• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bihar Election Result 2020: ಬಿಹಾರದಲ್ಲಿ ಜಯಭೇರಿ ಬಾರಿಸಿದ ಎನ್​ಡಿಎ; ನಿತೀಶ್​ ಕುಮಾರ್​ಗೆ ಮತ್ತೊಮ್ಮೆ ಸಿಎಂ ಪಟ್ಟ ಖಚಿತ

Bihar Election Result 2020: ಬಿಹಾರದಲ್ಲಿ ಜಯಭೇರಿ ಬಾರಿಸಿದ ಎನ್​ಡಿಎ; ನಿತೀಶ್​ ಕುಮಾರ್​ಗೆ ಮತ್ತೊಮ್ಮೆ ಸಿಎಂ ಪಟ್ಟ ಖಚಿತ

ನಿತೀಶ್​ ಕುಮಾರ್- ನರೇಂದ್ರ ಮೋದಿ

ನಿತೀಶ್​ ಕುಮಾರ್- ನರೇಂದ್ರ ಮೋದಿ

Bihar Election Result 2020: ಹಲವು ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ ಎನ್​ಡಿಎ ಸತತ 14 ಗಂಟೆಗಳ ಮತ ಎಣಿಕೆಯ ಬಳಿಕ ಗೆಲುವಿನ ನಗು ಬೀರಿದೆ. ಇದರಿಂದ ಬಿಹಾರದ ಅತಿದೊಡ್ಡ ಪಕ್ಷವಾಗಿ ಆರ್​ಜೆಡಿ ಹೊರಹೊಮ್ಮಿದ್ದರೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಪದವಿಯ ಕನಸು ಕನಸಾಗಿಯೇ ಉಳಿಯಲಿದೆ.

ಮುಂದೆ ಓದಿ ...
  • Share this:

    ಪಾಟ್ನಾ (ನ. 11): ಮತಗಟ್ಟೆಯ ಸಮೀಕ್ಷೆಯನ್ನು ಬುಡಮೇಲಾಗಿಸಿ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೊನೆಗೂ ಎನ್​ಡಿಎ ಅಧಿಕಾರಕ್ಕೆ ಬಂದಿದೆ. ನಿತೀಶ್​ ಕುಮಾರ್ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗುವುದು ಪಕ್ಕಾ ಎನ್ನಲಾಗಿದೆ. ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಮೈತ್ರಿಕೂಡ ಜಯಭೇರಿ ಬಾರಿಸಿದೆ. ಸಾಕಷ್ಟು ಏರಿಳಿತಗಳ ನಡುವೆಯೂ, ಹಲವು ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ ಎನ್​ಡಿಎ ಸತತ 14 ಗಂಟೆಗಳ ಮತ ಎಣಿಕೆಯ ಬಳಿಕ ಗೆಲುವಿನ ನಗು ಬೀರಿದೆ. ಇದರಿಂದ ಬಿಹಾರದ ಅತಿದೊಡ್ಡ ಪಕ್ಷವಾಗಿ ಆರ್​ಜೆಡಿ ಹೊರಹೊಮ್ಮಿದ್ದರೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಪದವಿಯ ಕನಸು ಕನಸಾಗಿಯೇ ಉಳಿಯಲಿದೆ. ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಜೆಡಿಯು ಪಕ್ಷದ ನಿತೀಶ್ ಕುಮಾರ್ ಮತ್ತೊಮ್ಮೆ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ.


    ನಿನ್ನೆಯ ಮತ ಎಣಿಕೆಯ ಆರಂಭದಲ್ಲಿ ಎನ್​ಡಿಎ ಮತ್ತು ಮಹಾಘಟಬಂಧನ್ ಮಧ್ಯೆ ತೀವ್ರ ಪೈಪೋಟಿ ಮತ್ತು ಸಮಾನ ಮುನ್ನಡೆ ಸ್ಥಿತಿ ಇದ್ದರೂ ಮಧ್ಯಾಹ್ನದ ನಂತರ ಎನ್​ಡಿಎ ಮುನ್ನಡೆ ಸಾಧಿಸಿತ್ತು. ಒಂದುವೇಳೆ ಬಿಹಾರದಲ್ಲಿ ಎನ್‌ಡಿಎ ಜಯ ಸಾಧಿಸಿದರೆ ನಿತೀಶ್‌ ಕುಮಾರ್‌ ಅವರೇ ಸರ್ಕಾರ ಮುನ್ನಡೆಸುವರು ಎಂದು ಹೇಳಲಾಗಿತ್ತು. ಅದರಂತೆ ನಿತೀಶ್​ ಕುಮಾರ್ ಮತ್ತೊಮ್ಮೆ ಬಿಹಾರದ ಸಿಎಂ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.


    ಇತ್ತ ಕಾಂಗ್ರೆಸ್ ಕೂಡ ನಿತೀಶ್​ ಕುಮಾರ್​ಗೆ ಆಹ್ವಾನ ನೀಡಿದ್ದು, ನಮ್ಮ ಜೊತೆ ಕೈ ಜೋಡಿಸಿ, ತೇಜಸ್ವಿ ಯಾದವ್​ಗೆ ಬೆಂಬಲ ನೀಡಬೇಕಾಗಿ ಮನವಿ ಮಾಡಿದ್ದಾರೆ. ಎನ್​ಡಿಎ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ನಿತೀಶ್​ ಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಲು ಒಪ್ಪದಿದ್ದರೆ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳಲು ದಿಗ್ವಿಜಯ್ ಸಿಂಗ್ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿಯನ್ನು ಯಾವ ಕಾರಣಕ್ಕೂ ನಂಬುವಂತಿಲ್ಲ. ಲಾಲೂ ಪ್ರಸಾದ್ ಯಾದವ್ ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಗೆ ಬೆಂಬಲವಾಗಿದ್ದವರು. ಅವರ ಪಕ್ಷ ಅಧಿಕಾರಕ್ಕೆ ಬರಲು ನೀವು ಬಿಜೆಪಿಯನ್ನು ತೊರೆದು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್​ ಜೊತೆ ಕೈ ಜೋಡಿಸಿ ಎಂದು ದಿಗ್ವಿಜಯ್ ಸಿಂಗ್ ಆಹ್ವಾನ ನೀಡಿದ್ದಾರೆ.



    ನಿನ್ನೆ ಮಧ್ಯರಾತ್ರಿ ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ, ಜೆಡಿಯು ನೇತೃತ್ವದ ಎನ್​ಡಿಎ ಮೈತ್ರಿಕೂಟ 125 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಮಹಾಘಟಬಂಧನ್ 110 ಸ್ಥಾನಗಳನ್ನು ಪಡೆದಿದೆ. 75 ಸ್ಥಾನಗಳಲ್ಲಿ ಜಯ ಸಾಧಿಸಿರುವ ಆರ್​ಜೆಡಿ ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯುಗಿಂತ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೂ ಈ ಮೊದಲೇ ಘೋಷಿಸಿದಂತೆ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

    ಹೀಗಾಗಿ, ನಿತೀಶ್​ ಕುಮಾರ್ ಕಡಿಮೆ ಸ್ಥಾನಗಳನ್ನು ಪಡೆದರೂ ಸಿಎಂ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ ಬಿಹಾರದಲ್ಲಿ ಬಿಜೆಪಿ 72 ಸ್ಥಾನಗಳನ್ನು ಪಡೆದಿದೆ. ಜೆಡಿಯು 42 ಸ್ಥಾನಗಳನ್ನು ಪಡೆದಿದೆ. ಮಹಾಘಟಬಂಧನ್​ದಲ್ಲಿ ಆರ್​ಜೆಡಿ 75, ಕಾಂಗ್ರೆಸ್ 19, ಎಡಪಕ್ಷಗಳು 16 ಸ್ಥಾನಗಳನ್ನು ಗಳಿಸಿವೆ.

    Published by:Sushma Chakre
    First published: