ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ರೈತರು ಕರೆ ನೀಡಿರುವ ಬಂದ್ಗೆ ವಿರೋಧ ಪಕ್ಷಗಳು ಸೇರಿದಂತೆ ಹಲವು ಒಕ್ಕೂಟಗಳು ಬೆಂಬಲ ನೀಡಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯುವಂತೆ ಕರೆ ನೀಡಿರುವ ರಾಷ್ಟ್ರವ್ಯಾಪ್ತಿ ಮುಷ್ಕರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೆ ಶಾಂತಿಯುತವಾಗಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರರು ತಿಳಿಸಿದ್ದಾರೆ. ಮೂರು ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಕಳೆದ 11 ದಿನಗಳಿಂದ ದೆಹಲಿ ಚಲೋ ಎಂಬ ಹೆಸರಿನಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಈವರೆಗೂ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಸಫಲವಾಗಿಲ್ಲ. ಕೃಷಿ ಕಾಯ್ದೆ ಹಿಂಪಡೆಯಬೇಕು ಎಂಬ ಬಿಗುಪಟ್ಟನ್ನು ರೈತರು ಹೊಂದಿದ್ದಾರೆ. ಆದರೆ, ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರುವುದಾಗಿ ತಿಳಿಸಿದೆ. ಆರನೇ ಸುತ್ತಿನ ಮಾತುಕತೆ ಡಿ.9ಕ್ಕೆ ನಿಗದಿಯಾಗಿದ್ದು, ಅದಕ್ಕೂ ಮುನ್ನದಿನ ರಾಷ್ಟ್ರವ್ಯಾಪ್ತಿ ಬಂದ್ ಗೆ ರೈತರು ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ರಾಕೇಶ್ ಟಿಕೈಟ್, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಬೆಳಗ್ಗೆ 11 ಗಂಟೆಗೆ ಬಂದ್ ಪ್ರಾರಂಭಿಸುತ್ತೇವೆ. ಈ ವೇಳೆಗಾಗಲೇ ಕಚೇರಿಗೆ ಉದ್ಯೋಗಿಗಳು ತೆರಳಿರುತ್ತಾರೆ. ಅಲ್ಲದೇ 3 ಗಂಟೆಗೆ ಮುಷ್ಕರ ಮುಗಿಯುವ ಹಿನ್ನಲೆ ಅವರಿಗೆ ಈ ಬಂದ್ನಿಂದ ತೊಂದರೆಯಾಗುವುದಿಲ್ಲ. ಮುಷ್ಕರದ ವೇಳೆ ರಸ್ತೆಗಳನ್ನು ಬಂದ್ ಮಾಡುವುದರಿಂದ ಸಾರಿಗೆ ಮತ್ತು ಬ್ಯಾಂಕಿಂಗ್ ಸೇವೆ ಮತ್ತು ಅಂಬುಲೆನ್ಸ್ ನಂತಹ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.
ಇದೊಂದು ಸಾಕೇಂತಿಕ ಪ್ರತಿಭಟನೆಯಾಗಿದ್ದು, ಸರ್ಕಾರದ ಕೆಲವು ನೀತಿಗಳನ್ನು ನಾವು ಬೆಂಬಲಿಸುವುದಿಲ್ಲ ಎಂಬುದನ್ನು ಈ ಮೂಲಕ ತೋರಿಸುತ್ತೇವೆ ಎಂದರು.
ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುವುದರಿಂದ ರಾಜಧಾನಿಯಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳಲಿದ್ದು, ಪ್ರಯಾಣಿಕರಿಗೆ ಸಂಚಾರ ದಟ್ಟಣೆಗೆ ಒಳಗಾಗಲಿದ್ದಾರೆ. ಈ ಹಿನ್ನಲೆ ಪರ್ಯಾಯ ಮಾರ್ಗ ಅನುಸರಿಸುವಂತೆ ಪೊಲೀಸರು ದೆಹಲಿಗರಿಗೆ ತಿಳಿಸಿದ್ದಾರೆ.
ಯಾವೆಲ್ಲಾ ಪಕ್ಷಗಳಿಂದ ಬೆಂಬಲ:
ರೈತರು ಕರೆ ನೀಡಿರುವ ಈ ಮುಷ್ಕರಕ್ಕೆ ಈಗಾಗಲೇ ಕಾಂಗ್ರೆಸ್, ಎನ್ಸಿಪಿ, ಶಿವಸೇನೆ, ಆಮ್ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್), ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ , ಭಾರತೀಯ ರಾಷ್ಟ್ರೀಯ ಲೋಕ ದಳ ಬೆಂಬಲಿಸಿವೆ.
ಇದನ್ನು ಓದಿ: ರೈತರ ಹೋರಾಟಕ್ಕೆ ಲಂಡನ್ನಲ್ಲಿ ಸಾವಿರಾರು ಜನರ ಬೆಂಬಲ; ಸದ್ದು ಮಾಡಿದ ಖಲಿಸ್ತಾನೀ ಹೋರಾಟ
ಕಾರ್ಮಿಕ ಸಂಘಗಳಿಂದಲೂ ಬೆಂಬಲ:
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಹಿಂದ್ ಮಜ್ದೂರ್ ಸಭಾ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್, ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್, ಸ್ವಯಂ ಮಹಿಳಾ ಉದ್ಯೋಗ ಸಂಘ, ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್, ಕಾರ್ಮಿಕ ಪ್ರಗತಿಪರ ಒಕ್ಕೂಟ, ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದಂತೆ ಹಲವಾರು ಬ್ಯಾಂಕ್ ಒಕ್ಕೂಟಗಳು ರೈತರಿಗೆ ಬೆಂಬಲಿಸಿವೆ.
ಅಷ್ಟೇ ಅಲ್ಲದೇ ರೈತರ ಪ್ರತಿಭಟನೆಗೆ ಬೆಂಬಲಿಸಿ ಸಾರಿಗೆ ಕೇಂದ್ರ ಒಕ್ಕೂಟ ಎಐಎಂಟಿಸಿ ದೇಶಾದ್ಯಂತ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ