ಗುವಾಹಟಿ: ಅಸ್ಸಾಂನಲ್ಲಿ ಬಾಲ್ಯ ವಿವಾಹವನ್ನು (Child Marriage) ಸಂಪೂರ್ಣವಾಗಿ ತಡೆಗಟ್ಟುವುದಕ್ಕೆ ಅಸ್ಸಾಂ ಸರ್ಕಾರ (Assam Government) ಪಣತೊಟ್ಟು ನಿಂತಿದೆ. ಈ ಕಾರ್ಯಾಚಾರಣೆಯಲ್ಲಿ ಬಾಲ್ಯ ವಿವಾಹವಾಗಿರುವವರು, ಬಾಲ್ಯ ವಿವಾಹಕ್ಕೆ ಕಾರಣವಾಗಿರುವವರು ಹಾಗೂ ಪ್ರೇರೇಪಣೆ ನೀಡಿರುವವರನ್ನು ಹುಡುಕಿ ಬಂಧಿಸಲಾಗಿದೆ. ಒಂದು ವಾರದಿಂದ ನಡೆಯುತ್ತಿರುವ ಈ ಕಾರ್ಯಾಚಾರಣೆಯಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ನ್ಯಾಯಾಲಯದ (Court) ಮುಂದೆ ಹಾಜರು ಪಡಿಸಲಾಗಿದೆ. ಆದರೆ ಸರ್ಕಾರದ ಪ್ರಯತ್ನಗಳು ಕೆಲವು ಅನಪೇಕ್ಷಿತ ಪರಿಣಾಮವನ್ನ ಉಂಟು ಮಾಡುತ್ತಿದೆ. ಬಾಲ್ಯವಿವಾಹಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಮ್ಮ ಕುಟುಂಬದವರ ಮೇಲೆ ಕೈಗೊಂಡಿರುವ ಕ್ರಮಗಳು ಕೆಲವು ಬಾಲ ವಧುಗಳಿಗೆ ಸಂಕಟವನ್ನು ಉಂಟುಮಾಡಿದೆ.
17 ವರ್ಷದ ಹುಡುಗಿ ಆತ್ಮಹತ್ಯೆ
ಸರ್ಕಾರ ಬಾಲ್ಯವಿವಾಹದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದರಿಂದ ಹೆದರಿ ಹುಡುಗಿಯ ಪೋಷಕರು ಮದುವೆಯನ್ನು ರದ್ಧುಗೊಳಿಸಿದ್ದಾರೆ. ಆ ಯುವತಿಗೆ ತಾನೂ ಪ್ರೀತಿಸುತ್ತಿರುವ ಯುವಕನೊಂದಿಗೆ ವಿವಾಹ ಮಾಡಿಸುವುದಾಗಿ ಪೋಷಕರು ಈ ಮೊದಲೇ ಮಾತುಕೊಟ್ಟಿದ್ದರು. ಇದೀಗ ವಿವಾಹವನ್ನು ರದ್ದುಗೊಳಿಸಿದ್ದರಿಂದ ಆ ಹದಿಹರೆಯದವರು ಯುವತಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸರ್ಕಾರದ ನಿರ್ಧಾರ ಮತ್ತು ಕ್ರಮಗಳಿಗೆ ಹೆದರಿ ರಾಜ್ಯದಲ್ಲಿ ಹಲವಾರು ವಿವಾಹಗಳನ್ನು ಅನಿವಾರ್ಯವಾಗಿ ಪೋಷಕರು ನಿಲ್ಲಿಸುತ್ತಿದ್ದಾರೆ.
ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಯುವತಿ
ಇನ್ನೊಂದು ಘಟನೆಯಲ್ಲಿ 23 ವರ್ಷದ ಯುವತಿಯೊಬ್ಬಳು ತನ್ನ ಪತಿ ಮತ್ತು ತಂದೆಯನ್ನು ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಬಾಲ್ಯವಿವಾಹ ಪ್ರಕರಣದಲ್ಲಿ ಆಕೆಯ ಪತಿ ಮತ್ತು ತಂದೆಯನ್ನು ಪೊಲೀಸರು ಬಂಧಿಸಲಾಗಿದೆ. ಆದರೆ ಯುವತಿ ತಾನೂ 1999 ರಲ್ಲಿ ಜನಿಸಿದೆ ಮತ್ತು 2018 ರಲ್ಲಿ ಮದುವೆಯಾಗಿದ್ದೇನೆ, ನಾನು ಮದುವೆಯಾದಾಗ ನನಗೆ 18 ತುಂಬಿತ್ತು ಎಂದು ಹೇಳಿಕೊಂಡಿದ್ದಾಳೆ. ಆದರೂ ಆಕೆಯ ವಿರೋಧದ ನಡುವೆ ಪೊಲೀಸರು ಆಕೆಯ ಪತಿ ಮತ್ತು ತಂದೆಯನ್ನು ಬಂಧಿಸಿ ಕರೆದೊಯ್ಯಲಾಗಿದೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Child Marriage: ಬಾಲ್ಯ ವಿವಾಹ ತಡೆಗೆ ಪಣತೊಟ್ಟ ಅಸ್ಸಾಂ ಸರ್ಕಾರ, ಒಂದೇ ದಿನ 1800 ಜನರ ಬಂಧನ!
ಎಲ್ಲೆಲ್ಲಿ ಎಷ್ಟು ಬಂಧನ
ಅಸ್ಸಾಂ ಪೊಲೀಸರ ಅಂಕಿಅಂಶಗಳ ಪ್ರಕಾರ ಬಿಸ್ವನಾಥ್ನಲ್ಲಿ 139, ಧುಬ್ರಿಯಲ್ಲಿ 126, ಬಕ್ಸಾದಲ್ಲಿ 120, ಬರ್ಪೇಟಾದಲ್ಲಿ 114, ನಾಗಾಂವ್ನಲ್ಲಿ 97, ಹೊಜೈನಲ್ಲಿ 96, ಕೊಕ್ರಜಾರ್ನಲ್ಲಿ 94, ಬೊಂಗೈಗಾಂವ್ನಲ್ಲಿ 87, ಕರೀಂಗಂಜ್ನಲ್ಲಿ 79, ಹಲಾಕಾನ್ನಲ್ಲಿ 76 ಜನರನ್ನು ಬಂಧಿಸಲಾಗಿದೆ. , ಕ್ಯಾಚಾರ್ನಲ್ಲಿ 72, ಗೋಲ್ಪಾರಾ ಜಿಲ್ಲೆಯಲ್ಲಿ 72 ಮಂದಿಯನ್ನು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆವರೆಗೂ ಕಾರ್ಯಾಚರಣೆ ಚಾಲ್ತಿಯಲ್ಲಿರುತ್ತದೆ
ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿಪಿ ಸಿಂಗ್, ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 4,074 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಕಠಿಣ ಕ್ರಮವು ಮುಂದಿನ ದಿನಗಳಲ್ಲಿ ಮುಂದುವರಿಯುತ್ತದೆ. ಮುಂದಿನ ವಿಧಾನಸಭಾ ಚುನಾವಣೆವರೆಗೂ ಕಾರ್ಯಾಚರಣೆ ಚಾಲ್ತಿಯಲ್ಲಿರುತ್ತದೆ ಎಂದಿದ್ದಾರೆ. ಇತ್ತ ಸರ್ಕಾರದ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.
ಅಸ್ಸಾಂ ಸರ್ಕಾರದ ವಿರುದ್ಧ ಓವೈಸಿ ವಾಗ್ದಾಳಿ
ಕಳೆದ ಆರು ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಕಳೆದ ಆರು ವರ್ಷಗಳಿಂದ ಸರ್ಕಾರ ಏನು ಮಾಡುತ್ತಿತ್ತು? ಕಳೆದ ಆರು ವರ್ಷಗಳಿಂದ ಇದು ನಿಮ್ಮ ವೈಫಲ್ಯವನ್ನು ತೋರಿಸುತ್ತಿದೆ. ನೀವು ವಿವಾಹವಾಗಿರುವ ಪುರುಷರನ್ನು ಜೈಲಿಗೆ ಕಳುಹಿಸುತ್ತಿದ್ದೀರಿ, ಈಗ ಆ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ. ಆ ಹುಡುಗಿಯರನ್ನು ಮುಖ್ಯಮಂತ್ರಿ (ಹಿಮಂತ ಬಿಸ್ವ ಶರ್ಮಾ) ನೋಡಿಕೊಳ್ಳುತ್ತಾರಾ? ಆ ಮದುವೆ ಮುರಿದು ಬೀಳುತ್ತಾ?. ನಿಮ್ಮ ವೈಫಲ್ಯದಿಂದ ಹೆಣ್ಣುಮಕ್ಕಳನ್ನು ದುಸ್ಥಿತಿಗೆ ತಳ್ಳುತ್ತಿದ್ದೀರಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ