ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾಗವಹಿಸಿದ್ದ ಮುಂಬೈನಲ್ಲಿ (Mumbai) ನಡೆದ ಕಾರ್ಯಕ್ರಮವೊಂದರಲ್ಲಿ ಬಿಸಿಲಿನ ತಾಪದಿಂದ (Heat Stroke) ಕನಿಷ್ಠ 11 ಜನ ಮೃತಪಟ್ಟು, 600ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುವ ‘ಮಹಾರಾಷ್ಟ್ರ ಭೂಷಣ ಪ್ರಶಸ್ತಿ’ (Maharashtra Bhushan Award) ಪ್ರದಾನ ಸಮಾರಂಭ ನವಿ ಮುಂಬೈನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಏಕ್ನಾಥ್ ಶಿಂಧೆ, ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
‘ಮಹಾರಾಷ್ಟ್ರ ಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಜನರ ಪೈಕಿ 11 ಮಂದಿ ಸಾವನ್ನಪ್ಪಿ, 600 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಏಕ್ನಾಥ್ ಶಿಂಧೆ ಅವರ ಗೃಹ ಕಚೇರಿಯಿಂದಲೇ ಅಧಿಕೃತ ಮಾಹಿತಿ ರವಾನಿಸಲಾಗಿದ್ದು, ಬಿಸಿಲಿನ ಶಾಖದ ಹೊಡೆತದಿಂದ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮುಖ್ಯಮಂತ್ರಿ ಗೃಹ ಕಚೇರಿಯು 11 ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರೆ, ಆರೋಗ್ಯಾಧಿಕಾರಿಗಳು 13 ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಮೃತರ ಪೈಕಿ 8 ಜನ ಮಹಿಳೆಯರು ಸೇರಿದ್ದು, ಹೆಚ್ಚಾಗಿ ವೃದ್ಧರೇ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Atiq Ahmed Killers: ಅತೀಕ್ ಅಹ್ಮದ್ ಶೂಟೌಟ್ನ ಮೂವರು ಆರೋಪಿಗಳಿಗಿದೆ ಖತರ್ನಾಕ್ ಇತಿಹಾಸ!
5 ಲಕ್ಷ ಪರಿಹಾರ ಘೋಷಣೆ
ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರು ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತಗಳಿಂದ ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಈ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಆ ಪ್ರದೇಶದಲ್ಲಿ ದಾಖಲಾಗಿತ್ತು. ಮೃತರ ಪೈಕಿ ರಾಯಗಡದ ಜಯಶ್ರೀ ಪಾಟೀಲ್ (54) ಅವರು ಸ್ಥಳದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕಾಮೋಥೆಯ ಎಂಜಿಎಂ ಆಸ್ಪತ್ರೆಯಲ್ಲಿ ಗಂಭೀರ ಸ್ವರೂಪದಲ್ಲಿ ದಾಖಲಾಗಿರುವ ರೋಗಿಗಳನ್ನು ಸಿಎಂ ಏಕನಾಥ್ ಶಿಂಧೆ ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: Threat Call: ಸಿಎಂ ಏಕನಾಥ್ ಶಿಂಧೆ ಪುತ್ರ ನನ್ನನ್ನು ಕೊಲ್ಲಲು ಸುಪಾರಿ ನೀಡಿದ್ದಾನೆ; ಸಂಜಯ್ ರಾವತ್ ಗಂಭೀರ ಆರೋಪ
ಐದು ಗಂಟೆ ನಡೆದಿದ್ದ ಕಾರ್ಯಕ್ರಮ
ನಿನ್ನೆ (ಭಾನುವಾರ) ಖಾರ್ಘರ್ನ ಇಂಟರ್ನ್ಯಾಷನಲ್ ಕಾರ್ಪೊರೇಟ್ ಪಾರ್ಕ್ ಮೈದಾನದಲ್ಲಿ ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭದ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ಕಪಿಲ್ ಪಾಟೀಲ್ ಭಾಗವಹಿಸಿದ್ದರು.
ಹೆಸರು ಹೇಳಲು ಇಚ್ಛಿಸದ ಖಾರ್ಘರ್ ನಿವಾಸಿಯೊಬ್ಬರು, “ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಮತ್ತು ಗುಜರಾತ್ನ ಕೆಲವು ಭಾಗಗಳಿಂದ ಆಗಮಿಸಿದ ಕೆಲವರು ಎರಡು ದಿನಗಳ ಕಾಲ ಮೈದಾನದಲ್ಲಿ ಇದ್ದರು. ಭಾನುವಾರ ಮಧ್ಯಾಹ್ನ, ಲಕ್ಷಾಂತರ ಜನರು ರಕ್ಷಣೆಯಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ಕುಳಿತಿದ್ದರು. ಇದರಿಂದ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ