ನವದೆಹಲಿ(ಸೆ. 2): ವಿಧಾನಸಭಾ ಚುನಾವಣೆ (2022) ಹತ್ತಿರವಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ (Uttar Paradesh) ಆಡಳಿತಾರೂಢ ಬಿಜೆಪಿ (BJP) ಮತ್ತಿತರ ಪ್ರಮುಖ ಪಕ್ಷಗಳ ನಾಯಕರ ಭೇಟಿಗಳು ಮಹತ್ವ ಪಡೆದುಕೊಳ್ಳುತ್ತಿವೆ. ಪ್ರವಾಸ ಮತ್ತು ಸಮಾವೇಶಗಳು ಕೂಡ ಶುರುವಾಗಿವೆ. ಮುಂದುವರೆದ ಭಾಗವಾಗಿ ಮುಸ್ಲಿಂ ಸಮುದಾಯದ ಮತಗಳನ್ನು ಛಿದ್ರಗೊಳಿಸಬಲ್ಲ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಉತ್ತರ ಪ್ರದೇಶಕ್ಕೆ ಮೂರು ದಿನಗಳ ಭೇಟಿಯನ್ನು ಘೋಷಿಸಿದ್ದಾರೆ. ವಿಶೇಷ ಎಂದರೆ ಉತ್ತರ ಪ್ರದೇಶ ಮಾತ್ರವಲ್ಲ ಇಡೀ ದೇಶದ ರಾಜಕಾರಣದ ಮೇಲೆ ವಿಶಿಷ್ಟ ರೀತಿಯಲ್ಲಿ ಪರಿಣಾಮ ಬೀರುವ ಅಯೋಧ್ಯೆಯಿಂದ (Ayodhya) ಅವರು ರಾಜ್ಯ ಪ್ರವಾಸವನ್ನು ಆರಂಭಿಸಲಿದ್ದಾರೆ.
ಇದೇ ಸೆಪ್ಟೆಂಬರ್ 7 ರಂದು ಅಸಾದುದ್ದೀನ್ ಓವೈಸಿ ಅವರು ಮೂರು ದಿನಗಳ ಉತ್ತರ ಪ್ರದೇಶ ಪ್ರವಾಸ ಆರಂಭವಾಗಲಿದ್ದು, ಒವೈಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು ಅಯೋಧ್ಯೆಯ ರುದೌಲಿ ಪಟ್ಟಣದಿಂದ ಆರಂಭವಾಗುತ್ತದೆ. ಅಲ್ಲಿ ಅವರು ಮೊದಲಿಗೆ ವಂಚಿತ್-ಶೋಷಿತ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸೆಪ್ಟೆಂಬರ್ 8 ರಂದು ಸುಲ್ತಾನಪುರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಪ್ರವಾಸದ ಕೊನೆಯ ದಿನವಾದ ಸೆಪ್ಟೆಂಬರ್ 9ರಂದು ಓವೈಸಿ ಬರಬಂಕಿಗೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಅವರು ಬಹ್ರೈಚ್ ಮತ್ತು ಪೂರ್ವಾಂಚಲ್ ಪ್ರದೇಶ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ:Coronavirus: ಈ ಹಾವಿನ ವಿಷ ಕೊರೋನಾಗೆ ರಾಮಬಾಣವಂತೆ..! ಹೊಸ ಅಧ್ಯಯನ
ಅಸಾದುದ್ದೀನ್ ಓವೈಸಿ ಅವರ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷವು 'ಭಾಗಿದಾರಿ ಸಂಕಲ್ಪ ಮೋರ್ಚಾ' ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದೆ. ಎಐಎಂಐಎಂ ಪಕ್ಷದ ಜೊತೆ ಓಂಪ್ರಕಾಶ್ ರಾಜ್ಭಾರ್ (Omprakash Rajbhar) ಅವರ ಎಸ್ಬಿಎಸ್ಪಿ ಪಕ್ಷ 'ಭಾಗಿದರಿ ಸಂಕಲ್ಪ ಮೋರ್ಚಾ' ಅಡಿಯಲ್ಲಿ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯಲಿದೆ. ಆದಾಗ್ಯೂ ಇತ್ತೀಚೆಗೆ ಅನೇಕ ಸಂದರ್ಭಗಳಲ್ಲಿ ಎರಡೂ ಪಕ್ಷಗಳ ದೊಡ್ಡ ನಾಯಕರ ನಡುವೆ ಹಲವು ವಿರೋಧಾಭಾಸಗಳು ಕೂಡ ಮುನ್ನೆಲೆಗೆ ಬಂದಿವೆ.
ಈ ಹಿಂದೆ ಓಂ ಪ್ರಕಾಶ್ ರಾಜ್ಭಾರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ 'ರಾಜಕೀಯದಲ್ಲಿ ಏನು ಬೇಕಾದರೂ ಘಟಿಸಲು ಸಾಧ್ಯ' ಎಂದು ಹೇಳಿದ್ದರು. ಇನ್ನೊಂದೆಡೆ ಓವೈಸಿ ಅವರು ತಮ್ಮ ಎಐಎಂಐಎಂ ಪಕ್ಷವು ಉತ್ತರ ಪ್ರದೇಶದಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಣೆ ಮಾಡಿದ್ದರು. ಈ ವೈರುದ್ಯದ ಹೇಳಿಕೆಗಳ ನಡುವೆ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಆದಾಗ್ಯೂ, ಓವೈಸಿ ಮತ್ತು ಓಂಪ್ರಕಾಶ್ ರಾಜಭರ್ ಅವರು ಬಿಜೆಪಿ ಹೊರತುಪಡಿಸಿ ಯಾವುದೇ ಪಕ್ಷದೊಂದಿಗೆ ಹೋಗಲು ಸಿದ್ಧರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:Viral News: ಅಪರೂಪದ ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ..!
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ಅಸಾದುದ್ದೀನ್ ಓವೈಸಿ ತಮ್ಮ ಪಕ್ಷ ಎಐಎಂಐಎಂ ನಿರ್ಣಾಯಕವಾದ ಪಾತ್ರ ನಿರ್ವಹಿಸಲಿದೆ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು. ಅಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banarji) ಅವರ ಎದುರು ಓವೈಸಿ ಆಟ ನಡೆಯಲಿಲ್ಲ. ಮುಂದೆ ಉತ್ತರ ಪ್ರದೇಶದಲ್ಲಿ ಅಸಾದುದ್ದೀನ್ ಓವೈಸಿ ಎಷ್ಟರಮಟ್ಟಿಗೆ ಪರಿಣಾಮ ಬೀರಬಲ್ಲರು ಎಂಬುದನ್ನು ಕಾದುನೋಡಬೇಕು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ