ನವದೆಹಲಿ, ಜೂ. 7: ರಾಷ್ಟ್ರ ರಾಜಧಾನಿ ದೆಹಲಿಯ ನಂತರ ಪಂಜಾಬ್ ಚುನಾವಣೆ ಗೆದ್ದ ಬಳಿಕ ಉತ್ಸಾಹಭರಿತವಾಗಿರುವ ಆಮ್ ಆದ್ಮಿ ಪಕ್ಷ (Aam Admi Party) ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದೆ. ಜೊತೆಗೆ ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೂ (Karnataka Assembly Elections) ವಿಶೇಷ ತಯಾರಿ ನಡೆಸುತ್ತಿದೆ. ನ್ಯೂಸ್ 18 ಕನ್ನಡದ ಜೊತೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ಕರ್ನಾಟಕದ ಉಸ್ತುವಾರಿ ದಿಲೀಪ್ ಪಾಂಡೆ (Dilip Pandey) ಅವರು ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ನಿರ್ಣಾಯಕ ಪಾತ್ರ ವಹಿಸುವುದಾಗಿ ತಿಳಿಸಿದ್ದಾರೆ. ಯಾವುದೇ ಪಕ್ಷದಲ್ಲಿರುವ ಸಜ್ಜನ ರಾಜಕಾರಣಿಗಳಿಗೆ ಆಮ್ ಆದ್ಮಿ ಪಕ್ಷ ಸ್ವಾಗತ ಕೋರಲಿದೆ.
ಶೀಘ್ರವೇ ಇನ್ನಷ್ಟು ನಾಯಕರು ಆಪ್
ಇಂದು (ಜೂನ್ 7) ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಮುಖ್ಯಮಂತ್ರಿ ಚಂದ್ರು ಅವರಿಗೆ ಸ್ವಾಗತ ಕೋರುವ ಮೂಲಕ ಮಾತು ಆರಂಭಿಸಿದ ದಿಲಿಪ್ ಪಾಂಡೆ ಮುಂದಿನ ದಿನಗಳಲ್ಲಿ ಕರ್ನಾಟಕದಲ ಇನ್ನೂ ಹಲವು ನಾಯಕರು ಆಪ್ ಸೇರಲಿದ್ದಾರೆ ಎಂದು ಹೇಳಿದರು. ಆ ಪೈಕಿ ಆಡಳಿತರೂಢ ಬಿಜೆಪಿಯೂ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಡೆಯಿಂದ ಬೇಸತ್ತಿರುವ ಹಲವಾರು ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಯಾವುದೇ ಪಕ್ಷದಲ್ಲಿರುವ ಸಜ್ಜನ ರಾಜಕಾರಣಿಗಳಿಗೆ ಆಮ್ ಆದ್ಮಿ ಪಕ್ಷ ಸ್ವಾಗತ ಕೋರಲಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೂ ಬೇಕಿದೆ ದೆಹಲಿ ಮಾಡೆಲ್
ಆಮ್ ಆದ್ಮಿ ಪಕ್ಷದ ದೆಹಲಿ ಮಾಡೆಲ್ ಆಡಳಿತಕ್ಕೆ ಈಗ ಪಂಜಾಬಿನಲ್ಲಿ ಮಾನ್ಯತೆ ಸಿಕ್ಕಿದೆ. ಮುಂದೆ ಕರ್ನಾಟಕದಲ್ಲೂ ಮಾನ್ಯತೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ದಿಲೀಪ್ ಪಾಂಡೆ ಅವರು, ಕರ್ನಾಟಕದ ದುರಾವಸ್ಥೆ ಮತ್ತು ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರಿನಲ್ಲಿ ಆಸ್ಪತ್ರೆಯ ನೀರು ಕುಡಿದು ಜನ ಅಸ್ವಸ್ಥರಾಗಿದ್ದಾರೆ. ಇಲ್ಲಿನ ಸರ್ಕಾರದ ಕಾರ್ಯಕ್ಷಮತೆ ಎಷ್ಟು ಕಳಪೆಯಿಂದ ಕೂಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆಸ್ಪತ್ರೆಗಳು ಮಾತ್ರವಲ್ಲ, ಕರ್ನಾಟಕದಲ್ಲಿ ಶಾಲೆಗಳ ಸ್ಥಿತಿ ಕೂಡ ದಯನೀಯವಾಗಿದೆ. ಆಡಳಿತ ನಡೆಸುತ್ತಿರುವವರಿಗೆ ಇವ್ಯಾವೂ ವಿಷಯಗಳೇ ಅಲ್ಲ ಎನ್ನುವಂತಿದೆ. ಆಮ್ ಆದ್ಮಿ ಪಕ್ಷ ಜನರಿಗೆ ಬೇಕಾದ ಆಡಳಿತ ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ: Navjot Singh Sidhu: ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಸಿಧು!
ಬಿಬಿಎಂಪಿ ಬಗ್ಗೆ ಕಾಳಜಿ ಇಲ್ಲ
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಇರುವ ಗುಂಡಿಗಳು ಸಂಪೂರ್ಣವಾಗಿ ಮಾಯವಾಗಿಲ್ಲ. ಬೆಂಗಳೂರಿನ ರಸ್ತೆ ಗುಂಡಿಗಳು ಜನರನ್ನು ಬಲಿ ಪಡೆಯುತ್ತಿವೆ. ಆದರೂ ಆಳುವವರಿಗೆ ಈ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದ ದಿಲೀಪ್ ಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Pro Khalistan Slogans: ಪಂಜಾಬ್ನ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಪರ ಘೋಷಣೆ
ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲಲಿದೆ
ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲಲಿದೆ. ಅದಕ್ಕಾಗಿ ತಯಾರಿ ನಡೆದಿದೆ ಎಂದರು. ಬಿಬಿಎಂಪಿ ಮಾತ್ರವಲ್ಲ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಆಮ್ ಆದ್ಮಿ ಪಕ್ಷ ಸ್ವೀಪ್ ಮಾಡಲಿದೆ. ಅದಕ್ಕಾಗಿ ಈಗ ಗ್ರಾಮ ಸಂಪರ್ಕ ಅಭಿಯಾನ ನಡೆಸಲಾಗುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳ ಬಳಿಕ ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಪ್ ಮಹತ್ತರ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ