ರಾಜಸ್ಥಾನ(ಜ.08): ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಹೇಳೋಕೆ ಆಗಲ್ಲ. ಪ್ರೀತಿ ಎಂದರೆ ಅದು ಎರಡು ಹೃದಯಗಳ ಸಂಭಾಷಣೆ ಅಂತಾನೂ ಹೇಳ್ತಾರೆ. ಇಷ್ಟೇ ಯಾಕೆ ಪ್ರೀತಿ ವಯಸ್ಸಿನ ಅಂತರವನ್ನೂ ಮೀರಿದ್ದು. ಪ್ರೀತಿ-ಪ್ರೇಮಕ್ಕೆ ದೇಶ-ಭಾಷೆಯ ಹಂಗಿಲ್ಲ. ಯಾರ ಮೇಲಾದರೂ ಪ್ರೀತಿ ಹುಟ್ಟಬಹುದು. ಅದು ಮನಸುಗಳ ನಡುವೆ ಆಗುವಂತಹದ್ದು ಎಂಬೆಲ್ಲಾ ಮಾತುಗಳನ್ನು ನಾವು ಕೇಳಿಯೇ ಇರುತ್ತೇವೆ.ಆದರೆ ಎರಡು ಹೃದಯಗಳ ನಡುವೆ ಇರೋದು ಮಾತ್ರ ಪ್ರೀತಿ ಅಲ್ಲ, ಮೂರು ಮನಸುಗಳ ನಡುವೆಯೂ ಪ್ರೀತಿ ಹುಟ್ಟುತ್ತೆ. ಹಾಗೆ ಹುಟ್ಟಿದ ಪ್ರೀತಿಗೆ ಮದುವೆ ಎಂಬ ಬಂಧನದ ರೂಪ ಕೊಟ್ಟಿದ್ದೇನೆ ಎಂದು ಇಲ್ಲೊಬ್ಬ ಯುವಕ ಸಾಬೀತುಪಡಿಸಿದ್ದಾನೆ. ಇದೇನಪ್ಪಾ ವಿಚಿತ್ರ ಅಂತೀರಾ? ಮುಂದೆ ಓದಿ.
ಆತನಿಗೆ ಒಬ್ಬಾಕೆ ಮೇಲೆ ಪ್ರೀತಿ ಹುಟ್ಟಿತ್ತು. ಹುಡುಗಿಯೂ ಅವನ ಪ್ರೀತಿಯನ್ನು ಒಪ್ಪಿದ್ದಳು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.ಆದರೆ ಆ ಯುವಕನಿಗೆ ಮತ್ತೊಬ್ಬಳ ಮೇಲೆ ಪ್ರೀತಿ ಹುಟ್ಟಿತು. ಸರಿಯೆಂದು ಆಕೆಯನ್ನೂ ಮದುವೆಯಾಗಲು ನಿರ್ಧರಿಸಿದ. ಇದು ಒಂಥರಾ ಟ್ರೈ ಆ್ಯಂಗಲ್ ಲವ್ ಅಂತರಲ್ಲ ಹಾಗೆ. ಆದರೆ ಇಲ್ಲಿ ಈ ಮೂವರ ನಡುವೆ ಒಂದು ಸಣ್ಣ ಮನಸ್ತಾಪವಾಗಲೀ, ಜಗಳವಾಗಲೀ ಬಂದಿಲ್ಲ. ಬದಲಿಗೆ ಪರಸ್ಪರ ಒಪ್ಪಿದ್ದಾರೆ.
ತನ್ನಾಸೆಯಂತೆ ಯುವಕ ತಾನು ಇಷ್ಟ ಪಟ್ಟ ಇಬ್ಬರೂ ಹುಡುಗಿಯರನ್ನೂ ಹಿರಿಯರು ಹಾಗೂ ಗೆಳೆಯರ ಸಮ್ಮುಖದಲ್ಲಿ ಒಂದೇ ದಿನ ಮದುವೆಯಾಗಿದ್ದಾನೆ. ಆ ಮೂಲಕ ಇಬ್ಬರ ಹೆಂಡಿರ ಮುದ್ದಿನ ಗಂಡ ಎಂಬ ಪಟ್ಟವನ್ನೂ ಪಡೆದಿದ್ದಾನೆ. ಇವರ ಮದುವೆ ಜನವರಿ 5ರಂದು ನಡೆದಿದ್ದು, ಸುಮಾರು 500 ಮಂದಿ ಈ ಶುಭ ಘಳಿಗೆಗೆ ಸಾಕ್ಷಿಯಾಗಿದ್ದರು ಎನ್ನಲಾಗಿದೆ.
ಇಬ್ಬರು ಹುಡುಗಿಯರನ್ನು ಮದುವೆಯಾದ 24 ವರ್ಷದ ಚಂದು ಮೌರ್ಯ ಎಲ್ಲಾ ಕಡೆ ಸುದ್ದಿಯಾದರು. ಅವರು ಮದುವೆಗೆ ಪ್ರಿಂಟ್ ಮಾಡಿಸಿದ್ದ ಆಮಂತ್ರಣ ಪತ್ರಿಕೆ, ಮದುವೆಯ ವಿಡಿಯೋ ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದ್ದವು.
ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದ ಆನೇಕಲ್ ತಾಲೂಕು ಆಡಳಿತ
ಚಂದು ನಕ್ಸಲ್ ಪೀಡಿತ ಬಸ್ತರ್ ಜಿಲ್ಲೆಯ ಕುಗ್ರಾಮದವನಾಗಿದ್ದು, ರೈತ ಕುಟುಂಬದಿಂದ ಬಂದವನಾಗಿದ್ದ. ಹೀಗಾಗಿ ತಾನೂ ಸಹ ಕೃಷಿ ಮಾಡುತ್ತಿದ್ದ. ಜೊತೆಗೆ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದ. ಹೀಗೆ ಒಂದು ದಿನ ತೋಕಪಾಲ್ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನು ನೆಡುವ ಕೆಲಸಕ್ಕೆ ಹೋಗಿದ್ದ. ಅಲ್ಲಿ 21 ವರ್ಷದ ಬುಡಕಟ್ಟು ಜನಾಂಗದ ಸುಂದರಿ ಕಶ್ಯಪ್ ಎಂಬ ಹುಡುಗಿಯನ್ನು ಭೇಟಿ ಮಾಡಿದ್ದ. ಬಳಿಕ ಆಕೆಯ ಮೇಲೆ ಚಂದುಗೆ ಪ್ರೀತಿ ಹುಟ್ಟಿತ್ತು. ಅವರಿಬ್ಬರು ಫೋನ್ ಕಾಲ್ ಮೂಲಕ ಕಾಂಟ್ಯಾಕ್ಟ್ನಲ್ಲಿದ್ದರು. ಮದುವೆಯಾಗಲು ಇಬ್ಬರೂ ಸಹ ನಿರ್ಧರಿಸಿದ್ದರು.
ಇವರ ಪ್ರೀತಿ ಹೀಗೆ ಸಾಗುತ್ತಿತ್ತು. ಹೀಗಿರುವಾಗ ಒಂದು ದಿನ 20 ವರ್ಷದ ಹಸೀನಾ ಬಘೇಲ್ ಎಂಬಾಕೆ ಚಂದು ಇದ್ದ ಹಳ್ಳಿಗೆ ತಮ್ಮ ಸಂಬಂಧಿಕರ ಮದುವೆಗೆಂದು ಬಂದಿದ್ದಳು. ಅಲ್ಲಿ ಹಸೀನಾ ಚಂದುವನ್ನು ನೋಡಿ ಆತನ ಮೇಲೆ ಪ್ರೀತಿ ಹುಟ್ಟಿದೆ. ಚಂದುಗೂ ಕೂಡ ಹಸೀನಾ ಮೇಲೆ ಪ್ರೀತಿ ಹುಟ್ಟಿತ್ತು. ಯಾವಾಗ ಹಸೀನಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಳೋ ಆಗ ಚಂದು ಆಕೆಯ ಪ್ರೀತಿಯನ್ನೂ ಒಪ್ಪಿಕೊಂಡ. ಇಬ್ಬರೂ ಸಹ ಫೋನ್ನಲ್ಲಿ ಕಾಂಟ್ಯಾಕ್ಟ್ನಲ್ಲಿದ್ದರು.
ಇದಾದ ಕೆಲವು ದಿನಗಳ ಬಳಿಕ ಹಸೀನಾ ಮತ್ತು ಸುಂದರಿ ಇಬ್ಬರನ್ನೂ ಪರಸ್ಪರ ಪರಿಚಯ ಮಾಡಿಸಿದೆ. ಇಬ್ಬರೂ ಕೂಡ ನನ್ನ ಜೊತೆ ಇರಲು ಒಪ್ಪಿದರು. ನಾವು ಮೂವರೂ ಸಹ ಫೋನ್ನಲ್ಲಿ ಮಾತನಾಡಿಕೊಂಡಿದ್ದೆವು. ಹೀಗಿರುವಾಗ ಒಂದು ದಿನ ಹಸೀನಾ ನಿನ್ನೆ ಜೊತೆಯಲ್ಲಿಯೇ ಇರುತ್ತೇನೆ ಎಂದು ನಮ್ಮ ಮನೆಗೆ ಬಂದಳು. ಸುಂದರಿಗೂ ಹಸೀನಾ ನಮ್ಮ ಮನೆಯಲ್ಲಿರುವ ವಿಷಯ ತಿಳಿಯಿತು. ಆಗ ಸುಂದರಿ ಕೂಡ ನನ್ನ ಜೊತೆ ಇರಲು ಬಂದಳು. ಆಗಿನಿಂದ ನಾವು ಮೂರು ಜನ ಕುಟುಂಬದ ರೀತಿ ಒಂದೇ ಮನೆಯಲ್ಲಿ ವಾಸಿಸಲು ಶುರು ಮಾಡಿದೆವು ಎಂದು ಚಂದು ಹೇಳಿದ್ದಾನೆ.
ಚಂದು ತನ್ನ ತಂದೆ-ತಾಯಿ ಹಾಗೂ ಇಬ್ಬರು ಸಹೋದರರ ಜೊತೆ ಇದ್ದ. ಇವರ ಜೊತೆಗೆ ಈಗ ಆ ಇಬ್ಬರು ಹುಡುಗಿಯರು ಸೇರ್ಪಡೆಯಾಗಿದ್ದರು. ಕೆಲವು ತಿಂಗಳ ಬಳಿಕ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಇವರ ಲಿವ್ ಇನ್ ರಿಲೇಷನ್ಶಿಪ್ನ್ನು ಪ್ರಶ್ನಿಸಲು ಶುರು ಮಾಡಿದರು. ಆಗ ಚಂದು ಇಬ್ಬರು ಹುಡುಗಿಯರನ್ನು ಮದುವೆಯಾಗಲು ನಿರ್ಧರಿಸಿದ.
ನಾನು ಇಬ್ಬರೂ ಹುಡುಗಿಯರನ್ನೂ ಮದುವೆಯಾಗಲು ತೀರ್ಮಾನಿಸಿದೆ. ಯಾಕೆಂದರೆ ಇಬ್ಬರೂ ಸಹ ನನ್ನನ್ನು ಪ್ರೀತಿಸುತ್ತಾರೆ. ಅವರನ್ನು ನಿರಾಸೆಗೊಳಿಸಲು ಅಥವಾ ಬಿಡಲು ನಾನು ಸಿದ್ಧ ಇಲ್ಲ, ಕೊನೆವರೆಗೂ ಅವರಿಬ್ಬರೂ ನನ್ನ ಜೊತೆ ಒಟ್ಟಿಗೆ ಇರುವುದಾಗಿ ಮಾತು ಕೊಟ್ಟಿದ್ದಾರೆ ಎಂದು ಚಂದು ತನ್ನ ಮಾತು ಹಂಚಿಕೊಂಡಿದ್ದಾನೆ.
ನನ್ನ ಮದುವೆಗೆ ಹಸೀನಾ ಕುಟುಂಬಸ್ಥರು ಬಂದರೆ, ಸುಂದರಿ ಮನೆಯವರು ಬರಲಿಲ್ಲ ಎಂದು ಚಂದು ಕೊಂಚ ಬೇಸರ ವ್ಯಕ್ತಪಡಿಸಿದರು.ಆದಾಗ್ಯೂ ಸುಂದರಿ ತನ್ನ ತಂದೆ-ತಾಯಿ ಮುಂದೆ ಒಂದಿ ದಿನ ಬಂದೇ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ