ನವದೆಹಲಿ: ಭಾರತ ನೀತಿ ಆಯೋಗದ (NITI Aayog)ನೂತನ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಮಣ್ಯಂ (BVR Subrahmanyam) ಅವರು ನೇಮಕಗೊಂಡಿದ್ದಾರೆ. ಸುಬ್ರಮಣ್ಯಂ ಅವರು ಈ ಹಿಂದೆ ನೀತಿ ಆಯೋಗದ ಸಿಇಒ ಆಗಿದ್ದ ಪರಮೇಶ್ವರನ್ ಅಯ್ಯರ್ ( Parameswaran Iyer)ಸ್ಥಾನವನ್ನು ತುಂಬಲಿದ್ದಾರೆ. ಪರಮೇಶ್ವರನ್ ಅಯ್ಯರ್ ಅವರು ಮುಂದಿನ ಎರಡು ವರ್ಷಗಳಿಗೆ ವಿಶ್ವ ಬ್ಯಾಂಕ್ನ (World Bank) ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಹಾಗಾಗಿ ನೀತಿ ಆಯೋಗದ ಮುಖ್ಯಸ್ಥರ ಸ್ಥಾನ ತೆರವಾಗಿತ್ತು. ಇದೀಗ ಈ ಜಾಗಕ್ಕೆ ಬಿವಿಆರ್ ಸುಬ್ರಮಣ್ಯಂ ನೇಮಕವಾಗಿದ್ದಾರೆ. ಹುದ್ದೆಗೆ ನೇಮಕವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಸುಬ್ರಹ್ಮಣ್ಯಂ ನೇಮಕಾತಿಯನ್ನು ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ ಎಂದು ಸಿಬ್ಬಂದಿ ಸಚಿವಾಲಯ ಸೋಮವಾರ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸೇವೆ
ಸುಬ್ರಹ್ಮಣ್ಯಂ ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ನಿರ್ಧಾರಕ್ಕೂ ಮೊದಲೂ ಲೂಪ್ನಲ್ಲಿ ಇರಿಸಲಾದ ಕೆಲವೇ ಅಧಿಕಾರಿಗಳಲ್ಲಿ ಒಬ್ಬರು ಸುಬ್ರಹ್ಮಣ್ಯಂ ಎಂದು ಪರಿಗಣಿಸಲಾಗಿದೆ.
ಆಂತರಿಕ ಭದ್ರತೆಯಲ್ಲಿ ಪರಿಣಿತಿ
ಛತ್ತೀಸ್ಗಢ ಕೇಡರ್ನ 1987-ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಸುಬ್ರಹ್ಮಣ್ಯಂ ಆಂತರಿಕ ಭದ್ರತೆಯಲ್ಲಿ ಪರಿಣತರಾಗಿದ್ದಾರೆ. ರಾಜ್ಯದಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರವು ಒಡೆದುಹೋದ ನಂತರ ಜೂನ್ 2018 ರಲ್ಲಿ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಯ ಹೇರಲಾಗಿತ್ತು. ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರಕ್ಕೆ ನಿಯೋಜಿಸುವ ಮೊದಲು ಅವರು ಛತ್ತೀಸ್ಗಢದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮನಮೋಹನ್ ಸಿಂಗ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ
56 ವರ್ಷ ವಯಸ್ಸಿನ ಅಧಿಕಾರಿ ಸುಬ್ರಹ್ಮಣ್ಯಂ 2004 ರಿಂದ 2008 ರವರೆಗೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವಿಶ್ವ ಬ್ಯಾಂಕ್ನೊಂದಿಗೆ ಕೆಲಸ ಮಾಡಿದ ನಂತರ ಅವರು ಮತ್ತೆ 2012 ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಪರಮೇಶ್ವರನ್
ಇನ್ನು ನೀತಿ ಆಯೋಗದ ಸಿಇಒ ಆಗಿ ಕೆಲಸ ಮಾಡುತ್ತಿದ್ದ ಪರಮೇಶ್ವರನ್ ಅಯ್ಯರ್ ಅವರು, ಎರಡು ವರ್ಷಗಳ ಅವಧಿಗೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ವಿಶ್ವಬ್ಯಾಂಕ್ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅಯ್ಯರ್ ಅವರು 2009 ರಲ್ಲಿ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿಯೂ ಕೆಲಸ ಮಾಡಿದ್ದರು. ಇದೀಗ ಪ್ರಮುಖ ಹುದ್ದೆಗೆ ನೇಮಕಗೊಂಡಿದ್ದಾರೆ.
1988ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ರಾಜೇಶ್ ಖುಲ್ಲರ್ ಅವರು ಇಲ್ಲಿಯವರೆಗೆ ವಿಶ್ವಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಖುಲ್ಲರ್ ಅವರು ಅವರ ಕೇಡರ್ ರಾಜ್ಯ ಹರಿಯಾಣಕ್ಕೆ ಹಿಂತಿರುಗಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ