ನವ ದೆಹಲಿ (ಆಗಸ್ಟ್ 25); ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿ ಸಿಕೊಳ್ಳುತ್ತಿದ್ದಂತೆ ಲಕ್ಷಾಂತರ ಜನ ಕಾಬೂಲ್ ನಗರವನ್ನು ತೊರೆಯಲು ಮುಂದಾಗಿದ್ದರು. ಅದರಲ್ಲೂ ಮುಖ್ಯವಾಗಿ ಮುಸ್ಲೀಮರಲ್ಲದ ಇತರೆ ಅಲ್ಪ ಸಂಖ್ಯಾತ ಸಮುದಾಯದ ಜನರಿಗೆ ಜೀವ ಭಯ ಉಂಟಾಗಿತ್ತು, ಕಾಬೂಲ್ ನಗರವನ್ನು ತೊರೆಯಲು ಜನ ಮನಸ್ಸು ಮಾಡಲು ಇದೂ ಒಂದು ಕಾರಣವಾಗಿತ್ತು. ಪರಿಣಾಮ ಭಾರತ ಸರ್ಕಾರ ವಿಶೇಷ ವಿಮಾನಗಳನ್ನು ಕಾಬೂಲ್ ನಗರಕ್ಕೆ ಕಳುಹಿಸುವ ಮೂಲಕ ಅನೇಕ ನಿರಾಶ್ರಿತರನ್ನು ರಕ್ಷಿಸಿ ಭಾರತಕ್ಕೆ ಕರೆ ತಂದಿತ್ತು. ಆದರೆ, ಅಫ್ಘನ್ನಿಂದ ಭಾರತಕ್ಕೆ ಆಗಮಿಸಿರುವ ನಿರಾಶ್ರಿತರಿಗೆ ಈವರೆಗೆ ನಿರಾಶ್ರಿತರ ಕಾರ್ಡ್ ನೀಡಿಲ್ಲ. ಇದರಿಂದ ಬೇಸತ್ತಿರುವ ನೂರಾರು ಅಫ್ಘಾನಿಸ್ತಾನದ ಪ್ರಜೆಗಳು ನಿರಾಶ್ರಿತರ ಕಾರ್ಡ್ಗಾಗಿ ಒತ್ತಾಯಿಸಿ ಬುಧವಾರ ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ಹೊರಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ನಿರಾಶ್ರಿತರ ಕಾರ್ಡ್ಗಾಗಿ ಅಫ್ಘಾನ್ ನಿರಾಶ್ರಿತರು ಕಳೆದ ಮೂರು ದಿನಗಳಿಂದ ಯುಎನ್ಎಚ್ಆರ್ಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನಿರಾಶ್ರಿತರ ಕಾರ್ಡುಗಳು ಸಿಗದ ಹಿನ್ನೆಲೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇನ್ನು ಮೌನವಾಗಿರಲು ಸಾಧ್ಯವಿಲ್ಲ, ನಮಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಉತ್ತರ ನೀಡಬೇಕು, ನಮಗೆ ನ್ಯಾಯ ಬೇಕು. ನಮಗೆ ಭವಿಷ್ಯ ಬೇಕು. ನಮ್ಮ ಭವಿಷ್ಯವನ್ನು ರೂಪಿಸಬೇಕಾದ ಕರ್ತವ್ಯ ವಿಶ್ವ ಸಂಸ್ಥೆಗೆ ಇದೆ" ಎಂದು ಪ್ರತಿಭಟನಾ ನಿರತರು ದೆಹಲಿಯಲ್ಲಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಭಟನಾಕಾರರೊಬ್ಬರು ಮಾಧ್ಯಮಗಳ ಎದುರು ತಮ್ಮ ನೋವನ್ನು ತೋಡಿಕೊಂಡಿದ್ದು, "ನಾವು ಅಫ್ಘಾನಿಸ್ತಾನದ ನಾಗರಿಕರಿಗೆ ನಿರಾಶ್ರಿತರ ಕಾರ್ಡುಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತೇವೆ. ನಾವು ಈವರೆಗೆ ಶೀಘ್ರವಾಗಿ ಅಫ್ಘಾನಿಸ್ತಾನಕ್ಕೆ ಹಿಂತಿರುಗುತ್ತೇವೆ ಎಂದೇ ಭಾವಿಸಿದ್ದೆವು. ಆದರೆ, ಅಲ್ಲಿನ ಪರಿಸ್ಥಿತಿ ಪೂರ್ತಿ ಹದಗೆಟ್ಟಿದೆ. ತಾಲಿಬಾನ್ ಪೂರ್ತಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಇದು ನಿಜಕ್ಕೂ ನಮ್ಮ ಭವಿಷ್ಯದ ಬಗೆಗಿನ ಪ್ರಶ್ನೆಯಾಗಿದೆ" ಎಂದು ತಿಳಿಸಿದ್ದಾರೆ.
"ವಿಶ್ವಸಂಸ್ಥೆಯು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಕಳೆದ ಮೂರು ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳು ಕಚೇರಿಯ ಗೇಟ್ಗಳಿಗೂ ಕೂಡ ಬಂದಿಲ್ಲ. ಏನನ್ನೂ ಉತ್ತರಿಸಿಲ್ಲ"
ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರ "ನಮ್ಮ ಭವಿಷ್ಯವು ಈಗ ಮಂಕಾಗಿದೆ, ನಮ್ಮ ಮಕ್ಕಳು ಕೂಡ ಓದಲು ಸಾಧ್ಯವಿಲ್ಲ, ಯುವಕರಿಗೆ ಉದ್ಯೋಗ ಕೂಡ ಸಿಗುವುದಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಕಳೆದ ವಾರ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತು. ಅಂದಿನಿಂದ ಅಫ್ಘಾನ್ ಪ್ರಜೆಗಳ ದಂಡೇ ಉತ್ತಮ ಭವಿಷ್ಯದ ಭರವಸೆಯಲ್ಲಿ ದೇಶವನ್ನು ತೊರೆಯುತ್ತಿದೆ. ಭಾರತಕ್ಕೆ ಬರುವ ಪ್ರತಿಯೊಬ್ಬ ಅಫ್ಘಾನ್ ಪ್ರಜೆಯೂ ಇ-ವಿಸಾ ಹೊಂದಿರಬೇಕು ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಬುಧವಾರ ಸೂಚನೆ ಹೊರಡಿಸಿದೆ. ಇ-ವಿಸಾ ಆರು ತಿಂಗಳ ಅವಧಿ ಹೊಂದಿರುತ್ತದೆ. ಯಾವುದೇ ಧರ್ಮದವರು ಇ-ವಿಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ