ಬೆಂಗಳೂರು: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಗೆ ಶುರುವಾಗಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಎಂಟಿಸಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ಮಮತಾ ಬ್ಯಾನರ್ಜಿ ಸರ್ಕಾರದತ್ತ ಈ ಬಾರಿಯೂ ಮತದಾರರು ವಾಲಿದ್ದು, ಬೆಳಗ್ಗೆ 10 ಗಂಟೆ ಹೊತ್ತಿಗೆ 102 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಬಿಜೆಪಿಯೂ ಪ್ರಬಲ ಪೈಪೋಟಿ ನೀಡುತ್ತಿದ್ದು 84 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 292 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಯಾವ ಪಕ್ಷ ಜನ ಬೆಂಬಲದೊಂದಿಗೆ ಮ್ಯಾಜಿಕ್ ನಂಬರ್ ದಾಟಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಇನ್ನು ದಕ್ಷಿಣದಲ್ಲಿ ತಮಿಳುನಾಡಲ್ಲಿ ಚುನಾವಣೋತ್ತರ ಸಮೀಕ್ಷೆಯೇ ನಿಜವಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಬಹುತೇಕ ಸಮೀಕೆಗಳು ಅಂದಾಜಿಸಿದಂತೆ ತಮಿಳುನಾಡಿನ ಜನ ಈ ಬಾರಿ ಡಿಎಂಕೆಗೆ ವಿಜಯಮಾಲೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬೆಳಗ್ಗೆ 10 ಗಂಟೆ ವೇಳೆ ಡಿಎಂಕೆ ಮೈತ್ರಿ ಕೂಟ 112 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎಐಡಿಎಂಕೆ ಮೈತ್ರಿಕೂಟ 83 ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆಯುಯತ್ತಿದೆ. ಎಐಡಿಎಂಕೆ ಜೊತೆ ಕೈ ಜೋಡಿಸಿರುವ ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಪಶ್ಚಿಮಬಂಗಾಳ ವಿಧಾನಸಭೆ 294 ಸದಸ್ಯ ಸ್ಥಾನವನ್ನು ಹೊಂದಿದ್ದು, ಕೇಂದ್ರ ಚುನಾವಣಾ ಆಯೋಗ 292 ಕ್ಷೇತ್ರಗಳಿಗೆ ಚುನಾವಣೆ ನಡೆಸಿದೆ. ಉಳಿದ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮರಣ ಹೊಂದಿದ ಕಾರಣ ಈ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಸಿಲ್ಲ. ಇಂದು ಸಂಜೆ ಐದು ಗಂಟೆಯೊಳಗೆ ಸ್ಪಷ್ಟ ಫಲಿತಾಂಶ ಪ್ರಕಟವಾಗಲಿದೆ. ಬಹುಮತಕ್ಕೆ 148 ಸ್ಥಾನಗಳನ್ನು ಗೆಲ್ಲಬೇಕಿದೆ. ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 27ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಏಪ್ರಿಲ್ 29ರಂದು ಎಂಟನೇ ಹಾಗೂ ಕೊನೆಯ ಹಂತದ ಮತದಾನ ನಡೆದಿದೆ.
ಹಾಲಿ ಆಡಳಿತರೂಢ ಟಿಎಂಸಿ ಸರ್ಕಾರವನ್ನು ಕಿತ್ತೆಸೆದು ಅಧಿಕಾರ ಸ್ಥಾಪನೆಗೆ ಕೇಸರಿ ಪಕ್ಷ ಈ ಬಾರಿ ಬಂಗಾಳದಲ್ಲಿ ಬಾರಿ ಸರ್ಕಸ್ ನಡೆಸಿದೆ. ಬಿಜೆಪಿ ಪಕ್ಷದ ಘಟಾನುಘಟಿ ನಾಯಕರಾದ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಹಲವು ನಾಯಕರು ಬಂಗಾಳದಲ್ಲಿ ಭಾರೀ ಪ್ರಚಾರ ನಡೆಸಿದ್ದಾರೆ. ಆದರೆ, ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಹಾಲಿ ಸಿಎಂ ಮಮತಾ ಬ್ಯಾನರ್ಜಿ ಕೂಡ ಎಲ್ಲ ರೀತಿಯ ಚಾಣಾಕ್ಷತೆ ಉಪಯೋಗಿಸಿದ್ದಾರೆ. ಎರಡು ಪಕ್ಷಗಳ ನಡುವೆ ತೀವ್ರ ಪೈಪೋಟಿ ಇರುವುದಂತೂ ಸತ್ಯವಾಗಿದ್ದು, ಅಂತಿಮವಾಗಿ ಮತದಾರರ ಯಾರಿಗೆ ಜೈ ಎಂದಿದ್ದಾನೆ ಎಂಬುದು ಇಂದು ಪ್ರಕಟವಾಗಲಿದೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಮುಖಭಂಗ!?
ತಮಿಳುನಾಡಿನಲ್ಲಿ, ಡಿಎಂಕೆ ನೇತೃತ್ವದ ಕೂಟ ಸಲೀಸಾಗಿ ಅಧಿಕಾರಕ್ಕೆ ಬರಲಿದೆ. ಡಿಎಂಕೆ ಕೂಟ 234 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಆಡಳಿತಾರೂಢ ಮತ್ತು ಬಿಜೆಪಿಯ ಮಿತ್ರ ಪಕ್ಷ ಎಐಡಿಎಂಕೆ ತನ್ನ ವರ್ಚಸ್ವಿ ನಾಯಕಿ ಜೆ.ಜಯಲಲಿತಾ ಅವರ ನಿಧನದ ನಂತರ ನಡೆದ ಮೊದಲ ರಾಜ್ಯ ಚುನಾವಣೆಯಲ್ಲಿ 66 ಸ್ಥಾನಗಳನ್ನು ಗಳಿಸಲಿದೆ.
ಎಡಿಎಂಕೆ ಅಧಿಕ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿಯೇ ಆಡಳಿತರೂಢ ಪಕ್ಷ ಹೀನಾಯವಾಗಿ ಸೋಲನುಭವಿಸಲಿದೆ. ತಮಿಳುನಾಡಿನ ಜನ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ ಎಂ.ಕೆ ಸ್ಟಾಲಿನ್ ಅವರ ಡಿಎಂಕೆ 2019 ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ಗಳಿಸಿತ್ತು. ಪ್ರತಿಪಕ್ಷದಲ್ಲಿ ಎರಡು ಅವಧಿಯ ನಂತರ ಈ ಬಾರಿ ಅಧಿಕಾರಕ್ಕೆ ಮರಳುವ ಭರವಸೆ ಇದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ