Mamata Banerjee: ಬಿಜೆಪಿ ಭ್ರಷ್ಟ ನಾಯಕರನ್ನು ಖರೀದಿ ಮಾಡಬಹುದೇ ಹೊರತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಲ್ಲ; ಮಮತಾ ಬ್ಯಾನರ್ಜಿ
ಕೆಲ ನಾಯಕರು ಕೆಟ್ಟ ಮಾರ್ಗದಿಂದ ಸಂಪಾದಿಸಿದ ಹಣವನ್ನು ಕಾಪಾಡಿಕೊಳ್ಳುವ ಸಲುವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ ಸೇರಿರುವ ನಾಯಕರೆಲ್ಲರೂ ಡಕಾಯಿತರು" ಎಂದು ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ.
ಕೋಲ್ಕತ್ತಾ (ಫೆಬ್ರವರಿ 03); ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಿಗೆ ಟಿಎಂಸಿ ಪಕ್ಷದ ಶಾಸಕರು ಹಾಗೂ ಸಚಿವರ ದಂಡು ಬಿಜೆಪಿ ಗೆ ಸೇರ್ಪಡೆಯಾಗುತ್ತಿರುವ ಪಕ್ಷಾಂತರ ಪರ್ವ ಮುಂದುವರೆಯುತ್ತಲೇ ಇದೆ. ಮಾಹಿತಿಯ ಪ್ರಕಾರ ಈವರೆಗೆ ಮೂವರು ಸಚಿವರು ಸೇರಿದಂತೆ ಒಟ್ಟು 14 ಜನ ಶಾಸಕರು ಟಿಎಂಸಿ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಕೇಸರಿ ಪಕ್ಷ ಕೆಲ ಭ್ರಷ್ಟ ನಾಯಕರನ್ನು ಖರೀದಿಸಬಹುದೇ ಹೊರತು, ಪಕ್ಷದ ಕಟಿಬದ್ಧ ಕಾರ್ಯಕರ್ತರನ್ನಲ್ಲ” ಎಂದು ವಾಗ್ದಾಳಿ ನಡೆಸುವ ಮೂಲಕ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಶಾಸಕ ದೀಪಕ್ ಹಲ್ದಾರ್ ಟಿಎಂಸಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಬೆನ್ನ ಹಿಂದೆಯೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, "ತೃಣಮೂಲ ಕಾಂಗ್ರೆಸ್ ನಲ್ಲಿ ಭ್ರಷ್ಟ ನಾಯಕರಿಗೆ ಜಾಗವಿಲ್ಲ. ಪಕ್ಷ ತೊರೆಯುವವರು ಆದಷ್ಟು ಬೇಗ ಹೋಗಲಿ ಎಂದು ಶುಭಹಾರೈಸುತ್ತೇನೆ. ಬಿಜೆಪಿ ಪಕ್ಷ ಕೇವಲ ಭ್ರಷ್ಟರನ್ನು ಖರೀದಿ ಮಾಡಬಹುದೇ ವಿನಃ, ಟಿಎಂಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
"ಕೆಲ ನಾಯಕರು ಕೆಟ್ಟ ಮಾರ್ಗದಿಂದ ಸಂಪಾದಿಸಿದ ಹಣವನ್ನು ಕಾಪಾಡಿಕೊಳ್ಳುವ ಸಲುವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ ಸೇರಿರುವ ನಾಯಕರೆಲ್ಲರೂ ಡಕಾಯಿತರು" ಎಂದು ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, "ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಾ-ಮಾಟಿ-ಮನುಷ್ ಘೋಷಣೆಯಡಿ ಟಿಎಂಸಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಮಾಧ್ಯಮಗಳ ಸುದ್ದಿಗೆ ಯಾರೂ ಕಿವಿಗೊಡಬೇಡಿ. ಟಿಎಂಸಿ ನಿಮ್ಮ ಮನಸ್ಸಿನಲ್ಲಿದೆ. ನೀವು ಖಚಿತ ಭರವಸೆ ನೀಡಿದರೆ ನಾನು ಒಳ್ಳೆಯ ಭವಿಷ್ಯದ ಬಗ್ಗೆ ಖಚಿತಪಡಿಸುತ್ತೇನೆ" ಎಂದು ಪಕ್ಷದ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಸುವೇಂದು ಅಧಿಕಾರಿ, ರಾಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯ, ಪ್ರಬೀರ್ ಘೋಷಲ್, ರತನ್ ಚಕ್ರವರ್ತಿ, ರುದ್ರವಿಲ್ ಘೋಷ್ ಮೊದಲಾದ ನಾಯಕರು ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ