ಅಮೃತ್ಸರ: ಖಲಿಸ್ತಾನಿ ತೀವ್ರಗಾಮಿ ಗುಂಪು ‘ವಾರಿಸ್ ಪಂಜಾಬ್ ಕೆ’ (Waris Punjab Ke) ಸಂಘಟನೆಯ ಮುಖ್ಯಸ್ಥ, ಹಾಗೂ ಖಲಿಸ್ತಾನಿ ಮುಖಂಡ ಅಮೃತ್ ಪಾಲ್ ಸಿಂಗ್ (Amrit pal Singh) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಬೆದರಿಕೆ ಹಾಕಿದ್ದಾರೆ. ಖಲಿಸ್ತಾನಿ ಹೋರಾಟಗಾರರಿಗೆ (Khalistan Fight) ಠಕ್ಕರ್ ಕೊಟ್ಟು ಮಾತನಾಡಿರುವ ಅಮಿತ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿವ ಅಮೃತ್ಪಾಲ್ ಸಿಂಗ್, ಇಂದಿರಾ ಗಾಂಧಿ (Indira gandhi) ಅವರಿಗೆ ಬಂದ ಪರಿಸ್ಥಿತಿಯೇ ನಿಮಗೂ ಬರಬಹುದು ಎಂದು ಬಹಿರಂಗ ಬೆದರಿಕೆ ಹಾಕಿದ್ದಾರೆ.
ಅಪಹರಣ ಪ್ರಕರಣದಲ್ಲಿ ಬಂಧಿತನಾಗಿರುವ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ತೂಫಾನ್ ಸಿಂಗ್ ಎಂಬಾತನನ್ನು ಬಿಡುಗಡೆ ಮಾಡುವಂತೆ ಅಮೃತ್ಪಾಲ್ ಸಿಂಗ್ ಮತ್ತು ಆತನ ಬೆಂಬಲಿಗರು ಗುರುವಾರ ಅಮೃತಸರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಖಲಿಸ್ತಾನಿ ಗುಂಪು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಹೇಳಿಕೆ ನೀಡಿರುವ ಅಮೃತ್ ಪಾಲ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: Terror Attack: ಉಗ್ರ ಸಂಘಟನೆಗಳು ಬಾಲಾಪರಾಧಿಗಳನ್ನೇ ಹೆಚ್ಚು ಬಳಸಿಕೊಳ್ಳುತ್ತಿರುವುದೇಕೆ?
'ಇಂದಿರಾ ಗಾಂಧಿಗೆ ಆದ ಗತಿ ನಿಮಗೂ ಆಗಬಹುದು'
‘ಅಮಿತ್ ಶಾ ಅವರು ಖಲಿಸ್ತಾನ್ ಚಳವಳಿಯನ್ನು ಹುಟ್ಟುಹಾಕಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ಮಾತನ್ನು ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅವರಿಗೆ ಏನಾಯಿತು ಎಂದು ಯೋಚಿಸಿಕೊಳ್ಳಿ, ಅದೇ ರೀತಿ ನೀವು ಕೂಡ ಮಾಡಿದರೆ, ಅವರಿಗೆ ಆದ ಗತಿಯೇ ನಿಮಗೂ ಆಗಬಹುದು. ಅಂತಹ ಪರಿಸ್ಥಿತಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ನಮ್ಮ ಚಳವಳಿಯನ್ನು ಹತ್ತಿಕ್ಕುವ ಬಗ್ಗೆ ಎಚ್ಚರಿಕೆ ನೀಡಿದಂತೆಯೇ ಹಿಂದೂ ರಾಷ್ಟ್ರಕ್ಕೆ ಆಗ್ರಹಿಸುತ್ತಿರುವವರಿಗೂ ಎಚ್ಚರಿಕೆ ಕೊಟ್ಟರೆ ನೀವು ಕೇಂದ್ರ ಗೃಹ ಸಚಿವರಾಗಿ ಉಳಿಯುವುದಿಲ್ಲ. ಅದರ ಅರಿವು ಅಮಿತ್ ಶಾಗೆ ಇದೆ ಎಂದು ಸಿಂಗ್ ಹೇಳಿದ್ದಾರೆ.
'ನಾವು ಹುಟ್ಟು ಹೋರಾಟಗಾರರು'
ಇನ್ನು ನಾವು ಹುಟ್ಟು ಹೋರಾಟಗಾರರು ಎಂದಿರುವ ಅಮೃತ್ ಪಾಲ್ ಸಿಂಗ್, ನಾವು ಯಾವುದೇ ಬಂಧನಗಳಿಗೆ ಹೆದರುವುದಿಲ್ಲ. ನಮ್ಮ ಸಭೆ, ನಮ್ಮ ಪ್ರಯಾಣವನ್ನು ನಿಲ್ಲಿಸಲು ಸರ್ಕಾರಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಆದರೆ, ಯಾರಿಂದಲೂ ಸಿಖ್ಖರನ್ನು ತಡೆಯಲಾಗದು. ಸರ್ಕಾರಗಳು ನಮ್ಮನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿವೆ. ಆದರೆ, ನಾವು ಒಂದು ಗುಂಪಾಗಿ ಒಗ್ಗಟ್ಟಿನಿಂದ ಇದ್ದೇವೆ ಎಂಬುದನ್ನು ಅವರು ತಿಳಿದಿರಬೇಕು ಎಂದು ಅಮಿತ್ ಶಾಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Hindu Temple Vandalised: ಒಂದೇ ವಾರದ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತೊಂದು ದೇವಾಲಯ ಧ್ವಂಸ!
ಠಾಣೆಗೆ ನುಗ್ಗಿದ ಖಲಿಸ್ತಾನಿಗಳು
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನಿ ಮುಖಂಡ ಅಮೃತ್ಪಾಲ್ನ ಆಪ್ತ ಲವ್ಪ್ರೀತ್ ತೂಫಾನ್ ಸಿಂಗ್ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ, ಅಮೃತ್ಪಾಲ್ ಬೆಂಬಲಿಗರು ಹಾಗೂ ಖಲಿಸ್ತಾನಿ ಹೋರಾಟಗಾರರು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಬ್ಯಾರಿಕೇಡ್ಗಳನ್ನು ಪುಡಿಪುಡಿ ಮಾಡಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಇವರೆಲ್ಲರೂ ಕೈಗಳಲ್ಲಿ ಬಂದೂಕು, ಖಡ್ಗ ಹಾಗೂ ಇತರ ಆಯುಧಗಳನ್ನು ಹಿಡಿದು ಪೊಲೀಸರನ್ನು ಹಿಮ್ಮೆಟ್ಟಿಸಲು ಯತ್ನ ಮಾಡಿದ್ದರು. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.
ಖಲಿಸ್ತಾನಿ ಹೋರಾಟಗಾರರ ಗಲಭೆಯ ಆರ್ಭಟಕ್ಕೆ ಬೆದರಿದ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿ ಕಾನೂನು ವ್ಯವಸ್ಥೆ ಹದಗೆಡುವ ಭೀತಿಯಿಂದ ಲವ್ಪ್ರೀತ್ ತೂಫಾನ್ ಸಿಂಗ್ನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಆಗ ಖಲಿಸ್ತಾನಿ ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟು ಶಾಂತರಾದರು. ಸದ್ಯ ತೂಫಾನ್ ಸಿಂಗ್ ಮತ್ತು ಅಮೃತ್ ಪಾಲ್ ಸಿಂಗ್ ವಿರುದ್ಧ ಅಪಹರಣ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಗಲಭೆ ಪ್ರಕರಣದ ತನಿಖೆಗೆ ಎಸ್ಐಟಿ ತಂಡ ರಚನೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ