ಪ್ಯಾರೀಸ್: ಸುಡಾನ್ನಲ್ಲಿ (Sudan Clashes) ಉಂಟಾಗಿರುವ ಆಂತರಿಕ ಯುದ್ಧದಿಂದ ಅಲ್ಲಿರುವ ಜನರ ಅಕ್ಷರಶಃ ನರಕದಲ್ಲಿ ಬದುಕುತ್ತಿದ್ದಾರೆ. ಯುದ್ಧಪೀಡಿತ ರಾಷ್ಟ್ರದಲ್ಲಿ ತತ್ತರಿಸಿರುವ ತಮ್ಮ ನಾಗರಿಕರನ್ನು ರಕ್ಷಣೆ ಮಾಡಲು ಆಯಾ ರಾಷ್ಟ್ರಗಳು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಮಾಡುತ್ತಿವೆ. ಈ ಮಧ್ಯೆ ಭಾನುವಾರ ಫ್ರೆಂಚ್ ವಿಮಾನದಿಂದ ಸ್ಥಳಾಂತರಿಸಲ್ಪಟ್ಟ ಜನರಲ್ಲಿ ಐವರು ಭಾರತೀಯ ನಾಗರಿಕರು (Indians) ಸೇರಿದ್ದಾರೆ ಎಂದು ಭಾರತದಲ್ಲಿನ (French Govt) ಫ್ರೆಂಚ್ ರಾಯಭಾರ ಕಚೇರಿ ಟ್ವೀಟ್ ಮೂಲಕ ಖಚಿತಪಡಿಸಿದೆ.
ಫ್ರೆಂಚ್ ರಾಯಭಾರ ಕಚೇರಿ ಮಾಡಿರುವ ಟ್ವೀಟ್ನಲ್ಲಿ, ಭಾನುವಾರ ರಾತ್ರಿ ಫ್ರಾನ್ಸ್ ಸರ್ಕಾರ 388 ಜನರನ್ನು ಸುಡಾನ್ನಿಂದ ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಇದರಲ್ಲಿ ಹಲವಾರು ಭಾರತೀಯರೂ ಸೇರಿದ್ದಾರೆ. ಫ್ರೆಂಚ್ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ. ಕಳೆದ ರಾತ್ರಿ, ಎರಡು ಮಿಲಿಟರಿ ವಿಮಾನಗಳಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ 28 ದೇಶಗಳ 388 ಜನರನ್ನು ಸ್ಥಳಾಂತರಿಸಿದವು ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: Sudan Crisis: ಸುಡಾನ್ ಸಂಘರ್ಷಕ್ಕೆ 200 ಮಂದಿ ಬಲಿ, 1800 ಜನಕ್ಕೆ ಗಾಯ! ಅಂತರ್ಯುದ್ಧದಲ್ಲಿ ಸಿಲುಕಿ 31 ಕನ್ನಡಿಗರ ಪರದಾಟ!
ಸೌದಿ ರಾಷ್ಟ್ರದಿಂದಲೂ ಸ್ಥಳಾಂತರ
ಈ ಹಿಂದೆ ಫ್ರಾನ್ಸ್ ದೇಶದಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ನಾಗರಿಕರ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಇದಕ್ಕೂ ಮೊದಲು ಸೌದಿ ಅರೇಬಿಯಾ ದೇಶ ಹಿಂಸಾಚಾರ ಪೀಡಿತ ಸುಡಾನ್ನಿಂದ ತನ್ನ ಸ್ನೇಹ ರಾಷ್ಟ್ರಗಳ 66 ಮಂದಿ ಪ್ರಜೆಗಳನ್ನು ಸ್ಥಳಾಂತರ ಮಾಡಿತ್ತು. ಅದರಲ್ಲಿ ಭಾರತೀಯರೂ ಸೇರಿದ್ದರು. ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ರಕ್ಷಣೆ ಮಾಡುವಂತೆ ವಿನಂತಿಸಿದ್ದರು. ಇದೀಗ ಫ್ರಾನ್ಸ್ ಕೂಡ ಐದು ಮಂದಿ ಭಾರತೀಯ ನಾಗರಿಕರನ್ನು ರಕ್ಷಣೆ ಮಾಡಿದೆ ಎಂದು ತಿಳಿದು ಬಂದಿದೆ.
ಯುದ್ಧ ಪೀಡಿತ ಸುಡಾನ್ನಿಂದ ವಿವಿಧ ದೇಶಗಳ ನಾಗರಿಕರನ್ನು ರಕ್ಷಣೆ ಮಾಡಿರುವ ಬಗ್ಗೆ ಟ್ವೀಟ್ ಮಾಡಿರುವ ಸೌದಿ ಅರೇಬಿಯಾ ಸಚಿವಾಲಯ, ‘ 91 ಸೌದಿ ನಾಗರಿಕರು ಮತ್ತು ಈ ಕೆಳಗಿನ ರಾಷ್ಟ್ರೀಯತೆಗಳಾದ ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಭಾರತ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ಕೆನಡಾ, ಮತ್ತು ಬುರ್ಕಿನಾ ಫಾಸೊ ರಾಷ್ಟ್ರಗಳ ಸುಮಾರು 66 ಪ್ರಜೆಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: Sudan Clashes: ಸುಡಾನ್ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್!
ಭಾರತೀಯರ ರಕ್ಷಣೆಗೆ 2 ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನ
ಹಿಂಸಾಚಾರ ಪೀಡಿತ ಸುಡಾನ್ ರಾಷ್ಟ್ರದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಅಲ್ಲಿಂದ ಸ್ಥಳಾಂತರಿಸುವ ಯೋಜನೆಗಳ ಭಾಗವಾಗಿ ಭಾರತ ಸರ್ಕಾರವು ಈಗಾಗಲೇ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಎರಡು ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನಗಳನ್ನು ಮತ್ತು ಹಿಂಸಾಚಾರ ಪೀಡಿತ ಸುಡಾನ್ನ ಪ್ರಮುಖ ಬಂದರಿನಲ್ಲಿ ನೌಕಾಪಡೆಯ ಹಡಗನ್ನು ತಂದಿರಿಸಿದೆ. ಪ್ರಸ್ತುತ ಸುಡಾನ್ನಾದ್ಯಂತ ಇರುವ 3,000 ಕ್ಕೂ ಹೆಚ್ಚು ಭಾರತೀಯ ನಾಗರಿಕರ ಸುರಕ್ಷತೆಯ ಮೇಲೆ ಸರ್ಕಾರ ಕೇಂದ್ರೀಕರಿಸಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಸುಡಾನ್ ಕಳೆದ 11 ದಿನಗಳಿಂದ ದೇಶದ ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಮಾರಣಾಂತಿಕ ಕಾಳಗಕ್ಕೆ ಸಾಕ್ಷಿಯಾಗುತ್ತಿದ್ದು, ಈವರೆಗೆ ಸುಮಾರು 400 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ-ಜೈಶಂಕರ್ ಜಟಾಪಟಿ
ಕೆಲ ದಿನಗಳ ಹಿಂದೆ ಸುಡಾನ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿ, ನಿಮ್ಮ ಟ್ವೀಟ್ ನೋಡಿ ಗಾಬರಿಯಾಯಿತು. ಇದರಲ್ಲೂ ರಾಜಕೀಯ ಮಾಡ್ಬೇಡಿ ಎಂದಿದ್ದರು. ಇದಕ್ಕೆ ಕೌಂಟರ್ ಕೊಟ್ಟಿದ್ದ ಸಿದ್ದರಾಮಯ್ಯ, ನೀವು ಗಾಬರಿಗೊಳ್ಳೋದ್ರಲ್ಲೇ ಬ್ಯುಸಿಯಾಗಿದ್ರೆ ಪರವಾಗಿಲ್ಲ, ಆದರೆ ನಮ್ಮ ಜನರನ್ನು ರಕ್ಷಿಸಲು ಯಾರನ್ನಾದರೂ ಸಂಪರ್ಕ ಮಾಡಿಕೊಡಿ ಎಂದು ಕೌಂಟರ್ ಕೊಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ