ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ವಿಚಾರ ಚರ್ಚೆಯಲ್ಲಿರುವಾಗಲೇ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆ ಮೇಲೆ ಮತ್ತೊಮ್ಮೆ ದಾಳಿ ನಡೆಸಿದೆ. ಈ ಮೂಲಕ ಉಗ್ರರರನ್ನು ಸದೆ ಬಡಿಯಲು ಕಠಿಣ ಕ್ರಮ ಕೈಗೊಂಡಿದೆ.
ಪಾಕ್ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆಯಲ್ಲಿರುವ ನಾಲ್ಕು ಉಗ್ರರ ನೆಲೆಗಳ ಮೇಲೆ ಭಾರತ ಸೇನೆ ಭಾನುವಾರ ಶೆಲ್ ದಾಳಿ ನಡೆಸುವ ಮೂಲಕ ನಾಶ ಮಾಡಿದೆ. ಈ ವೇಳೆ ನಾಲ್ಕೈದು ಪಾಕ್ ಸೈನಿಕರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ಪಾಕಿಸ್ತಾನ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ತಾಂಘರ್ ಭಾಗದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಈ ವೇಳೆ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಓರ್ವ ನಾಗರಿಕ ಮೃತಪಟ್ಟಿದ್ದರು. ಈ ದಾಳಿಗೆ ಭಾರತ ಸೇನೆ ಇಂದು ಸೇಡು ತೀರಿಸಿಕೊಂಡಿದೆ.
ಪಾಕಿಸ್ತಾನ ಭಾನುವಾರ ಬೆಳಗ್ಗೆ ಭಾರತದ ಗಡಿ ಭಾಗದಲ್ಲಿ ಗುಂಡು ಹಾರಿಸಿತ್ತು. ಈ ವೇಳೆ ಗುಂಡೇಟು ತಗುಲಿ ಇಬ್ಬರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದರು. ಅಲ್ಲದೆ, ನಾಗರಿಕನಿಗೂ ಗುಂಡೇಟು ತಗುಲಿತ್ತು. ಕೆಲ ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಗಡಿ ನಿಯಂತ್ರಣ ರೇಖೆ ಬಳಿ ಈ ವರ್ಷ ಒಟ್ಟು 2,000 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದರಿಂದ ಅನೇಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕದನ ವಿರಾಮ ನಿಲ್ಲಿಸುವಂತೆ ಭಾರತ ನಿರಂತರವಾಗಿ ಒತ್ತಾಯಿಸುತ್ತಲೇ ಇದೆ. ಆದರೆ, ಪಾಕ್ ಇದರಲ್ಲಿ ನಮ್ಮ ಕೈವಾಡ ಇಲ್ಲ ಎಂದು ಹೇಳುತ್ತಲೇ ಮತ್ತೆ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ