ಭೋಪಾಲ್: ದೇಶದಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳಿಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಇದೀಗ ಸ್ವತಃ ಸ್ವಪಕ್ಷೀಯರೇ ದ್ವನಿ ಎತ್ತುತ್ತಿದ್ದು, ಬಿಜೆಪಿ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ಸಿಎಎ ಕಾಯ್ದೆಯನ್ನು ವಿರೋಧಿಸಿ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಘಾಟಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಜಿತ ಬೋರ್ಸಾಯಿ, “ಸಿಎಎ ಮತ್ತು ಎನ್ಆರ್ಸಿ ಮುಸ್ಲಿಮರಿಗೆ ಮಾತ್ರವಲ್ಲ ಎಸ್ಸಿ/ಎಸ್ಟಿ ಸೇರಿದಂತೆ ಒಬಿಸಿ ಸಮಾಜದವರಿಗೂ ತೊಂದರೆ ಉಂಟು ಮಾಡುತ್ತದೆ” ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗರವನ್ನು ಉಂಟು ಮಾಡಿದ್ದಾರೆ.
ಈ ಕಾಯ್ದೆ ದೇಶಕ್ಕೆ ಅಪಾಯಕಾರಿ ಎಂದು ಫೇಸ್ಬುಕ್ ಮೂಲಕವೂ ಅಸಮಾಧಾನ ಹೊರಹಾಕಿರುವ ಅಜಿತ ಬೋರ್ಸಾಯಿ, “ಸಿಎಎ ಕಾಯ್ದೆಯನ್ನು ಒಮ್ಮೆ ಓದಿದರೆ ನಿಮಗೆ ಅರ್ಥವಾಗುತ್ತದೆ. ಗುಂಪಿನೊಳಗೆ ಒಂದಾಗುವ ಮನಸ್ಥಿತಿ ನನ್ನದಲ್ಲ. ಇಂತಹ ತಪ್ಪುಗಳನ್ನು ಒಪ್ಪಿಕೊಳ್ಳುವ ಕುರಿಯೂ ನಾನಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಮಧ್ಯಪ್ರದೇಶದ ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸಹ ಕೇಂದ್ರ ಸರ್ಕಾರ ಸಿಎಎ ಕಾಯ್ದೆಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, "ಈ ಕಾಯ್ದೆ ದಲಿತ ಹಾಗೂ ಅಲ್ಪ ಸಂಖ್ಯಾತರಿಗೆ ಮಾರಕ" ಎಂದು ಬಣ್ಣಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ನಾರಾಯಣ ತ್ರಿಪಾಠಿ ಅವರಿಗೆ ವಿವರಣೆ ಕೇಳಿ ಶೋಕಾಸ್ ನೊಟೀಸ್ ನೀಡಿದ್ದ ಬಿಜೆಪಿ ಹೈಕಮಾಂಡ್ ತನ್ನ ಪಕ್ಷದ ಶಾಸಕರಿಗೆ ಸಿಎಎ ಕುರಿತು ವಿರೋದಿ ಹೇಳಿಕೆ ನೀಡದಂತೆಯೂ ಸೂಚಿಸಿತ್ತು. ಆದರೆ, ಈ ಸೂಚನೆಯನ್ನು ಮುರಿದಿರುವ ಅಜಿತ ಬೋರ್ಸಾಯಿ ಇದೀಗ ಬಹಿರಂಗವಾಗಿ ಸಿಎಎ ವಿರೋಧಿಸುವ ಮೂಲಕ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ