ಹರಿದ್ವಾರ, ಉತ್ತರಾಖಂಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಸಂಕಷ್ಟಗಳು ಸದ್ಯಕ್ಕೆ ಮುಗಿಯುವಂತೆ ತೋರುತ್ತಿಲ್ಲ. ‘ಮೋದಿ’ ಸಮುದಾಯದ (Modi Community) ಬಗ್ಗೆ ಆಕ್ಷೇಪಾರ್ಯ ಹೇಳಿಕೆ (objectionable statement) ಕೊಟ್ಟು ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಹುಲ್ ಗಾಂಧಿ, ಜಾಮೀನನ್ನೇನೋ ಪಡೆದ್ರು. ಆದ್ರೆ ನ್ಯಾಯಾಲಯದಿಂದ ದೋಷಿ ಅಂತ ಹೇಳಿದ್ದರಿಂದ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವ (Lok Sabha membership) ಕಳೆದುಕೊಳ್ಳಬೇಕಾಯ್ತು. ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, “ಕ್ಷಮೆ ಕೇಳುವುದಕ್ಕೆ ನಾನು ಸಾವರ್ಕರ್ (Savarkar) ಅಲ್ಲ” ಅಂದಿದ್ದರು. ಅದಕ್ಕೆ ಸಾವರ್ಕರ್ ಮೊಮ್ಮಗ “ನಿಮ್ಮ ಆರೋಪಕ್ಕೆ ಸ್ಪಷ್ಟನೆ ನೀಡಿ, ಇಲ್ಲವಾದರೆ ನಿಮ್ಮ ಮೇಲೆ ಕೇಸ್ ಹಾಕುತ್ತೀನಿ” ಅಂತ ಎಚ್ಚರಿಸಿದ್ದರು. ಇದೀಗ ರಾಹುಲ್ ಗಾಂಧಿ ಮೇಲೆ ಮತ್ತೊಂದು ಕೇಸ್ನ (Case) ತೂಗುಗತ್ತಿ ತೂಗುತ್ತಿದೆ!
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮೊಕದ್ದಮೆ ದಾಖಲಾಗಿದೆ. ಉತ್ತರಾಖಂಡ್ನ ಹರಿದ್ವಾರ ಕೋರ್ಟ್ನಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಕಮಲ್ ಭಡೌರಿಯಾ ಎಂಬುವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಉತ್ತರಾಖಂಡದ ಹರಿದ್ವಾರದ ನ್ಯಾಯಾಲಯದಲ್ಲಿ ವಕೀಲ ಅರುಣ್ ಭಡೌರಿಯಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಇದರ ವಿಚಾರಣೆಯನ್ನು ಕೋರ್ಟ್ ಇದೇ ಏಪ್ರಿಲ್ 12ರಂದು ಕೈಗೆತ್ತಿಕೊಳ್ಳಲಿದೆ.
ಆರ್ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ಏನು ಹೇಳಿದ್ದರು?
2023, ಜನವರಿ 9ರಂದು ಭಾರತ ಜೋಡೋ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಆರ್ಎಸ್ಎಸ್ ವಿರುದ್ಧ ಮಾತನಾಡಿದ್ದರು ಎನ್ನಲಾಗಿದೆ. ಹರ್ಯಾಣದ ಅಂಬಾಲಾದಲ್ಲಿ ಪಾದಯಾತ್ರೆ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ, ಆರ್ಎಸ್ಎಸ್ನವರು ‘21ನೇ ಶತಮಾನದ ಕೌರವರು ಇದ್ದಂತೆ' ಎಂದು ಆರೋಪಿಸಿದ್ದರು ಎನ್ನಲಾಗಿದೆ. “21ನೇ ಶತಮಾನದ ಕೌರವರು ಖಾಕಿ ಹಾಫ್ ಪ್ಯಾಂಟ್ ಧರಿಸುತ್ತಾರೆ ಮತ್ತು 'ಶಾಖೆ'ಗಳನ್ನು ನಡೆಸುತ್ತಾರೆ. ಅವರ ಜೊತೆಗೆ ದೇಶದ ಎರಡರಿಂದ ಮೂರು ಶ್ರೀಮಂತರು ನಿಂತಿದ್ದಾರೆ" ಎಂದು ಆರೋಪಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಂಡಿದ್ದೇಕೆ? ಯಾವ ಕಾನೂನಿನಡಿ ಇದಕ್ಕೆ ಅವಕಾಶವಿದೆ?
ಏಪ್ರಿಲ್ 12ರಂದು ಅರ್ಜಿ ವಿಚಾರಣೆ
ರಾಹುಲ್ ಗಾಂಧಿ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತ ಕಮಲ್ ಭಡೌರಿಯಾ ಎಂಬುವರು ದೂರು ನೀಡಿದ್ದಾರೆ. ಇದರ ಅನ್ವಯ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಹರಿದ್ವಾರ ಕೋರ್ಟ್ ಇದೇ ಏಪ್ರಿಲ್ 12ರಂದು ವಿಚಾರಣೆಗೆ ಕೈಗೆಕೊಳ್ಳಲಿದೆ. ಫಿರ್ಯಾದುದಾರರು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಧೀಶ ಶಿವ ಸಿಂಗ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ವಕೀಲರು ಹೇಳಿದ್ದೇನು?
ಇನ್ನು ಎಎನ್ಐ ಜೊತೆ ಮಾತನಾಡಿದ ಕಮಲ್ ಬದೌರಿಯಾ ಪರ ವಕೀಲರು, "ರಾಹುಲ್ ಗಾಂಧಿ ಆರ್ಎಸ್ಎಸ್ ಅನ್ನು 21 ನೇ ಶತಮಾನದ ಕೌರವರಿಗೆ ಹೋಲಿಸಿದ್ದಾರೆ. ಅವರ ಈ ಅಸಭ್ಯ ಭಾಷಣವೇ ಅವರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಆರ್ಎಸ್ಎಸ್ ಅಂತಹ ಸಂಘಟನೆಯಾಗಿದ್ದು, ದೇಶದಲ್ಲಿ ವಿಪತ್ತು ಸಂಭವಿಸಿದಾಗಲೆಲ್ಲಾ ಅದು ಸಹಾಯ ಮಾಡಲು ಮುಂದೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ" ಎಂದಿದ್ದಾರೆ.
ಇದನ್ನೂ ಓದಿ: Disqualification: ಅನರ್ಹಗೊಂಡವರು ರಾಹುಲ್ ಗಾಂಧಿ ಒಬ್ಬರೇ ಅಲ್ಲ, ಲಿಸ್ಟ್ನಲ್ಲಿದ್ದಾರೆ ಘಟಾನುಘಟಿಗಳು!
ರಾಹುಲ್ ವಿರುದ್ಧ ದೂರು ನೀಡುವುದಾಗಿ ಲಲಿತ್ ಮೋದಿ ಎಚ್ಚರಿಕೆ
ಮೋದಿ ಸರ್ನೇಮ್ ಬಗ್ಗೆ ರಾಹುಲ್ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿದ್ದ ಲಲಿತ್ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದರು. " ರಾಹುಲ್ ಸೇರಿದಂತೆ ಬಹುತೇಕ ಕಾಂಗ್ರೆಸ್ನವರು ನಾನು ಪರಾರಿಯಾಗಿದ್ದೇನೆ ಎಂದು ಪದೇ ಪದೇ ಹೇಳುವುದನ್ನು ನಾನು ನೋಡಿದ್ದೇನೆ. ಅದು ಏಕೆ? ಹೇಗೆ?. ಇಲ್ಲಿಯವರೆಗೆ ನಾನು ಯಾವಾಗ ಶಿಕ್ಷೆಗೆ ಒಳಗಾಗಿದ್ದೇನೆ? ಪಪ್ಪು ಅಲಿಯಾಸ್ ರಾಹುಲ್ ಗಾಂಧಿಯಂತೆ ನಾನು ಶಿಕ್ಷೆಗೆ ಗುರಿಯಾಗಿಲ್ಲ. ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಬೇರೆ ಕೆಲಸವಿಲ್ಲ ಎಂದು ಕಿಡಿಕಾರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ