ಅಸ್ಸಾಂ: ಭಾರತೀಯ ಸಂಪ್ರದಾಯದಲ್ಲಿ ಮದುವೆ (Marriage) ಎಂಬುದು ಪ್ರತಿಯೊಬ್ಬರ ಜೀವನದ ಅದ್ಭುತ ಕ್ಷಣ ಎಂದು ಭಾವಿಸಲಾಗುತ್ತದೆ. ಬಂಧು ಬಳಗ, ಸ್ನೇಹಿತರನ್ನು ವಿವಾಹ ಸಂಭ್ರಮದಲ್ಲಿ ಭಾಗಿಯಾಗಲು ಆಹ್ವಾನಿಸಲಾಗುತ್ತದೆ. ವಧು-ವರ (Bride-Groom) ಎರಡೂ ಕಡೆಯವರೂ ಸೇರಿ ಮದುವೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಇಂತಹ ಸಂಭ್ರಮ ಕಾರ್ಯಕ್ರಮದಲ್ಲಿ ಸ್ವಲ್ಪ ಏರುಪೇರಾದರೂ ಇಡೀ ಮದುವೆ ಮನೆ ಅಲ್ಲೋಲ ಕಲ್ಲೋಲ ಆಗುತ್ತದೆ. ಇಂತಹದೇ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ. ವರ ತನ್ನ ಮದುವೆ ದಿನವೇ ಸ್ನೇಹಿರೊಂದಿಗೆ ಕಂಠ ಪೂರ್ತಿ ಕುಡಿದು ಹಸಮಣೆಗೆ ಬಂದು ಕುಳಿತಿದ್ದಾನೆ. ವರನ ಸ್ಥಿತಿ ನೋಡಿ ಬೇಸತ್ತ ವಧು ವಿವಾಹವನ್ನೇ ರದ್ದು ( Bride Cancels Marriage) ಪಡಿಸಿದ್ದಾಳೆ.
ಅಸ್ಸಾಂನ ನಲ್ಬಾರಿ ಎಂಬಲ್ಲಿ ಈ ಘಟನೆ ನಡೆದಿದೆ. ವಿವಾಹಕ್ಕೆ ಹೆಣ್ಣಿನ ಕುಟುಂಬದವರು ಮೊದಲೇ ಮಂಟಪಕ್ಕೆ ಬಂದು ಕುಳಿತಿದ್ದಾರೆ. ಆದರೆ ವರ ಮತ್ತು ಆತನ ಕಡೆಯ ಬಹುತೇಕರು ಕುಡಿದು ಬಂದಿದ್ದಾರೆ. ಮಂಟಪಕ್ಕೆ ಬಂದ ವರನಿಗೆ ಆರ್ಚಕರು ಮದುವೆ ಆಚರಣೆಯನ್ನು ಹೇಗೆ ಅನುಸರಿಸಬೇಕೆಂದು ಹೇಳಿಕೊಡುತ್ತಿದ್ದರೆ, ಆತ ಮಾತ್ರ ಕುಡಿದ ಮತ್ತಿನಲ್ಲಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲೂ ಇಲ್ಲದೆ ಸ್ಥಳದಲ್ಲೇ ಮಲಗಿದ್ದಾನೆ.
ಹಸಮಣೆಯಲ್ಲೇ ಬಿದ್ದ ವರ
ತಡವಾಗಿ ಕುಡಿದು ಮಂಟಪಕ್ಕೆ ಬಂದಿದ್ದ ವರನಿಗೆ ವಿವಾಹ ಕಾರ್ಯಕ್ರಮ ಆರಂಭವಾದ ಮೇಲೆ ಮಂತ್ರ, ಆಚರಣೆ, ಸಂಪ್ರದಾಯವನ್ನು ಆರ್ಚಕರು ಹೇಳಿಕೊಡಲು ಶುರು ಮಾಡಿದ್ದಾರೆ. ಆದರೆ ಕಂಠ ಪೂರ್ತಿ ಕುಡಿದಿದ್ದ ವರ ಮತ್ತಿನಲ್ಲಿ ಸರಿಯಾಗಿ ಕೂರಲು ಆಗದೆ ಕುಳಿತಲ್ಲೇ ಬಿದ್ದಿದ್ದಾನೆ. ಸ್ನೇಹಿತರು ಮತ್ತು ಅರ್ಚಕ ಎಬ್ಬಿಸಲು ಪ್ರಯತ್ನಿಸಿದರೂ ವರ ಮಾತ್ರ ಫುಲ್ ಟೈಟಾಗಿ ಬಿದ್ದಿದ್ದಾನೆ.
ಮದುವೆ ರದ್ದುಗೊಳಿಸಿದ ವಧು
ವರನ ಸ್ಥಿತಿಯನ್ನು ಗಮನಿಸಿದ ವಧು ಇಂತಹ ಕುಡುಕನನ್ನು ಮದುವೆಯಾಗಲಾರೆ ಎಂದು ಹೇಳಿ ವಿವಾಹವನ್ನು ರದ್ದು ಮಾಡಿದ್ದಾರೆ. ನಂತರ ಮಂಟಪದಿಂದ ಹೊರ ಬಂದ ವಧು ನೇರವಾಗಿ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ತಮ್ಮ ಮನೆಯವರು ಮದುವೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ವರನ ಇಂತಹ ಗುಣ ನೋಡಿ ಮದುವೆಯಾಗಲಾರೆ, ನಮ್ಮ ಮನೆಯವರು ಮದುವೆಗಾಗಿ ಮಾಡಿದ ವೆಚ್ಛವನ್ನು ಕೊಡಿಸಬೇಕು ಎಂದು ವರನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾರೆ.
ಶೇ.95 ರಷ್ಟು ಮಂದಿ ಕುಡಿದು ಬಂದಿದ್ದರು
ಮದುವೆ ಚೆನ್ನಾಗಿಯೇ ನಡೆದಿತ್ತು. ನಾವು ಎಲ್ಲಾ ವಿಧಿವಿಧಾನಗಳನ್ನು ಮಾಡಿದ್ದೇವೆ. ನಮ್ಮ ಮನೆಯವರು ಮದುವೆಯನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಪರಿಸ್ಥಿತಿ ಉಲ್ಬಣಗೊಂಡಾಗ, ಹುಡುಗಿ ಹಸಮಣೆ ಮೇಲೆ ಕುಳಿತುಕೊಳ್ಳದಿರಲು ನಿರ್ಧರಿಸಿದಳು. ಏಕೆಂದರೆ ಸುಮಾರು 95 ರಷ್ಟು ವರನ ಕಡೆಯವರು, ಕುಟುಂಬದವರು ಕುಡಿದು ಬಂದಿದ್ದರು. ಈ ಬಗ್ಗೆ ನಾವು ಗಾಂವ್ ಬುರ್ಹಾ ( ಗ್ರಾಮದ ನಾಯಕ) ಅವರನ್ನು ಸಂಪರ್ಕಿಸಿದ್ದೇವೆ ಹಾಗೂ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ವಧುವಿನ ಸಂಬಂಧಿಕರೊಬ್ಬರು ಹೇಳಿದ್ದಾರೆ.
ವರದಕ್ಷಿಣೆಗೆ ಬೇಡಿಕೆ, ಮದುವೆ ರದ್ದುಗೊಳಿಸಿದ ವಧು
ಇದೇ ರೀತಿಯ ಘಟನೆ ಉತ್ತರಾಖಂಡದಲ್ಲಿ ನಡೆದಿದ್ದು, ಮದುವೆ ದಿನವೇ ವರನ ಕಡೆಯವರು ವರದಕ್ಷಿಣೆಯಾಗಿ ಕಾರು ಸೇರಿದಂತೆ ಹಲವು ಬೇಡಿಕೆಯಿಟ್ಟಿದ್ದಕ್ಕೆ ವಧು ವಿವಾಹವನ್ನೇ ರದ್ದುಗೊಳಿಸಿದ್ದಾಳೆ. ಮದುವೆ ದಿನ ವಧುವಿನ ಕಡೆಯವರು ಮಂಟಪಕ್ಕೆ ಬಂದರೂ ವರನ ಕಡೆಯವರೂ ಮಾತ್ರ ಬಂದಿರಲಿಲ್ಲ. ಏಕೆ ಎಂದು ವಿಚಾರಿಸಿದಾಗ ವರನ ಕಡೆಯವರು ವರದಕ್ಷಿಣೆಯಾಗಿ ಕಾರನ್ನು ಕೊಡಬೇಕು ಹಾಗೂ ವಿವಾಹದ ದಿನಾಂಕವನ್ನು ಮುಂದೂಡಬೇಕೆಂದು ಹೇಳಿದ್ದಾರೆ.
ವರನ ಕಡೆಯವರ ಬೇಡಿಕೆಗೆ ಮಣಿಯದ ವಧುವಿನ ಕುಟುಂಬಸ್ಥರು ವರ ಮತ್ತು ಅವನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಮದುವೆಗೆ ತಗಲುವ ವೆಚ್ಚವನ್ನು ಭರಿಸುವಂತೆ ವರನ ಕುಟುಂಬಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ