ಮುಂಬೈ: ಜಮೀಯತ್ ಉಲಮಾ-ಇ-ಹಿಂದ್ ನ 34ನೇ ಮಹಾ ಅಧಿವೇಶನದಲ್ಲಿ ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ (Jamiat Ulema-e-Hind) ಮೌಲಾನಾ ಸೈಯದ್ ಅರ್ಷದ್ ಮದನಿ (Arshad Madani) ಅವರು ವೇದಿಕೆಯಲ್ಲಿ ಭಾಷಣದ ಮಧ್ಯೆ "ಓಂ ಮತ್ತು ಅಲ್ಲಾ ಒಂದೇ" ಎಂದು ಹೇಳುವ ಮೂಲಕ ವೇದಿಕೆಯಲ್ಲಿದ್ದ ಇತರ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ.
ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಜಮೀಯತ್ ಉಲಮಾ-ಇ-ಹಿಂದ್ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೌಲಾನಾ ಸೈಯದ್ ಅರ್ಷದ್ ಮದನಿ, ಹಿಂದೂಗಳ ಶ್ರೇಷ್ಠ ಸಂತ ಮನು ಕೂಡ ಅಲ್ಲಾಹ್ನನ್ನೇ ಪೂಜಿಸುತ್ತಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮದನಿ ಅವರ ಈ ಹೇಳಿಕೆ ಬೆನ್ನಲ್ಲೆ ಮಹಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಹಲವಾರು ಧಾರ್ಮಿಕ ಮುಖಂಡರು ಅರ್ಷದ್ ಮದನಿ ಭಾಷಣದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದು, ಕಾರ್ಯಕ್ರಮದ ಮಧ್ಯೆದಲ್ಲಿಯೇ ಎದ್ದು ಹೊರಟು ಹೋಗಿದ್ದಾರೆ.
ಇದನ್ನೂ ಓದಿ: Mahmood Madani: ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣ ತಪ್ಪು: ಮಹಮೂದ್ ಮದನಿ
ದೇವರ ಅಸ್ತಿತ್ವ ಇಲ್ಲದಿದ್ದಾಗ, ಎಲ್ಲ ಧರ್ಮೀಯರೂ ಅಲ್ಲಾಹ್ನನ್ನು ಪೂಜಿಸುತ್ತಿದ್ದರು
ಜಗತ್ತಿನಲ್ಲಿ ಯಾವ ದೇವರ ಅಸ್ತಿತ್ವವೂ ಇಲ್ಲದಿದ್ದಾಗ, ಎಲ್ಲ ಧರ್ಮೀಯರೂ ಅಲ್ಲಾಹ್ನನ್ನೇ ಪೂಜಿಸುತ್ತಿದ್ದರು ಎಂದು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 'ಶ್ರೀರಾಮ, ಬ್ರಹ್ಮ ಶಿವ ಯಾರೂ ಇಲ್ಲದಿದ್ದಾಗ, ಮನು ಯಾರನ್ನು ಪೂಜಿಸಿದರು ಎಂದು ನಾನು ಅನೇಕ ಧರ್ಮ ಗುರುಗಳನ್ನು ಕೇಳಿದ್ದೇನೆ. ಆಗ ಅವರು 'ಓಂ' ಅನ್ನು ಪೂಜಿಸುತ್ತಿದ್ದರು ಎಂದು ಹೇಳಿದ್ದಾರೆ. ಓಂ ಎಂದರೆ ಏನು ಎಂದು ನಾನು ಕೇಳಿದೆ. ಆಗ ಅವರು ಓಂ ಎಂದರೆ ರೂಪ ಮತ್ತು ಬಣ್ಣವಿಲ್ಲದ್ದು ಎಂದು ಅವರು ಹೇಳಿದರು' ಎಂದು ಮೌಲಾನಾ ಸೈಯದ್ ಅರ್ಷದ್ ಮದನಿ ಹೇಳಿದ್ದಾರೆ.
'ಇದನ್ನೇ ನಾವು ಮುಸ್ಲಿಮರು ಅಲ್ಲಾಹ್ ಎಂದು ಕರೆದಿದ್ದೇವೆ. ಹಿಂದೂಗಳು ಈಶ್ವರ ಎಂದು ಕರೆದರು. ಯಹೂದಿಗಳು 'ಕುದಾ' ಎಂದೂ ಹಾಗೂ ಇಂಗ್ಲಿಷರು 'ಗಾಡ್' ಎಂದು ಕರೆದರು. ಅಂದರೆ ಮನು ಕೂಡ ಯಾವ ರೂಪವೂ ಇಲ್ಲದ ಅಲ್ಲಾಹ್ನನ್ನೇ ಮೊದಲಿಗೆ ಪೂಜಿಸುತ್ತಿದ್ದನು ಎಂದರ್ಥ ಎಂದು ಅರ್ಷದ್ ಮದನಿ ಹೇಳಿದ್ದಾರೆ.
'ಜನರನ್ನು ಬಲವಂತವಾಗಿ ಇಸ್ಲಾಂಗೆ ಪರಿವರ್ತಿಸಿಲ್ಲ'
ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅರ್ಷದ್ ಮದನಿ, 'ದೇಶದಲ್ಲಿ ಸುಮಾರು 1400 ವರ್ಷಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಸಹೋದರರಂತೆ ವಾಸಿಸುತ್ತಿದ್ದಾರೆ ಮತ್ತು ನಾವು ಈವರೆಗೆ ಯಾರನ್ನೂ ಬಲವಂತವಾಗಿ ಇಸ್ಲಾಂಗೆ ಪರಿವರ್ತಿಸಿಲ್ಲ' ಎಂದು ಹೇಳಿದರು.
ಇದನ್ನೂ ಓದಿ: Ghar Wapsi: ಇಸ್ಲಾಂಗೆ ಮತಾಂತರಗೊಳ್ಳೋಕೆ ಸಜ್ಜಾಗಿದ್ದ ಅರ್ಚಕ, ಈಗ ಹಿಂದೂ ಧರ್ಮಕ್ಕೆ ಮರಳಿದ್ದೇಕೆ?
ಜೈನ ಮುಖಂಡರ ಆಕ್ರೋಶ
ಅರ್ಷದ್ ಮದನಿ ಅವರ ಭಾಷಣದ ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಜೈನ ಮುನಿ ಆಚಾರ್ಯ ಲೋಕೇಶ್ ಮುನಿ ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ, 'ನಾವು ಎಲ್ಲರೊಟ್ಟಿಗೆ ಸಾಮರಸ್ಯದಿಂದ ಬದುಕುವ ಜೀವನ ಸೂತ್ರವನ್ನು ಮಾತ್ರ ಒಪ್ಪುತ್ತೇವೆ. ಈ ಓಂ, ಅಲ್ಲಾ ಮತ್ತು ಮನು ಬಗ್ಗೆ ಕಥೆಗಳು ನಮಗೆ ಬೇಕಿಲ್ಲ. ಮದನಿ ಅವರು ಅಧಿವೇಶನದ ವಾತಾವರಣವನ್ನು ಹದಗೆಡಿಸಿದರು' ಎಂದು ಹೇಳಿದರು.
ಅವರು ಹೇಳಿದ ಕಥೆಗಳಿಗಿಂತ ದೊಡ್ಡ ಕಥೆ ನಾನೂ ಹೇಳಬಲ್ಲೆ. ನನ್ನೊಂದಿಗೆ ಚರ್ಚೆಗೆ ಬರುವಂತೆ ನಾನು ಮದನಿ ಅವರಿಗೆ ಆಹ್ವಾನ ನೀಡುತ್ತೇನೆ' ಎಂದು ಜೈನ್, ಮದನಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಸಭೆಯಿಂದ ಎದ್ದು ಹೊರ ನಡೆದ ಧಾರ್ಮಿಕ ಮುಖಂಡರು
ಹೀಗೆ ಅರ್ಷದ್ ಮದನಿ ಹೇಳಿಕೆ ಬೆನ್ನಲ್ಲೇ ಅಸಮಾಧಾನ, ಗದ್ದಲ ಭುಗಿಲೆದ್ದು, ಜೈನ್ ಮತ್ತು ಇತರ ಹಲವಾರು ಧಾರ್ಮಿಕ ಮುಖಂಡರು ವೇದಿಕೆಯಿಂದ ಹೊರನಡೆದರು. ಕಾರ್ಯಕ್ರಮದಲ್ಲಿ ಜಮಿಯತ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪ್ರಮುಖ ಮುಸ್ಲಿಂ ಸಂಘಟನೆಯು 17 ಅಂಶಗಳ ನಿರ್ಣಯವನ್ನು ಸಹ ಅಂಗೀಕರಿಸಿದೆ.
ಯುಸಿಸಿಯು ದೇಶದ ಏಕತೆ ಮತ್ತು ವೈವಿಧ್ಯತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಪ್ರಜಾಪ್ರಭುತ್ವದ ಮನೋಭಾವ ಮತ್ತು ಸಂವಿಧಾನದ 25 ರಿಂದ 29 ನೇ ವಿಧಿಗಳಲ್ಲಿ ನೀಡಲಾದ ಸಾಂವಿಧಾನಿಕ ಖಾತರಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ