news18-kannada Updated:October 28, 2020, 10:03 AM IST
ಮತದಾನ ಮಾಡಲು ಬಿಹಾರದ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತಿರುವ ಜನ.
ಬಿಗಿ ಭದ್ರತೆ ಮತ್ತು ಕೋವಿಡ್ -19 ಮಾರ್ಗಸೂಚಿಗಳ ಮಧ್ಯೆ ಇಂದು ಬಿಹಾರ ವಿಧಾನಸಭೆಗೆ ಮೂರು ಹಂತದ ಭಾಗವಾಗಿ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಬಿಹಾರದ 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದ್ದು, 1,066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾ ಆಯೋಗವು ನೀಡಿರುವ ಅಂಕಿಅಂಶಗಳ ಪ್ರಕಾರ ಸುಮಾರು 2.15 ಕೋಟಿ ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಪೈಕಿ 1.12 ಕೋಟಿ ಪುರುಷರು, 1.01 ಕೋಟಿ ಮಹಿಳೆಯರು ಮತ್ತು 599 ಜನರನ್ನು ಮೂರನೇ ಲಿಂಗ ಎಂದು ವರ್ಗೀಕರಿಸಲಾಗಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ದೇಶದಲ್ಲಿ ನಡೆಯುವ ಮೊದಲ ಚುನಾವಣೆ ಇದಾಗಿದೆ. ಚುನಾವಣಾ ಆಯೋಗವು ಪ್ರಚಾರ ಮತ್ತು ಮತದಾನಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ನೀಡಿತ್ತು. ಈ ಬಾರಿ ಮತದಾನ ಕೇಂದ್ರದಲ್ಲಿ 1,000 ಮತದಾರರಿಗೆ ಮಾತ್ರ ಅವಕಾಶ ನೀಡಲಾಗುವುದು. ಥರ್ಮಲ್ ಸ್ಕ್ಯಾನರ್ಗಳು, ಹ್ಯಾಂಡ್ ಸ್ಯಾನಿಟೈಸರ್, ಸೋಪ್ ಮತ್ತು ನೀರು ಮತದಾರರಿಗೆ ಲಭ್ಯವಾಗಲಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಥವಾ ಕೊರೊನಾ ಸೋಂಕಿತರಿಗೆ ಅಂಚೆ ಮತಪತ್ರ ಸೌಲಭ್ಯವನ್ನು ನೀಡಲಾಗಿದೆ.
ಮತದಾನದ ಸಮಯವನ್ನೂ ವಿಸ್ತರಿಸಲಾಗಿದ್ದು, ಈ ಬಾರಿ ಮತದಾನ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿ ಸಂಜೆ 6 ರವರೆಗೆ ಮುಂದುವರಿಯಲಿದೆ. ಆದಾಗ್ಯೂ, ಪರಿಷ್ಕೃತ ಸಮಯಗಳು ಎಡಪಂಥೀಯ ಉಗ್ರವಾದದಿಂದ ಪ್ರಭಾವಿತ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ.
ಕಾಂಗ್ರೆಸ್, ರಾಷ್ಟ್ರೀಯ ಜನತಾದಳ ಮತ್ತು ಎಡಪಂಥೀಯ ಪಕ್ಷಗಳನ್ನು ಒಳಗೊಂಡ ಬಿಹಾರದ ಮಹಾಘಟಬಂಧನ್ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ರಾಷ್ಟ್ರೀಯ ಜನತಾದಳ ವಿಧಾನಸಭಾ ಚುನಾವಣೆಯಲ್ಲಿ 144 ಸ್ಥಾನಗಳಿಂದ ಸ್ಪರ್ಧಿಸಲಿದ್ದು, ಕಾಂಗ್ರೆಸ್ 70 ಮತ್ತು ಎಡ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಒಟ್ಟಾಗಿ 29 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಮೈತ್ರಿಕೂಟವು, 10 ಲಕ್ಷ ಉದ್ಯೋಗಗಳನ್ನು ಒದಗಿಸುವುದಾಗಿಯೂ, ಮತ್ತು ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿಯೂ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಜನತಾದಳ (ಯುನೈಟೆಡ್) ಮತ್ತು ಭಾರತೀಯ ಜನತಾ ಪಕ್ಷ ಈ ಮಧ್ಯೆ ಸುಮಾರು 50:50 ಸ್ಥಾನಗಳ ಹಂಚಿಕೆ ಒಪ್ಪಂದವನ್ನು ಘೋಷಿಸಿತ್ತು. ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ನಿತೀಶ್ ಕುಮಾರ್ ಎನ್ಡಿಎ ಮುಖ್ಯಮಂತ್ರಿ ಅಭ್ಯರ್ಥಿ. ಕೇಸರಿ ಪಕ್ಷವು ಉಚಿತ ಕೊರೊನಾ ವೈರಸ್ ಲಸಿಕೆಗಳು ಮತ್ತು 19 ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆ ನೀಡಿತ್ತು. ಆರೋಗ್ಯ ಬಿಕ್ಕಟ್ಟನ್ನು ರಾಜಕೀಯಗೊಳಿಸಿದ್ದಕ್ಕಾಗಿ ಪಕ್ಷವನ್ನು ತೀವ್ರವಾಗಿ ಟೀಕಿಸಲಾಗಿದೆ.
ಇದನ್ನೂ ಓದಿ: ಜಾತಿ, ನಿರುದ್ಯೋಗ, ಬ್ಲಾಕ್ ಮ್ಯಾಜಿಕ್; ಇಲ್ಲಿದೆ ಮೊದಲ ಹಂತದ ಬಿಹಾರ ಚುನಾವಣೆಯ ನಿರ್ಣಾಯಕ ಅಂಶಗಳ ನಿರೂಪಣೆ!
ಮೊದಲ ಹಂತದ ಮತದಾನದಲ್ಲಿ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಮತ್ತು ಆರ್ಜೆಡಿ ಅಭ್ಯರ್ಥಿ ಉದಯ್ ನಾರಾಯಣ್ ಚೌಧರಿ ಅವರು ಇಮಾಮಗಂಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರದಲ್ಲಿ ಕುತೂಹಲ ಹೆಚ್ಚಿದೆ.
ಜಮುಯಿಯಲ್ಲಿ, 2018 ರ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ನಲ್ಲಿ ಚಿನ್ನ ಗೆದ್ದ ಬಿಜೆಪಿ ಅಭ್ಯರ್ಥಿ ಶ್ರೇಯಾಸಿ, ಆರ್ಜೆಡಿ ಶಾಸಕ ವಿಜಯ್ ಪ್ರಕಾಶ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಮುಂದಿನ ಎರಡು ಹಂತದ ಚುನಾವಣೆಗಳು ನವೆಂಬರ್ 3 ಮತ್ತು ನವೆಂಬರ್ 7 ರಂದು ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
Published by:
MAshok Kumar
First published:
October 28, 2020, 10:03 AM IST