ನವ ದೆಹಲಿ (ಆಗಸ್ಟ್ 18); ಫೇಸ್ಬುಕ್ ಮತ್ತು ಬಿಜೆಪಿ ಪಕ್ಷದ ನಂಟಿನ ಕುರಿತು ಅಮೆರಿಕದ ಪತ್ರಿಕೆ ವಾಲ್ಸ್ಟ್ರೀಟ್ ಜರ್ನಲ್ ವರದಿಯಿಂದಾಗಿ ಭುಗಿಲೆದ್ದಿರುವ ವಿವಾದ ಭಾರತದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಫೇಸ್ಬುಕ್ ಕಾರ್ಯಸೂಚಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿ ತರೂರ್ ಈ ಕುರಿತು ಫೇಸ್ಬುಕ್ ಸಂಸ್ಥೆಯನ್ನು ಪ್ರಶ್ನಿಸುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ಇದನ್ನು ಒಪ್ಪದ ಬಿಜೆಪಿ ಸಂಸದ ನಿಶಿಕಾಂತ್, ದುಬೆ ತರೂರ್ ವಿರುದ್ಧ ಸ್ಪೀಕರ್ಗೆ ದೂರು ನೀಡಲು ಮುಂದಾಗಿರುವ ವಿಚಾರ ಇದೀಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿದೆ.
ಫೇಸ್ಬುಕ್ನ ಕಟೆಂಟ್ ಪಾಲಿಸಿ ನಿಯಮಗಳು ಆಡಳಿತರೂಢ ಬಿಜೆಪಿ ಪರವಾಗಿವೆ. ಬಿಜೆಪಿ ಮತ್ತು ಹಿಂದೂತ್ವ ನಾಯಕರು ದ್ವೇಷ ಭಾಷಣಗಳು ತನ್ನ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದರೂ ಕೂಡ ಫೇಸ್ಬುಕ್ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ಕಾರ್ಯಕರ್ತರ ನಿಯಮ ಉಲ್ಲಂಘನೆಗಳಿಗೆ ಶಿಕ್ಷೆ ನೀಡುವುದು ಅಥವಾ ಪ್ರಶ್ನಿಸುವುದು “ದೇಶದ ಕಂಪನಿಯ ವ್ಯವಹಾರ ಭವಿಷ್ಯವನ್ನು ಹಾನಿಗೊಳಿಸುತ್ತದೆ” ಎಂದು ಫೇಸ್ಬುಕ್ನ ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವಾಲ್ಸ್ಟ್ರೀಟ್ ಜರ್ನಲ್ ವಿಶೇಷ ವರದಿ ಮಾಡಿತ್ತು.
ಶಶಿ ತರೂರ್ರವರ ಫೇಸ್ಬುಕ್ ಅನ್ನು ಪ್ರಶ್ನಿಸುವ ನಿರ್ಣಯವನ್ನು ಸಂಸದೀಯ ಸ್ಥಾಯಿ ಸಮಿತಿಯ ಭಾಗವಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವ ಮೊಯಿತ್ರ ಬೆಂಬಲಿಸಿದರೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ತೀವ್ರವಾಗಿ ವಿರೋಧಿಸಿದ್ದಾರೆ. ಹಾಗೆ ಮಾಡಲು ಅವರಿಗೆ ಅಧಿಕಾರವಿಲ್ಲ ಎಂದು ದುಬೆ ವಾದಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರ ಅಭಿಪ್ರಾಯ ಪಡೆಯದೇ ಏಕಪಕ್ಷಿಯವಾಗಿ ಫೇಸ್ಬುಕ್ ಅನ್ನು ಪ್ರಶ್ನಿಸುವ ನಿರ್ಣಯ ಘೋಷಿಸಿದ ಶಶಿ ತರೂರ್ ವಿರುದ್ಧ ಲೋಕಸಭಾ ಸ್ವೀಕರ್ ಓಂ ಬಿರ್ಲಾರವರಿಗೆ ಪತ್ರ ಬರೆಯುವುದಾಗಿ ಸಂಸದ ದುಬೆ ತಿಳಿಸಿದ್ದಾರೆ.
ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಚೋದನಾಕಾರಿ ಭಾಷಣಗಳಿಗೆ ಹಲವು ಬಾರಿ ವಿವಾದಕ್ಕೆ ಈಡಾಗಿದ್ದಾರೆ. ಅವರ ಮುಸ್ಲಿಂ ವಿರೋಧಿ ಪೋಸ್ಟ್ಗಳನ್ನು ತೆಗೆದುಹಾಕಲು ಫೇಸ್ಬುಕ್ ಮುಂದಾಗಿರಲಿಲ್ಲ. ಹಾಗೆಯೇ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಹಲವು ದ್ವೇಷ ಭಾಷಣಗಳನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ.
ಆದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್ಬುಕ್ ಭಾರತದ ಉನ್ನತ ಸಾರ್ವಜನಿಕ ನೀತಿ ಕಾರ್ಯನಿರ್ವಾಹಕ ಅಧಿಕಾರಿಣಿ ಅಂಖಿ ದಾಸ್ ನಿರಾಕರಿಸಿದ್ದಾರೆ. ಆಡಳಿತಾರೂಢ ಪಕ್ಷದೊಂದಿಗಿರುವ ಸಂಬಂಧಕ್ಕೆ ಧಕ್ಕೆಯಾದೀತು ಎಂಬ ಹೆದರಿಕೆಯೇ ಇದಕ್ಕೆ ಕಾರಣ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಬಿಜೆಪಿ ಮತ್ತು ಆರ್ಎಸ್ಎಸ್ ಫೇಸ್ಬುಕ್ ಅನ್ನು ನಿಯಂತ್ರಿಸುತ್ತಿದ್ದಾರೆ. ಅವರು ಪ್ರತಿನಿತ್ಯ ಸುಳ್ಳು ಸುದ್ದಿಗಳು ಮತ್ತು ದ್ವೇಷಭಾಷಣವನ್ನು ಹರಡುವ ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಕೊನೆಗೂ ಅಮೆರಿಕ ಮೂಲದ ಪತ್ರಿಕೆಯೊಂದು ಫೇಸ್ಬುಕ್ ಬಗೆಗಿನ ಸತ್ಯವನ್ನು ಹೊರತೆಗೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.
ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಸಾಮಾಜಿಕ / ಆನ್ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಗಟ್ಟುವುದರ ಸಾಕ್ಷಿಯಾಗಿ ಸಮಿತಿಯು ಪರಿಗಣಿಸಲ್ಪಡುತ್ತದೆ ಎಂದು ಶಶಿ ತರೂರ್ ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ "ಸಂಸದೀಯ ಸಮಿತಿಯನ್ನು ತಮ್ಮ ಪಕ್ಷದ ನಾಯಕರ ಅಹಂಕಾರವನ್ನು ಪೂರೈಸಲು ರಾಜಕೀಯ ವೇದಿಕೆಯನ್ನಾಗಿ ಮಾಡಬಾರದು. ಸಮಿತಿ ಸದಸ್ಯರು ಮತ್ತು ಸ್ಪೀಕರ್ ರವರ ಅನುಮತಿ ಇಲ್ಲದೇ ಏನನ್ನು ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ಕಾರ್ಯಸೂಚಿಯನ್ನು ಜಾರಿಗೊಳಿಸುವುದನ್ನು ನಿಲ್ಲಿಸಿ" ಎಂದು ಸಮಿತಿ ಸದಸ್ಯ ದುಬೆ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮೊಹುವ ಮೊಯಿತ್ರಾ "ನಾನು ಕೂಡ ಸಮಿತಿಯ ಸದಸ್ಯೆ. ಅಜೆಂಡಾವನ್ನು ವರ್ಷದ ಆರಂಭದಲ್ಲಿಯೇ ಚರ್ಚಿಸಿ ಸ್ಪೀಕರ್ರವರ ಒಪ್ಪಿಗೆ ಪಡೆಯಲಾಗಿದೆ. ಅದನ್ನು ಯಾವಾಗ ಜಾರಿಗೊಳಿಸಬೇಕು ಎಂಬ ಅಧಿಕಾರ ಸಮಿತಿ ಅಧ್ಯಕ್ಷರಿಗಿರುತ್ತದೆ" ಎಂದು ತಿಳಿಸಿದ್ದಾರೆ. ಅಲ್ಲದೆ, ಫೇಸ್ಬುಕ್ ಹಿತಾಸಕ್ತಿ ಕಾಪಾಡಲು ಹೇಗೆ ಬಿಜೆಪಿ ಮೇಲಕ್ಕೆ, ಕೆಳಕ್ಕೆ ಜಿಗಿಯುತ್ತದೆ ಅಲ್ಲವೇ ಎಂದು ಮೊಯಿತ್ರಾ ಟೀಕಿಸಿದ್ದಾರೆ.
ಇದನ್ನೂ ಓದಿ : ಡಿ.ಜೆ. ಹಳ್ಳಿ ಗಲಭೆ ಮರೆಮಾಚಲು ಡಿಕೆಶಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ; ಡಿಸಿಎಂ ಅಶ್ವತ್ಥ್ ನಾರಾಯಣ್ ಕಿಡಿ
ಮೊಹುವ ಮೊಯಿತ್ರಾರವರು ಹೇಳಿರುವುದು ಸರಿ ಇದೆ. ಅಧ್ಯಕ್ಷರ ನಿರ್ಧಾರವನ್ನು ವಿರೋಧಿಸುವ ಮೂಲಕ ಸಮಿತಿಯ ಕಾರ್ಯನಿರ್ವಹಣೆಗೆ ದುಬೆ ಅಪಖ್ಯಾತಿ ತಂದಿದ್ದಾರೆ. ಅವರು ಸಾರ್ವಜನಿಕರ ಒಳಿತಿಗಾಗಿ ಸಮಿತಿ ಕೆಲಸ ಮಾಡಬಾರದು ಎಂದು ಹೇಳುತ್ತಿದ್ದಾರೆಯೆ? ಎಂದು ತರೂರ್ ವ್ಯಂಗ್ಯವಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸಹಿ ಮಾಡಿದ ಆದೇಶದ ಮೂಲಕ ಸಾಕ್ಷಿಯನ್ನು ಕರೆಸಿಕೊಳ್ಳಬಹುದು ಮತ್ತು ಸಮಿತಿಯ ಬಳಕೆಗೆ ಅಗತ್ಯವಾದ ದಾಖಲೆಗಳನ್ನು ತಯಾರಿಸಬೇಕು ಎಂದು ದುಬೆ ಪ್ರತಿ ಉತ್ತರ ನೀಡಿದ್ದಾರೆ.
ಇದಕ್ಕೆ ಶಶಿ ತರೂರ್ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು. ಸಮಿತಿಯ ಅಧ್ಯಕ್ಷರ ಕಾರ್ಯನಿರ್ವಹಣೆಗೆ ಯಾರು ಚ್ಯುತಿ ತಂದರು ಎಂಬುದನ್ನು ಕಾಲ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ