ಉಂಡೂ ಹೋದ ಕೊಂಡೂ ಹೋದ ಸಿನಿಮಾ ಶೈಲಿಯಲ್ಲಿ ವಂಚನೆ; ಗರ್ಲ್ಫ್ರೆಂಡ್ ಬರ್ತ್ ಡೇ ಪಾರ್ಟಿಗಾಗಿ ಬೃಹ್ನಾಟಕ!
ಜಿಲ್ಲಾಧಿಕಾರಿ ಎಂದು ಫೋಸ್ ಕೊಟ್ಟಿದ್ದನ್ನು ಪೊಲೀಸರು ನಂಬುತ್ತಿದ್ದಂತೆ ದತ್ ಆತ್ಮವಿಶ್ವಾಸ ಅತಿಯಾಗಿದೆ. ಇನ್ನೂ ಒಂದು ಕೈ ನೋಡೇ ಬಿಡೋಣ ಎಂದು ಚೆಕ್ಪೋಸ್ಟ್ ಬಳಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾನೆ. ಆಗಲೇ ಬಂಡವಾಳ ಬಯಲಾಗಿದೆ.
ಮಣಿಪುರ: 29 ವರ್ಷಗಳ ಹಿಂದೆ ಕನ್ನಡದಲ್ಲಿ ಉಂಡೂ ಹೋದ ಕೊಂಡೂ ಹೋದ ಎಂಬ ಸಿನಿಮಾ ತೆರೆ ಕಂಡಿತ್ತು. ಚಿತ್ರದಲ್ಲಿ ನಟ ಅನಂತ್ನಾಗ್ ನಕಲಿ ಕವ್ ಇನ್ಸ್ಪೆಕ್ಟರ್ ಆಗಿ ಊರಿನವರನ್ನೆಲ್ಲಾ ಮರುಳು ಮಾಡಿ ವಂಚಿಸುವ ಕಥೆ ಇತ್ತು. ಥೇಟ್ ಇದೇ ಸಿನಿಮಾ ಮಾದರಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಲು ಹೋಗಿ ಇಲ್ಲೊಬ್ಬ ಭೂಪ ಸಿಕ್ಕಿ ಬಿದ್ದಿದ್ದಾನೆ. ಲಾಕ್ಡೌನ್ ಮಧ್ಯೆ ಗರ್ಲ್ಫ್ರೆಂಡ್ ಬರ್ತ್ಡೇ ಪಾರ್ಟಿಗೆ ತೆರಳಲು ಯುವಕನೊಬ್ಬ ಆಡಿದ ನಾಟಕಕ್ಕೆ ಪೊಲೀಸರೇ ದಂಗಾಗಿದ್ದಾರೆ. ಬಿಸ್ವಜ್ಯೋತಿ ದತ್ ಎಂಬ ಯುವಕ ಗರ್ಲ್ಫ್ರೆಂಡ್ನ ಇಂಪ್ರೆಸ್ ಮಾಡಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾನೆ. ಅಷ್ಟಕ್ಕೂ ಈತ ಏನು ಮಾಡಿದ್ದಾನೆ ಗೊತ್ತೆ..?
ಬಿಸ್ವಜ್ಯೋತಿ ದತ್ ಎಂಬ ಅಸ್ಸಾಂ ರಾಜ್ಯದ ಹದಿಹರೆಯದ ಯುವಕ ಚೆಕ್ ಪೋಸ್ಟ್ನಲ್ಲಿದ್ದ ಪೊಲೀಸರಿಗೆ ತಾನು ಜಿಲ್ಲಾಧಿಕಾರಿ ಎಂದು ಮಂಕುಬೂದಿ ಎರೆಚಿದ್ದಾನೆ. ಬಾಡಿಗೆಗೆ ಕಾರನ್ನು ಪಡೆದು ಕಾರಿನ ಮುಂಭಾಗ ಜಿಲ್ಲಾಧಿಕಾರಿ ಎಂದು ನಾಮಫಲಕ ಹಾಕಿದ್ದಾನೆ. ಮೊದಮೊದಲು ಈತನ ಪ್ಲ್ಯಾನ್ ಸಕ್ಸಸ್ ಕೂಡ ಆಗಿದೆ. ನಾಮ ಫಲಕ ನೋಡುತ್ತಿದಂತೆ ಪರಿಶೀಲನೆ ನಡೆಸುತ್ತಿದ್ದ ಪೊಲೀಸರು ಸೆಲ್ಯೂಟ್ ಹೊಡೆದು ವಾಹನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪ್ರೇಯಸಿಯ ಹುಟ್ಟಹಬ್ಬವನ್ನೂ ಭರ್ಜರಿಯಾಗಿ ಆಚರಿಸಿದ್ದಾನೆ. ಆದರೆ ಬರ್ತ್ ಡೇ ಪಾರ್ಟಿಯಿಂದ ಹಿಂತಿರುಗುವಾಗ ಬಂಡವಾಳ ಬಯಲಾಗಿದೆ.
ಜಿಲ್ಲಾಧಿಕಾರಿ ಎಂದು ಫೋಸ್ ಕೊಟ್ಟಿದ್ದನ್ನು ಪೊಲೀಸರು ನಂಬುತ್ತಿದ್ದಂತೆ ದತ್ ಆತ್ಮವಿಶ್ವಾಸ ಅತಿಯಾಗಿದೆ. ಇನ್ನೂ ಒಂದು ಕೈ ನೋಡೇ ಬಿಡೋಣ ಎಂದು ಚೆಕ್ಪೋಸ್ಟ್ ಬಳಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾನೆ. ಪೊಲೀಸರನ್ನು ವಿಚಾರಿಸಿದ್ದಾನೆ. ಎಲ್ಲಾ ಸರಿಯಾಗಿ ನಡೆಯುತ್ತಿದೆಯಾ ಎಂದು ಗತ್ತಿನಲ್ಲೇ ಕೇಳಿದ್ದಾನೆ. ಮೊದಮೊದಲು ನಂಬಿದ ಪೊಲೀಸರಿಗೆ ಯುವಕನ ಅತಿಯಾದ ವರ್ತನೆಯಿಂದ ಅನುಮಾನ ಬಂದಿದೆ. ಕೂಡಲೇ ದತ್ ಹಾಗೂ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗಲೂ ದತ್ ತಾನು ಡಿಸಿ ಅಂತಲೇ ಫೋಸ್ ಕೊಟ್ಟಿದ್ದಾನೆ.
ಆದರೆ ಕಾರಿನ ಚಾಲನ ಯುವಕನ ಕಳ್ಳಾಟವನ್ನೆಲ್ಲಾ ಬಾಯ್ಬಿಟ್ಟಿದ್ದ. ತನಗೆ ಹಣ ಕೊಟ್ಟು ಈ ರೀತಿ ಬರುವಂತೆ ಒತ್ತಾಯಿಸಿ ಕರೆ ತಂದಿದ್ದಾನೆ. ಇನ್ನೂ ನನಗೆ ಹಣವನ್ನು ಕೊಟ್ಟಿಲ್ಲ ಎಂದು ಚಾಲಕ ಪೊಲೀಸರ ಎದುರು ಅವಲತ್ತುಕೊಂಡಿದ್ದ. ಕೋವಿಡ್ ಡ್ಯೂಟಿಯಲ್ಲಿದ್ದ ಪೊಲೀಸರು ಯುವಕನ ಕಳ್ಳಾಟ ಕಂಡು ಕೆಂಡಾಮಂಡಲಾಗಿದ್ದರು. ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಲಾಕ್ಡೌನ್ ನಿಯಮಗಳನ್ನು ಮುರಿದ ತಪ್ಪಿಗೆ ಬಿಸ್ವಜ್ಯೋತಿ ದತ್ನನ್ನು ಬಂಧಿಸಿದ್ದಾರೆ.
ಇದೇ ಮೊದಲ ಬಾರಿಗೆ ಅಲ್ಲ ಈ ಹಿಂದೆಯೂ ದತ್ ಇದೇ ರೀತಿ ಸುಳ್ಳು ಹೇಳಿಕೊಂಡು ವಂಚಿಸಲು ಯತ್ನಿಸಿ ಸಿಕ್ಕಿಬಿದ್ದಿರುವ ಇತಿಹಾಸವಿದೆ. ಕಳೆದ ವರ್ಷದ ಲಾಕ್ಡೌನ್ ವೇಳೆ ತಾನೊಬ್ಬ ಖ್ಯಾತ ವಕೀಲ ಎಂದು ಹೇಳಿಕೊಂಡಿದ್ದ. ಇನ್ನೂ ಹಲವೆಡೆ ತಾನೊಬ್ಬ ವೈದ್ಯನೆಂದು ಹೇಳಿಕೊಂಡು ಹಳ್ಳಿಯ ಜನರಿಂದ ಹಣವನ್ನೂ ಪೀಕಿದ್ದ. ಸರ್ಕಾರಿ ಅಧಿಕಾರಿ, ವಕೀಲ, ವೈದ್ಯ ಅಂತ ದಿನಕ್ಕೊಂದು ವೃತ್ತಿ ಹೇಳಿಕೊಂಡು ವಂಚಿಸುವುದನ್ನೇ ಚಟ ಮಾಡಿಕೊಂಡಿರುವ ದತ್ ಸದ್ಯ ಕಂಬಿ ಎಣಿಸುತ್ತಿದ್ದಾನೆ.
Published by:Kavya V
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ