ನವದೆಹಲಿ: ಲಂಡನ್ನ ಭಾರತೀಯ ಹೈಕಮಿಷನ್ನಲ್ಲಿ (Indian High Commission) ಭಾರತೀಯ ಧ್ವಜವನ್ನು ಕೆಳಗಿಳಿಸಿದ ಖಲಿಸ್ತಾನಿ ಬೆಂಬಲಿಗರ ಕೃತ್ಯವನ್ನು ಭಾರತೀಯ ಜನತಾ ಪಕ್ಷ (Bhartiya Janata Party) ಸೋಮವಾರ ಖಂಡಿಸಿದೆ. ಸೋಮವಾರ ಚಾಣಕ್ಯಪುರಿಯ ಬ್ರಿಟಿಷ್ ಹೈಕಮಿಷನರ್ ಮುಂಭಾಗ ಸಿಖ್ ಸಮುದಾಯದ (Sikh community) ಕೆಲವು ಸದಸ್ಯರು ನಡೆಸಿದ ಪ್ರತಿಭಟನೆಯನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ (Manjinder Singh Sirsa) ಸಮರ್ಥಿಸಿಕೊಂಡಿದ್ದಾರೆ. " ಭಾರತದ ಸಿಖ್ಖರು ಬ್ರಿಟಿಷ್ ಹೈಕಮಿಷನ್ನಲ್ಲಿ (British High Commission) ತಮ್ಮ ಪ್ರತಿಭಟನೆಯ ಮೂಲಕ ಇಡೀ ಸಮೂದಾಯ ದೇಶದ ಪರ ನಿಂತಿದೆ ಎನ್ನುವುದನ್ನು ಜಗತ್ತಿಗೆ ಗಟ್ಟಿಯಾದ ಮತ್ತು ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ " ಎಂದು ಅವರು ಹೇಳಿದ್ದಾರೆ.
ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಕಾರ್ಯಾಚರಣೆ
ಅಮೃತಸರದ ಅಜ್ನಾಲ ಪೊಲೀಸ್ ಠಾಣೆಗೆ ನುಗ್ಗಿ ಹಿಂಸಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ಖಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ಖಂಡಿಸಿ ಖಲಿಸ್ತಾನ ಬೆಂಬಲಿಗರು ಬ್ರಿಟನ್ನಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಇಳಿಸಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ವತಃ ಸಿಖ್ ಸಮುದಾಯ ಈ ಕೃತ್ಯವನ್ನು ಖಂಡಿಸಿ ನವದೆಹಲಿಯಲ್ಲಿರುವ ಬ್ರಿಟೀಷ್ ಹೈಕಮಿಷನ್ ಮುಂದೆ ಪ್ರತಿಭಟನೆ ನಡೆಸಿವೆ.
ಇದನ್ನೂ ಓದಿ: Canadaದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿಗೆ ಗಡಿಪಾರು ನೋಟಿಸ್; ಬ್ರಿಜೇಶ್ ಮಿಶ್ರಾನಿಂದ ವೀಸಾ ವಂಚನೆ
ದೇಶ ವಿರೋಧಿ ಸಂಘಟನೆಗಳ ಸೂಚನೆ ಮೇರೆಗೆ ದುಷ್ಕೃತ್ಯ
ಸಿರ್ಸಾ ಅವರು ಇದೇ ಸಂದರ್ಭದಲ್ಲಿ ಭಾರತಕ್ಕೆ ಸಿಖ್ ಸಮುದಾಯವನ್ನು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು, " ಸಿಖ್ ಸಮುದಾಯದ ಜನರು ವಿದೇಶಕ್ಕೆ ಹೋಗುವ ಮೂಲಕ ತಮ್ಮ ಒಳ್ಳೆಯ ಕಾರ್ಯಗಳಿಂದ ದೇಶವನ್ನು ಹೆಮ್ಮೆ ಪಡಿಸಿದ್ದಾರೆ, ಆದರೂ ಭಾರತ ವಿರೋಧಿ ಸಂಘಟನೆಗಳ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುವವರು ಎಲ್ಲೆಡೆ ಇದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ರಾಷ್ಟ್ರಧ್ವಜಕ್ಕೆ ಅವಮಾನ ಸಹಿಸಲ್ಲ
ಸೋಮವಾರ ದೆಹಲಿಯ ಚಾಣಕ್ಯಪುರಿಯಲ್ಲಿ, ಸಿಖ್ ಪ್ರತಿಭಟನಾಕಾರರು " ಭಾರತ್ ಹಮಾರಾ ಸ್ವಾಭಿಮಾನ್ ಹೈ (ಭಾರತ ನಮ್ಮ ಹೆಮ್ಮೆ) ಘೋಷಣೆಯನ್ನು ಕೂಗಿದರು ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ನಾವು ಸಹಿಸುವುದಿಲ್ಲ. ಲಂಡನ್ನಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಇಡೀ ರಾಷ್ಟ್ರ ಮತ್ತು ನಾವು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸುತ್ತೇವೆ " ಎಂದು ಪ್ರತಿಭಟನಾಕಾರರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ನಾವು ಸಿಖ್ಖರು ನಮ್ಮ ದೇಶದ ಅತ್ಯಗತ್ಯ ಭಾಗ. ಪ್ರತಿಯೊಬ್ಬ ಸಿಖ್ ಒಗ್ಗಟ್ಟಾಗಿರಲು ಮತ್ತು ಶಾಂತಿಯ ಸಂದೇಶವನ್ನು ರವಾನಿಸಲು ಬಯಸುತ್ತಾನೆ, ಆದರೆ ನಮ್ಮ ರಾಷ್ಟ್ರಧ್ವಜವನ್ನು ಅವಮಾನಿಸಿದರೆ, ನಾವು ಅದನ್ನು ಸಹಿಸುವುದಿಲ್ಲ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಹೇಳಿದ್ದಾರೆ.
ಬ್ರಿಟಿಷ್ ಅಧಿಕಾರಿಗಳಿಂದ ಖಂಡನೆ
ಬ್ರಿಟಿಷ್ ಉನ್ನತ ಅಧಿಕಾರಿಗಳು ಕೂಡ ಘಟನೆಯನ್ನು ಅವಮಾನಕರ ಮತ್ತು ಇಂತಹ ಘಟನೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದ್ದಾರೆ. ಯುಕೆ ಸರ್ಕಾರವು ಭಾರತೀಯ ಹೈಕಮಿಷನ್ನ ಭದ್ರತೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಅಮೃತ್ಪಾಲ್ ಸಿಂಗ್ನ 112 ಬೆಂಬಲಿಗರ ಬಂಧನ
ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಅಮೃತ್ಪಾಲ್ ಸಿಂಗ್ನ 112 ಬೆಂಬಲಿಗರನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ನಾಪತ್ತೆಯಾಗಿದ್ದಾನೆ. ಭಾನುವಾರ ಒಂದೇ ದಿನ ಆತನ 34 ಬೆಂಬಲಿಗರನ್ನು ಬಂಧಿಸಲಾಗಿದ್ದು, ಪ್ರಮುಖವಾಗಿ ಅಮೃತ್ಪಾಲ್ ಸಿಂಗ್ನ ಆಪ್ತ ಸಹಾಯಕ ದಲ್ಜೀತ್ ಸಿಂಗ್ ಕಲ್ಸಿಯನ್ನು ಹರಿಯಾಣದ ಗುರ್ಗಾಂವ್ನಲ್ಲಿ ಬಂಧಿಸಲಾಗಿದೆ. ಆತನ ಸಂಬಂಧಿಕರನ್ನು ಬಂಧಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ