ರಾಜಕೀಯ ಗಲಭೆಗಳಿಂದ ಹೈಲೈಟ್ ಆಗಿರುವ ಪಶ್ಚಿಮ ಬಂಗಾಳದಲ್ಲಿ (West Bengal) ಈ ರೀತಿಯ ಹಿಂಸಾಚಾರ ಘಟನೆಗಳಾಗುತ್ತಲೇ ಇರುತ್ತವೆ. ಪ್ರತಿ ಬಾರಿಯೂ ರಾಜಕೀಯ ಮುಖಂಡರ ದ್ವೇಷ ಗಲ್ಲಿಗಳ ಗಲಭೆಯಾಗಿ ಬದಲಾಗುವ ಉದಾಹರಣೆಗಳು ಪಶ್ಚಿಮ ಬಂಗಳಾ ರಾಜಕೀಯದಲ್ಲಿ ಸಾಕಷ್ಟು ಸಿಗುತ್ತವೆ. ಇದೀಗ ಮತ್ತೆ ಪಶ್ಚಿಮ ಬಂಗಳಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಯಾಗಿದ್ದು ರಾಜ್ಯ ಬಿಜೆಪಿ (BJP) ಮುಖಂಡನನ್ನು ಅರೆಸ್ಟ್ (Arrest) ಮಾಡಲಾಗಿದೆ. ಅದೇ ರೀತಿ ಗಲಭೆ ಮಾಡುತ್ತಿರುವವರ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಕಠಿಣ ಕ್ರಮದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಶನಿವಾರ ಹೌರಾ ಜಿಲ್ಲೆಯಲ್ಲಿ ಹೊಸ ಹಿಂಸಾಚಾರದ ಘಟನೆಗಳು ವರದಿಯಾದಾಗಲೂ ಕಠಿಣ ಕ್ರಮಗಳ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ. ಹಿಂಸಾಚಾರ (Violence) ನಡೆಯುತ್ತಿರುವ ಜಿಲ್ಲೆಗೆ ಭೇಟಿ ನೀಡಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನೂಪುರ್ ಶರ್ಮಾ ಹೇಳಿಕೆಗಳ ನಂತರ ಹಿಂಸಾಚಾರ
ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಮಾಡಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಪಶ್ಚಿಮ ಬಂಗಾಳದ ಕಾರ್ಯದರ್ಶಿ ನಬನ್ನಾ ಇರುವ ಹೌರಾದಲ್ಲಿ ಗುರುವಾರದಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.
ಬಿಜೆಪಿ ಮಾಡಿದ ಪಾಪಕ್ಕೆ ಜನರೇಕೆ ಕಷ್ಟಪಡಬೇಕು?
“ನಾನು ಮೊದಲೇ ಹೇಳಿದಂತೆ ಹೌರಾದಲ್ಲಿ ಎರಡು ದಿನಗಳಿಂದ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಇದರ ಹಿಂದೆ ಕೆಲವು ರಾಜಕೀಯ ಪಕ್ಷಗಳು ಗಲಭೆ ಎಬ್ಬಿಸಲು ಬಯಸುತ್ತವೆ. ಆದರೆ ಈ ವಿಷಯಗಳನ್ನು ಸಹಿಸುವುದಿಲ್ಲ ಮತ್ತು ಹಿಂಸಾಚಾರದಲ್ಲಿ ತೊಡಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯ ಪಾಪಗಳಿಂದ ಜನಸಾಮಾನ್ಯರೇಕೆ ಕಷ್ಟಪಡಬೇಕು? ಬ್ಯಾನರ್ಜಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: CBI Findings: ಪರೀಕ್ಷೆಯಲ್ಲಿ ಒಂದಕ್ಷರ ಬರೆಯದವರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು! ಸಿಬಿಐ ತನಿಖೆಯಲ್ಲಿ ಬಯಲು
ಹೌರಾ ಜಿಲ್ಲೆಯ ಪಾಂಚ್ಲಾದಿಂದ ಹೊಸ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಅಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪ್ರತಿಭಟನಾಕಾರರು ಇಟ್ಟಿಗೆಗಳನ್ನು ಎಸೆದರೆ, ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದರು. ಬಾಂಬ್ಗಳನ್ನೂ ಎಸೆಯಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ವಿದ್ಯಾಸಾಗರ್ ಸೇತುವಿನ ಟೋಲ್ ಪ್ಲಾಜಾ ಬಳಿ ಬಂಧನ
ಮಜುಂದಾರ್ ಹೊರಗೆ ಹೋಗಲು ಯತ್ನಿಸಿದಾಗ ಅವರ ಮನೆಯ ಹೊರಗೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಅವರನ್ನು ತಡೆದರು. ನಂತರ, ಉತ್ತರ ದಿನಜ್ಪುರದ ಬಲೂರ್ಘಾಟ್ನ ಸಂಸದ ಮಜುಂದಾರ್ ಅವರನ್ನು ವಿದ್ಯಾಸಾಗರ್ ಸೇತುವಿನ ಟೋಲ್ ಪ್ಲಾಜಾ ಬಳಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Narendra Modi: ಅಭಿವೃದ್ಧಿ ಮಾಡಿರೋದು ಚುನಾವಣೆಗಾಗಿ ಅಲ್ಲ, ಜನರಿಗಾಗಿ ಎಂದ ಮೋದಿ
ಮಜುಂದಾರ್ ಸಿಆರ್ಪಿಸಿ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಹೊಂದಿರುವ ಹೌರಾಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದರು. ಅವರ ಭೇಟಿಯಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದಿತ್ತು. ಇದು ಮುಂಜಾಗ್ರತಾ ಬಂಧನವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಈಗಾಗಲೇ ಜೂನ್ 13 ರವರೆಗೆ ಹೌರಾ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ವಿಧಿಸಲಾಗಿದೆ. ಉಲುಬೇರಿಯಾ ಮತ್ತು ಹೌರಾ ನಗರಗಳಂತಹ ಕೆಲವು ಸ್ಥಳಗಳಲ್ಲಿ ಜೂನ್ 15 ರವರೆಗೆ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ಜೂನ್ 13 ರವರೆಗೆ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಹಲವಾರು ರೈಲುಗಳು ಸಹ ರದ್ದುಗೊಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ