news18-kannada Updated:February 29, 2020, 7:06 PM IST
ಗಡಿ ಭದ್ರತಾ ಪಡೆ ಯೋಧ ಮೊಹಮ್ಮದ್ ಅನೀಸ್
ನವದೆಹಲಿ(ಫೆ.29): ಯೋಧ ಮೊಹಮ್ಮದ್ ಅನೀಸ್ಗೆ ಮನೆ ಕಟ್ಟಿಸಿ ಕೊಡುವುದಾಗಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಭರವಸೆ ನೀಡಿದೆ. ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಖಾಸ್ ಖಜೂರಿ ಗಾಲಿ ಪ್ರದೇಶದಲ್ಲಿನ ಗಡಿ ಭದ್ರತಾ ಪಡೆ ಯೋಧ ಮೊಹಮ್ಮದ್ ಅನೀಸ್ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಈ ವಿಚಾರವೀಗ ತಡವಾಗಿ ಬೆಳಕಿಗೆ ಬಂದಿದ್ದು, ಯೋಧ ಮೊಹಮ್ಮದ್ ಅನೀಸ್ ಮದುವೆಗೆ ಮನೆ ಕಟ್ಟಿಸಿ ಉಡುಗೊರೆಯಾಗಿ ನೀಡುವುದಾಗಿ ಬಿಎಸ್ಎಫ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ಪುಷ್ಪೇಂದ್ರ ರಾಥೋಡ್ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಪರ-ವಿರೋಧ ಗುಂಪುಗಳಿಂದ ಸಂಭವಿಸಿದ ಹಿಂಸಾಚಾರದಲ್ಲಿ ಇಲ್ಲಿಯವರೆಗೂ 42 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಈಶಾನ್ಯ ದೆಹಲಿಯಲ್ಲಂತೂ ಹಲವರು ತಮ್ಮ ಮನೆ, ಅಂಗಡಿ ಕಳೆದುಕೊಂಡಿದ್ದಾರೆ. ಹೀಗೆ ಮನೆ, ಅಂಗಡಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಜನರಿಗೆ ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ ನೆರವು ನೀಡುತ್ತಿದೆ. ಹಾಗೆಯೇ ದೆಹಲಿ ಸರ್ಕಾರವೂ ಗಲಭೆ ಪೀಡಿತ ಪ್ರದೇಶದಲ್ಲಿ ನಲುಗಿರುವ ಜನರಿಗೆ ಅಗತ್ಯವಿರುವ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ.
ಇತ್ತೀಚೆಗೆ ನಿನ್ನೆ ಫೆಬ್ರವರಿ 28ನೇ ತಾರೀಕಿನಂದು ಮನೆಯ ಹೊರಗಡೆ ಮೊಹಮ್ಮದ್ ಅನೀಸ್, ಬಿಎಸ್ಎಫ್ ಯೋಧ’ ಎಂದು ಬರೆದಿದ್ದ ನೇಮ್ ಪ್ಲೇಟ್ ಹಾಕಲಾಗಿತ್ತು. ಹೀಗಾದರೂ ಗಲಭೆಕೋರರು ಮನೆಗೆ ಹಾನಿ ಮಾಡದೆ ಮುಂದೆ ಹೋಗುತ್ತಾರೆ ಎಂದು ಯೋಧರ ಕುಟುಂಬ ಭಾವಿಸಿತ್ತು. ಯೋಧನ ಮನೆ ಎಂದು ವಿನಾಯಿತಿ ನೀಡುತ್ತಾರೆ ಎಂದು ಸ್ವಲ್ಪ ಆಶಾಭಾವ ಹೊಂದಿದ್ದರು. ಈ ಮಧ್ಯೆ ಗಲಭೆಕೋರ "ಯೋಧನನ್ನೇ ಹೊರಗೆ ಬಾರೋ ಪಾಕಿಸ್ತಾನಿ, ನಿನಗೆ ಪೌರತ್ವ ಕೊಡುತ್ತೇವೆ’ ಎಂದು ಚೀರಿದ. ನಂತರ ಗ್ಯಾಸ್ ಸಿಲಿಂಡರ್ ಎಸೆದು ಮನೆಗೆ ಬೆಂಕಿ ಹಚಿದ್ದ ಎನ್ನಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಮ್ಮೆ ಗೋಲಿಮಾರೋ ಸದ್ದು: ಆರು ಮಂದಿ ಬಂಧನ
ಇನ್ನು, ಮೊಹಮ್ಮದ್ ಅನೀಸ್ ಮದುವೆಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 3 ಲಕ್ಷ ರೂ. ನಗದು ಸುಟ್ಟು ಕರಕಲಾಗಿದೆ. ಹಾಗೆಯೇ ಚಿನ್ನಾಭರಣಗಳು ಕೂಡ ಭಸ್ಮಗೊಂಡಿವೆ ಎಂದು ಯೋಧರ ಕುಟುಂಬ ತಮ್ಮ ಅಳಲು ತೋಡಿಕೊಂಡಿದೆ.
ಗಲಭೆಕೋರರು ಮನೆಗೆ ಬೆಂಕಿ ಹಚ್ಚಿದ ವೇಳೆ ಅನೀಸ್ ಜತೆ ಕುಟುಂಬಸ್ಥರಿಗೆ ತೀವ್ರ ಗಾಯಗಳಾಗಿವೆ. ತಂದೆ ಮೊಹಮ್ಮದ್ ಮುನೀಸ್, ಚಿಕ್ಕಪ್ಪ ಮೊಹಮ್ಮದ್ ಅಹ್ಮದ್, ತಂಗಿ ನೇಹಾ ಗಾಯಾಗೊಂಡಿದ್ದಾರೆ.
First published:
February 29, 2020, 7:02 PM IST