳ ಮೇಲಿನ ಸಿಎಂ ಬಘೆಲ್ ಅವರ ದ್ವೇಷವನ್ನು ತೋರಿಸುತ್ತದೆ" ಎಂದು ಚೌಧರಿ ಆರೋಪಿಸಿದ್ದಾರೆ.
"ತಮ್ಮ ರಾಜಕೀಯವನ್ನು ಉಳಿಸುವ ಹತಾಶೆಯಲ್ಲಿ, ಬಘೇಲ್ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಬಿಜೆಪಿಯ ರಾಜಕಾರಣಿ ಹೇಳಿಕೆಯನ್ನು ನೀಡಿದ್ದಾರೆ.
"ಪ್ರಿಯಾಂಕಾ ವಾದ್ರಾರನ್ನು ಮೆಚ್ಚಿಸಲು ನೀವು ಹಿಂದೂ ಮಹಿಳೆಯರ ಕುರಿತು ಹೇಗೆ ಕಾಮೆಂಟ್ ಮಾಡುತ್ತಿದ್ದೀರಿ ಎಂಬ ನಿಮ್ಮ ಇಡೀ ಛತ್ತೀಸ್ಗಢವು ಗಮನಿಸುತ್ತಿದೆ" ಎಂದು ಶ್ರೀ ಚೌಧರಿ ಆರೋಪಿಸಿದ್ದಾರೆ.
ಬೀರನ್ಪುರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಭುನೇಶ್ವರ್
ಬೆಮೆತಾರಾ ಜಿಲ್ಲೆಯ ಬಿರಾನ್ಪುರ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭುನೇಶ್ವರ್ ಸಾಹು ಅವರ ಸಂಬಂಧಿಕರೊಂದಿಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾತನಾಡಿ ಸಾಂತ್ವನ ಹೇಳಿದರು. ಇದೇ ವೇಳೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿ, ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂತ್ರಸ್ತೆಯ ತಂದೆ ಈಶ್ವರ ಸಾಹು ಅವರು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ವಿನಂತಿಸಿದರು. ಸಾಹು ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಘೇಲ್ ಅವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ಬುಧವಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿಯವರಿಂದ ಸಂತ್ರಸ್ತರಿಗೆ ಘೋಷಣೆ
ಮುಖ್ಯಮಂತ್ರಿಗಳು ಭುನೇಶ್ವರ್ ಅವರ ಕುಟುಂಬದ ಸದಸ್ಯರೊಬ್ಬರಿಗೆ ಪರಿಹಾರವಾಗಿ 10 ಲಕ್ಷ ರೂಪಾಯಿ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ. ಏಪ್ರಿಲ್ 8ರಂದು ಬೆಮೆತರದ ಬೀರನ್ಪುರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಭುನೇಶ್ವರ್ ಕುರಿತು ಸ್ಮರಣಿ ಕರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 10 ರಂದು ವಿಶ್ವ ಹಿಂದೂ ಪರಿಷತ್ (VHP) ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿತ್ತು. ಅದೇ ದಿನ, ಛತ್ತೀಸ್ಗಢ ಘಟಕದ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸಾವೊ ಅವರು ತಮ್ಮ ಬೆಂಬಲಿಗರೊಂದಿಗೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಬೆಮೆತರಾ ತಲುಪಿದರು ಆದರೆ ಅವರನ್ನು ಸಾಜಾದಲ್ಲಿ ತಡೆಯಲಾಯಿತು ನಂತರ ಅರುಣ್ ಸಾವೋ ವಿರುದ್ದ ಸಾಜಾದ ಅಕ್ಕ ಪಕ್ಕ ಗ್ರಾಮದ ಜನರು ಬೃಹತ್ ಪ್ರತಿಭಟನೆ ನಡೆಸಿದರು.
ಹಾಗೂ ಹೀಗೂ ಸಾವೋ ತನ್ನ ಬೆಂಬಲಿಗರೊಂದಿಗೆ ಪಿಪಾರಿಯಾ ಗ್ರಾಮವನ್ನು ತಲುಪಿದರು. ಸುದೀರ್ಘ ಪ್ರತಿಭಟನೆ ನಂತರ, ಪೊಲೀಸರು, ಸಾವೊ ಮತ್ತು ಇತರ ನಾಯಕರನ್ನು ಪ್ರತಿಭಟನೆ ತಡೆಗಟ್ಟುವ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡರು.
ನಂತರ, ಏಪ್ರಿಲ್ 11 ರಂದು ಬಿರಾನ್ಪುರದ ಸಮೀಪವಿರುವ ಗ್ರಾಮದ ಬಳಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪೊಲೀಸರು ನಿಯೋಜನೆಯನ್ನು ಹೆಚ್ಚಿಸಿದ್ದಾರೆ ಮತ್ತು ಬೀರನ್ಪುರಕ್ಕೆ ಹೋಗುವ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಜನರು ಪಾಲ್ಗೊಂಡು ಸಭೆ ನಡೆಸಲಾಯಿತು ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಮೂರು ಜೀವಗಳನ್ನು ಬಲಿತೆಗೆದುಕೊಂಡ ಎರಡು ಸಮುದಾಯಗಳ ನಡುವಿನ ಘರ್ಷಣೆಯ ನಂತರ, ಪೊಲೀಸರು ಸುಮಾರು 1000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಬೆಮೆತಾರಾ ಜಿಲ್ಲೆಯ ಬಿರಾನ್ಪುರ ಗ್ರಾಮದಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಬೆಮೆತಾರ ಜಿಲ್ಲಾಧಿಕಾರಿ ಪಿ ಎಸ್ ಎಲ್ಮಾ ಖಚಿತಪಡಿಸಿದ್ದಾರೆ. ಘರ್ಷಣೆಯ ನಂತರ ಬಿರಾನ್ಪುರದಲ್ಲಿ ಮೊದಲು ಸೆಕ್ಷನ್ 144 ವಿಧಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಶಾಂತಿ ಕಾಪಾಡಲು ಸೂಚನೆ
ವದಂತಿಗಳ ಹರಡುವಿಕೆಯನ್ನು ತಡೆಯಲು, ಬೆಮೆತಾರಾ ಪೊಲೀಸ್ ಮುಖ್ಯಸ್ಥ ಇಂದಿರಾ ಕಲ್ಯಾಣ್ ಎಲೆಸೆಲಾ ಅವರು ನಿರ್ದೇಶನವನ್ನು ಹೊರಡಿಸಿದ್ದು, ಯಾರಾದರೂ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡುವುದು, ರಿಟ್ವೀಟ್ ಮಾಡುವುದು, ಕಾಮೆಂಟ್ ಮಾಡುವುದು ಮತ್ತು ಸುಳ್ಳು/ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದು ಕಂಡುಬಂದರೆ, ಅದು ಶಾಂತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸಂಬಂಧಿತ ವಿಭಾಗಗಳನ್ನು ಅಂಥವರ ಮೇಲೆ ದಾಖಲಿಸಲಾಗುವುದು
ಎಂದು ಇಂದಿರಾ ಕಲ್ಯಾಣ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಆಗಾಗ್ಗೆ ವಾಹನ ಮತ್ತು ಪಾದಚಾರಿ ಗಸ್ತು ನಡೆಸುತ್ತಾರೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ