• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ರೈತರಿಗಾಗಿ ನಾನು ಗಲ್ಲಿಗೇರಲೂ ಸಿದ್ಧ, ತಾಕತ್ತಿದ್ದರೆ ಬಂಧಿಸಿ; ಸಿಎಂ ನಿತೀಶ್​ಗೆ ತೇಜಸ್ವಿ ಯಾದವ್ ಸವಾಲು!

ರೈತರಿಗಾಗಿ ನಾನು ಗಲ್ಲಿಗೇರಲೂ ಸಿದ್ಧ, ತಾಕತ್ತಿದ್ದರೆ ಬಂಧಿಸಿ; ಸಿಎಂ ನಿತೀಶ್​ಗೆ ತೇಜಸ್ವಿ ಯಾದವ್ ಸವಾಲು!

ರೈತರ ಪರ ಪ್ರಮಾಣ ವಚನ ಸ್ವೀಕರಿಸುತ್ತಿರುವ ತೇಜಸ್ವಿ ಯಾದವ್ ಮತ್ತು ಇತರ ಮುಖಂಡರು.

ರೈತರ ಪರ ಪ್ರಮಾಣ ವಚನ ಸ್ವೀಕರಿಸುತ್ತಿರುವ ತೇಜಸ್ವಿ ಯಾದವ್ ಮತ್ತು ಇತರ ಮುಖಂಡರು.

ಹೇಡಿ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಬಿಹಾರ ಸರ್ಕಾರ ರೈತರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ರೈತರಿಗಾಗಿ ನಾನು ಗಲ್ಲಿಗೇರಲು ಸಿದ್ಧವಾಗಿದ್ದೇನೆ ಎಂದು ತೇಜಸ್ವಿ ಯಾದವ್​ ಕಿಡಿಕಾರಿದ್ದಾರೆ.

ಮುಂದೆ ಓದಿ ...
  • Share this:

ಪಾಟ್ನಾ (ಡಿಸೆಂಬರ್​ 06); ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಇಡೀ ದೇಶದ ರೈತರು ಕಳೆದ 10 ದಿನಗಳಿಂದ ದೆಹಲಿಯಲ್ಲಿ ಉಗ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ರೈತರ ಹೋರಾಟಕ್ಕೆ ದಿನದಿಂದ ದಿನಕ್ಕೆ ದೇಶದಾದ್ಯಂತ ವ್ಯಾಪಕ ಬೆಂಬಲವೂ ಹೆಚ್ಚುತ್ತಿದೆ. ಈ ನಡುವೆ ಬಿಹಾರದಲ್ಲಿ ವಿರೋಧ ಪಕ್ಷವಾದ ಮಹಾಘಟಬಂಧನ್​ ಮೈತ್ರಿಕೂಟದ ನಾಯಕರೂ ಸಹ ರೈತರ ಪರವಾಗಿ ಹೋರಾಟಕ್ಕೆಮುಂದಾಗಿದ್ದಾರೆ. ಆದರೆ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಅನುಮತಿಯಿಲ್ಲದೆ ಪ್ರತಿಭಟಿಸಿದ್ದಕ್ಕಾಗಿ ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಮತ್ತು ಮಹಾಘಟಬಂಧನ್‌ನ ಇತರ 18 ನಾಯಕರ ವಿರುದ್ಧ ಬಿಹಾರ ಸರ್ಕಾರ ಪ್ರಕರಣ ದಾಖಲಿಸಿದೆ. ಆದರೆ, ಇದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್, "ರೈತರಿಗಾಗಿ ನಾವು ಗಲ್ಲಿಗೇರಲೂ ಸಿದ್ಧ, ಸಾಧ್ಯವಾದರೆ ನಮ್ಮನ್ನು ಬಂಧಿಸಿ" ಎಂದು ಮುಖ್ಯಮಂತ್ರಿ  ನಿತೀಶ್​ ಕುಮಾರ್​ ಅವರಿಗೆ ಸವಾಲು ಹಾಕಿದ್ದಾರೆ.



ಬಿಹಾರ ಸರ್ಕಾರ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳ ಕುರಿತು ಮಾತನಾಡಿರುವ ತೇಜಸ್ವಿ ಯಾದವ್, "ಹೇಡಿ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಬಿಹಾರ ಸರ್ಕಾರ ರೈತರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ಅವರು ಬಂಧಿಸಲು ಸಿದ್ದರಿದ್ದರೆ ನಾನೇ ಶರಣಾಗುತ್ತೇನೆ, ರೈತರಿಗಾಗಿ ನಾನು ಗಲ್ಲಿಗೇರಲು ಸಿದ್ಧವಾಗಿದ್ದೇನೆ" ಎಂದು ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ದೇಶದ ರೈತರು ಕಳೆದ 10 ದಿನಗಳಿಂದ ಕಠಿಣ ಚಳಿ ಬಿಸಿಲೆನ್ನಡೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಆದರೆ, ರೈತರ ಈ ಹೋರಾಟಕ್ಕೆ ಬೆಂಬಲಿಸಿದ ಏಕೈಕ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್​ ಅವರ ವಿರುದ್ಧ ರಾಜ್ಯ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಎಂದು ಆರ್​ಜೆಡಿ ಪಕ್ಷ ಎನ್​ಡಿಎ ಮೈತ್ರಿಕೂಟದ ವಿರುದ್ಧ ಕಿಡಿಕಾರಿದೆ.



ಇದಕ್ಕೂ ಮುನ್ನ ಆರ್‌ಜೆಡಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಅಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ವ್ಯಂಗ್ಯವಾಡಿದೆ. ಆ ಸಭೆಯಲ್ಲಿ ಆರೋಗ್ಯ ಸಚಿವ ಮಂಗಲ್ ಪಾಂಡೆ ಸೇರಿದಂತೆ ಇತರರು ಭಾಗವಹಿಸಿದ್ದರು ಎಂಬುದನ್ನು ಎತ್ತಿ ತೋರಿಸಿದ ಪಕ್ಷವು, "ಆಡಳಿತಾರೂಡ ಸಮ್ಮಿಶ್ರ ಸರ್ಕಾರವು ಕೊರೋನಾ ಕಾರಣ ನೀಡಿ ವಿರೋಧ ಪಕ್ಷದ ನಾಯಕರ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಆದರೆ, ಅವರ ಸಭೆಗಳಲ್ಲಿ ಯಾವುದೇ ಕೊರೋನಾ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಿಲ್ಲ. ಇದಕ್ಕೆ ಯಾವ ಪ್ರಕರಣ?" ಎಂದು ಟೀಕಿಸಿದೆ.


ಇದನ್ನೂ ಓದಿ : Delhi Air Pollution: ಚಳಿ ಜೊತೆಗೆ ಹದಗೆಡುತ್ತಲೇ ಇದೆ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿ


ಶನಿವಾರ ಬಿಹಾರ ಸರ್ಕಾರ ಪ್ರತಿಭಟನೆ ನಡೆಸಲು ಅನುಮತಿ ನೀಡದಿದ್ದರೂ, ಪ್ರತಿಪಕ್ಷಗಳು ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದವು. ಅಲ್ಲಿ ಅವರು "ದೇಶಾದ್ಯಂತದ ರೈತರ ಹಿತಾಸಕ್ತಿಯನ್ನು ಕಾಪಾಡಲು ಯಾವುದೇ ಬೆಲೆ ತೆರಲು ಸಿದ್ದ" ಎಂದು ಪ್ರಮಾಣವಚನ ಸ್ವೀಕರಿಸಿದರು.


ತೇಜಸ್ವಿ ಯಾದವ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಡಿಸೆಂಬರ್ 8 ರಂದು ನಡೆಯುವ ಅಖಿಲ ಭಾರತ ಮುಷ್ಕರಕ್ಕೂ ಬೆಂಬಲ ಘೋಷಿಸಿದ್ದಾರೆ. ಅನುಮತಿ ಪಡೆಯದೆ ಸಭೆ ನಡೆಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ 500 ಅಪರಿಚಿತ ವ್ಯಕ್ತಿಗಳೂ ಸೇರಿದ್ದಾರೆ.

First published: