ಬೆಂಗಳೂರು (ಸೆ. 15) : ಬಾಲ್ಯದಲ್ಲಿಯೇ ಮಕ್ಕಳು ತಮ್ಮ ಜೀವ ಹಂಗು ತೊರೆದು ತಮ್ಮ ಧೈರ್ಯ ಮತ್ತು ಸಾಹಸದ ಮೂಲಕ ಶೌರ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ. ಅಂತಹ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಪ್ರತಿ ವರ್ಷ ಇಂತಹ ಸಾಹಸಿ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರಧಾನ ಮಾಡುತ್ತಾ ಬರುತ್ತಿದೆ. 2021- 22ನೇ ಪ್ರಸಕ್ತ ಸಾಲಿನಲ್ಲಿ ಸಾಹಸ ಮೆರೆದ ಮಕ್ಕಳಿಗೆ ಪ್ರಶಸ್ತಿ ನೀಡಲು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಮುಂದಾಗಿದೆ. ಇದಕ್ಕಾಗಿ 6 ರಿಂದ 18 ವರ್ಷದೊಳಗಿನ ರಾಜ್ಯದ ವಿವಿಧ ಮಕ್ಕಳ ಅರ್ಜಿ ಆಹ್ವಾನಿಸಿದೆ
ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಐಸಿಸಿಡಬ್ಲ್ಯು ನ್ಯಾಷನಲ್ ಬ್ರೇವರಿ ಅವಾಡ್ರ್ಸ್ ಫಾರ್ ಚಿಲ್ಡ್ರನ್ 2021 ಪ್ರಶಸ್ತಿ ಪ್ರಧಾನ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಶೌರ್ಯ ಸಾಹಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮತ್ತು ಶ್ಲಾಘನೀಯ ಸೇವೆ ಮಾಡಿ, ಇತರ ಮಕ್ಕಳಿಗೆ ಸ್ಫೂರ್ತಿ ನೀಡುವಂಥ ಮಕ್ಕಳನ್ನು ಗುರುತಿಸಿ ಸೂಕ್ತ ಗೌರವ ನೀಡಲು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಯೋಜನೆಯನ್ನು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಸ್ಥಾಪಿಸಿದೆ. ಇದರ ಅಡಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ನೀಡಲಾಗುವುದು.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರಕರಣವು ಜುಲೈ 2020 ರಿಂದ 2021 ರ ಸೆಪ್ಟೆಂಬರ್ 30 ರೊಳಗೆ ನಡೆದಿರಬೇಕು. 2003 ರ ಆಗಸ್ಟ್, 01 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಪ್ರಶಸ್ತಿ ನೀಡಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು. ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಪ್ರಕರಣ ನಡೆದಿರುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿರಬೇಕು. ಪ್ರಶಸ್ತಿಯು ಪದಕ( ಚಿನ್ನ, ಬೆಳ್ಳಿ ಪದಕ), ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಒಳಗೊಂಡಿರುತ್ತದೆ.
ಇದನ್ನು ಓದಿ: ಕುಸಿದ ಶುಂಠಿ ದರ; ಸಂಕಷ್ಟದಲ್ಲಿ ಹಾಸನ ರೈತರು
ಪ್ರಶಸ್ತಿಗಳು
ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಭಾರತ್ ಅವಾರ್ಡ್ ರೂ.1 ಲಕ್ಷ, ದ್ರುವ ಅವಾರ್ಡ್, ಮಾರ್ಕಾಂಡೇಯ ಅವಾರ್ಡ್, ಶ್ರವಣ ಅವಾರ್ಡ್, ಪ್ರಹ್ಲಾದ್ ಅವಾರ್ಡ್, ಏಕಲವ್ಯ ಅವಾರ್ಡ್, ಅಭಿಮನ್ಯು ಅವಾರ್ಡ್ ತಲಾ ರೂ.75 ಸಾವಿರಗಳು ಮತ್ತು ಸಾಮಾನ್ಯ ಅವಾರ್ಡ್ ರೂ.40 ಸಾವಿರ ಆಗಿರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ
ದೇಶದ ಎಲ್ಲಾ ರಾಜ್ಯಗಳಲ್ಲಿ ಅರ್ಜಿ ಆಹ್ವಾನ ಕಾರ್ಯ ನಡೆಸಲಾಗಿದೆ. 2021-22 ನೇ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿರುವ ಇಂಗ್ಲೀಷ್ ಆವೃತ್ತಿಯ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪಡೆದು ಅಥವಾ ವೆಬ್ಸೈಟ್:
www.iccw.co.in ನಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಳುಹಿಸಬೇಕು. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿನ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಯೆ ಉಪ ನಿರ್ದೇಶಕರಿಗೆ ಈ ಕುರಿತ ವಿವರವನ್ನು ನೀಡ ಬಹುದಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ