ಗುವಾಹಟಿ: ಮೇಘಾಲಯ ವಿಧಾನಸಭೆಗೆ (Meghalaya Assembly Election) ಚುನಾವಣೆ ಘೋಷಣೆಯಾದ ನಂತರ ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ಮೇಘಾಲಯದ ಮುಖ್ಯಮಂತ್ರಿ (Meghalaya CM) ಕಾನ್ರಾಡ್ ಕೆ ಸಂಗ್ಮಾ (Conrad K Sangma) ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ (BJP Candidate) ಮಾಜಿ ಭಯೋತ್ಪಾದಕ ನಾಯಕನನ್ನು (Militant Leader) ಕಣಕ್ಕಿಳಿಸುವ ಮೂಲಕ ಕೇಸರಿ ಪಡೆ ಅಚ್ಚರಿ ಮೂಡಿಸಿದೆ.
60 ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧೆ
ಹೌದು.. ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಪ್ರತಿನಿಧಿಸುವ ಸೌತ್ ತುರಾ ವಿಧಾನಸಭಾ ಕ್ಷೇತ್ರದಲ್ಲಿ ಮೇಘಾಲಯ ಬಿಜೆಪಿ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಭಯೋತ್ಪಾದಕ ಬೆರ್ನಾಡ್ ಮರಕ್ನನ್ನು (Bernard Marak) ಕಣಕ್ಕಿಳಿಸಲಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೇಘಾಲಯ ವಿಧಾನಸಭೆಯ ಎಲ್ಲಾ 60 ಕ್ಷೇತ್ರಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಚುನಾವಣೆಗೆ ಸ್ಪರ್ಧಿಸುವ ತನ್ನ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಗುರುವಾರ ಪ್ರಕಟಿಸಿದೆ.
ಏಕಾಂಗಿಯಾಗಿ ಸ್ಪರ್ಧಿಸಲು ಬಿಜೆಪಿ ನಿರ್ಧಾರ
ಕಳೆದ ತಿಂಗಳು ಆಡಾಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಾಯನ್ಸ್ ಜೊತೆಗೆ ಭಾರತೀಯ ಜನತಾ ಪಾರ್ಟಿ ತನ್ನ ಮೈತ್ರಿಯನ್ನು ಮುರಿದುಕೊಂಡಿತ್ತು. ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಪಕ್ಷ ಘೋಷಣೆ ಮಾಡಿತ್ತು. ಅಲ್ಲದೇ ಕಳೆದ ಕೆಲವು ತಿಂಗಳ ಹಿಂದೆ ಬೇರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ್ದ ಇತರ ನಾಯಕರು ಹಾಗೂ ಹಾಲಿ ಶಾಸಕರಿಗೂ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾಗಿದೆ.
ವೇಶ್ಯಾವಾಟಿಕೆ ಆರೋಪದಡಿ ಬಂಧನ
ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬೆರ್ನಾಡ್ ಮರಕ್ ಅವರು ಸಿಎಂ ವಿರುದ್ಧ ರಾಜಕೀಯ ವೈರಿಯಾಗಿ ಗುರುತಿಸಿಕೊಂಡಿದ್ದು, ಮೇಘಾಲಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಈ ಹಿಂದೆ ಭಯೋತ್ಪಾದನಾ ಕೃತ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ಅಲ್ಲದೇ, ತುರಾದಲ್ಲಿ ಇರುವ ತನ್ನ ಫಾರ್ಮ್ ಹೌಸ್ನಲ್ಲಿ ಅಕ್ರಮ ವೇಶ್ಯಾವಾಟಿಕೆ ಮತ್ತು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದಡಿ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದರು.
2014 ರಲ್ಲಿ ಶಸ್ತ್ರಾಸ್ತ್ರ ತ್ಯಾಗ ಮಾಡಿದ್ದ ಮರಕ್
ಇನ್ನು ಬಿಜೆಪಿ ಅಭ್ಯರ್ಥಿ ಬೆರ್ನಾಡ್ ಮರಕ್ ಅವರು ಗಾರೋ ಬುಡಕಟ್ಟು ಜನರಿಗಾಗಿ ಪ್ರತ್ಯೇಕ ರಾಜ್ಯ ರೂಪಿಸುವ ಸಂಬಂಧ ಅಚಿಕ್ ರಾಷ್ಟ್ರೀಯ ಸ್ವಯಂ ಸೇವಕ ಪರಿಷತ್ ಸಂಘಟನೆಗೆ ಸೇರಿಕೊಂಡಿದ್ದರು. 2014ರಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಿ ತಮ್ಮ ಸಂಘಟನೆಯನ್ನು ವಿಸರ್ಜಿಸಿದ್ದರು. ಬಳಿಕ ರಾಜಕೀಯಕ್ಕೆ ಸೇರುವ ಕಾರಣಕ್ಕೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಳ್ಳಲು ಶುರು ಮಾಡಿದ್ದರು.
ಫೆ. 27 ರಂದು ನಡೆಯಲಿದೆ ಚುನಾವಣೆ
ಮೇಘಾಲಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ನಂತರ ಅಧಿಕಾರದ ಗದ್ದುಗೆ ಏರಲು ಪ್ರಾದೇಶಿಕ ಆಡಳಿತಾರೂಢ ಪಕ್ಷದ ಜೊತೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಇನ್ನಿಲ್ಲದ ತಂತ್ರ ರೂಪಿಸುತ್ತಿದೆ. ಮತದಾರರ ಮನ ಓಲೈಕೆ ಮಾಡಲು ಕಸರತ್ತು ನಡೆಸಿ ಗೆಲ್ಲಲೇಬೇಕೆಂದು ರಾಜಕೀಯ ಪಕ್ಷಗಳು ಪಣತೊಟ್ಟಿದೆ. ಫೆಬ್ರವರಿ 27ರಂದು ಮೇಘಾಲಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ಬಾರಿ ಮೇಘಾಲಯದ ಗದ್ದುಗೆಯನ್ನು ಯಾರು ಹಿಡಿಯಬಹುದು ಎನ್ನುವ ಪ್ರಶ್ನೆ ಭಾರೀ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ