ಗುವಾಹಟಿ: ಹಲವು ವಿವಾದಗಳಲ್ಲಿ (Controversy) ಹೆಸರು ತಳುಕು ಹಾಕಿಕೊಂಡಿದ್ದ, ಭ್ರಷ್ಟಾಚಾರ (Corruption) ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧನಕ್ಕೂ ಒಳಗಾಗಿದ್ದ ಅಸ್ಸಾಂ ಲೇಡಿ ಸಿಂಗಂ (Assam Lady Singham) ಎಂದೇ ಖ್ಯಾತಿಯಾಗಿದ್ದ ಪೊಲೀಸ್ನ (Police) ಮಹಿಳಾ ಸಬ್ ಇನ್ಸ್ಪೆಕ್ಟರ್ (Women Sub Inspector) ಜುನ್ಮೋನಿ ರಾಭಾ (, ನಾಗಾನ್ ಜಿಲ್ಲೆಯಲ್ಲಿ ಕಂಟೈನರ್ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು. ಇದೀಗ ಅವರ ಸಾವಿನ ಸುತ್ತಾ ಹಲವು ಅನುಮಾನಗಳು ಇದ್ದು, ಅಸ್ಸಾಂ ಪೊಲೀಸ್ ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಿದೆ. ಕುಟುಂಬಸ್ಥರು ರಾಭಾ ಅವರ ಸಾವು ಅಪಘಾತವಲ್ಲ, ಕೊಲೆ ಎಂದು ಆರೋಪ ಮಾಡಿದ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, " ಸಾರ್ವಜನಿಕ ಬೇಡಿಕೆಯಿಂದಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ನಾನು ಘಟನೆಯ ವಿವರಗಳನ್ನು ಪರಿಶೀಲಿಸಿದ್ದೇನೆ ಮತ್ತು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಅಸ್ಸಾಂ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಉಸ್ತುವಾರಿಯಾಗಿ ಅಧಿಕಾರಿ ನಿರ್ವಹಿಸುತ್ತಿದ್ದ ರಾಭಾ
ರಾಭಾ ಅವರು ಪ್ರಸ್ತುತ ಮೊರಿಕೊಲಾಂಗ್ ಪೊಲೀಸ್ ಔಟ್ಪೋಸ್ಟ್ನ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ರಾಭಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ರಭಾ ಕುಟುಂಬಸ್ಥರು ಒತ್ತಾಯಿಸಿದ್ದು, ಆಕೆಯ ಮರಣ ಸಾಧಾರಣವಾದುದಲ್ಲ ಎಂದು ವಾದಿಸಿದೆ.
ಸಿಐಡಿಗೆ ಪ್ರಕರಣ ಒಪ್ಪಿಸಲಾಗಿತ್ತು
ರಾಭಾ ಕುಟುಂಬಸ್ಥರ ಒತ್ತಾಯದಿಂದ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ತಿಳಿಸಿದ್ದರು. ಎಸ್ಐ ಜುನ್ಮೋನಿ ರಾಭಾ ಅವರ ಸಾವಿನ ಕುರಿತು ಇನ್ನಷ್ಟು ನಿಷ್ಪಕ್ಷಪಾತ ಹಾಗೂ ನ್ಯಾಯಯುತ ತನಿಖೆಯಾಗಬೇಕೆಂಬ ವಿನಂತಿ ಹಾಗೂ ಒತ್ತಾಯ ಕೇಳಿಬಂದ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಅಸ್ಸಾಂ ಸಿಐಡಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು. ಇದೀಗ ಸಾರ್ವಜನಿಕರ ಒತ್ತಡದಿಂದ ಸಿಬಿಐಗೆ ವರ್ಗಾಯಿಸಲು ನಿರ್ಧರಿಸಿದೆ.
ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಯಾರು? ಅವರ ಮೇಲಿರುವ ಪ್ರಕರಣಗಳೇನು?
ಲೇಡಿ ಸಿಂಘಮ್ ಖ್ಯಾತಿಯ ಜನ್ಮೋನಿ ರಾಭಾ ಹಾಗೂ ಬಿಹ್ಪುರಿಯ ಬಿಜೆಪಿ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯೊಂದು ಜನವರಿ 2022 ರಲ್ಲಿ ಸೋರಿಕೆಯಾದಾಗ ರಾಭಾ ಅವರ ಹೆಸರು ಜಗಜ್ಜಾಹೀರವಾಯಿತು.
ಸೋರಿಕೆಯಾದ ಆಡಿಯೋದಲ್ಲಿ ಕಾನೂನು ಬಾಹಿರವಾಗಿ ಅಳವಡಿಸಲಾದ ಯಂತ್ರಗಳೊಂದಿಗೆ ಹಳ್ಳಿಗಾಡಿನ ದೋಣಿಗಳನ್ನು ನಿರ್ವಹಿಸುತ್ತಿರುವವರ ಬಂಧನದ ಬಗ್ಗೆ ನಡೆದ ವಾಗ್ವಾದದ ಸಂಭಾಷಣೆ ಅದಾಗಿತ್ತು. ಇದಲ್ಲದೆ ಅಕ್ರಮವಾಗಿ ದೋಣಿ ನಿರ್ವಹಿಸುವವರು ಭುಯಾನ್ ಕ್ಷೇತ್ರದ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಭಾ ಆರೋಪಿಸಿದ್ದರು.
ಅಮಾನತು ಹಿಂತೆಗೆದುಕೊಂಡ ನಂತರ ರಾಭಾ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಉತ್ತರ ಲಖಿಂಪುರ ಪೊಲೀಸರು ಮೇ 15 ರಂದು ಅಂದರೆ ರಾಭಾ ಅವರ ಅಪಘಾತಕ್ಕೆ ಒಂದು ದಿನ ಮೊದಲು ಆಕೆಯ ವಿರುದ್ಧ u/s 120-B, 395, 397, 342 ಮತ್ತು 387 ರಂತೆ ಸುಲಿಗೆ ಪ್ರಕರಣ ದಾಖಲಿಸಿದ್ದರು. ಸುಲಿಗೆ ಪ್ರಕರಣದ ತನಿಖೆಯನ್ನು ಸಹ ಸಿಐಡಿ ಏಕಕಾಲಕ್ಕೆ ನಿರ್ವಹಿಸಲಿದೆ ಎಂದು ಡಿಜಿಪಿ ಸಿಂಗ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ