ಲಕ್ನೋ: ಉತ್ತರಪ್ರದೇಶ ರಾಜಧಾನಿ ಲಕ್ನೋ ನಗರದಲ್ಲಿ ಹಾಕಲಾಗಿರುವ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಹೋಲ್ಡಿಂಗ್ಸ್ಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಮತ್ತು ಈ ಸಂಬಂಧ ಮಾಡಲಾದ ಕೆಲಸದ ಬಗ್ಗೆ ಮಾರ್ಚ್ 16ರೊಳಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.
ಈ ವಿಷಯವಾಗಿ ಭಾನುವಾರ ಸ್ವಹಿತಾಸಕ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ಮತ್ತು ನ್ಯಾ.ರಮೇಶ್ ಸಿನ್ಹಾ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.
ರಾಜ್ಯ ರಾಜಧಾನಿ ಲಕ್ನೋದಲ್ಲಿ ಸದಾ ಗಿಜಿಗುಡುವ ಹರರತ್ಗಂಜ್ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ಗಳನ್ನು ಹಾಕುವಂತೆ ಗುರುವಾರ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆದೇಶ ನೀಡಿದ್ದರು.
ಲಕ್ನೋದಲ್ಲಿ 50 ಜನರನ್ನು ಗುರುತಿಸಿರುವ ಪೊಲೀಸರು ಅವರನ್ನು ದಂಗೆಕೋರರು ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕಾರಣಿ ಸದಾಫ್ ಜಾಫರ್, ಮಾನವ ಹಕ್ಕು ಕಾರ್ಯಕರ್ತ ಮೊಹಮ್ಮದ್ ಶೋಯೆಬ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದರಾಪುರಿ ಅವರ ಭಾವಚಿತ್ರಗಳನ್ನು ಬ್ಯಾನರ್ನಲ್ಲಿ ಹಾಕಲಾಗಿದೆ.
ಉತ್ತರಪ್ರದೇಶ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್ ಹೈಕೋರ್ಟ್, ಇದು ವ್ಯಕ್ತಿಯ ವೈಯಕ್ತಿಯ ಸ್ವಾತಂತ್ರ್ಯ ಹರಣ ಎಂದು ಖಾರವಾಗಿ ಹೇಳಿದೆ. ಜೊತೆಗೆ ಮಧ್ಯಾಹ್ನ 3 ಗಂಟೆಯೊಳಗೆ ಹೋಲ್ಡಿಂಗ್ಸ್ಗಳನ್ನು ತೆರವುಗೊಳಿಸುವಂತೆ ಹೇಳಿದೆ.
ಓದನ್ನು ಓದಿ: ಮಹಿಳಾ ವಿಶೇಷ; ಪ್ರಧಾನಿ ಮೋದಿ ಟ್ವಿಟರ್ ಖಾತೆಯಲ್ಲಿದೆ 7 ಸಾಧಕಿಯರ ಕಥೆ; ಇಲ್ಲಿದೆ ಜನ ಮೆಚ್ಚುಗೆ ಗಳಿಸಿದ ಸಾಧಕಿಯರ ಬದುಕು!
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ