ಮುಂಬೈ (ನವೆಂಬರ್ 27); ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಕಚೇರಿಯನ್ನು ಕಾನೂನು ಬಾಹೀರವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದ ಗ್ರೇಟರ್ ಮುಂಬೈ ಮಹಾನಗರ ಪಾಲಿಕೆ ಸೆಪ್ಟೆಂಬರ್ 09 ರಂದು ಅವರ ಕಚೇರಿಯನ್ನು ಧ್ವಂಸಗೊಳಿಸಿತ್ತು. ಈ ಸುದ್ದಿ ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಮಹಾ ನಗರ ಪಾಲಿಕೆಯ ಈ ಕೃತ್ಯವನ್ನು ಖಂಡಿಸಿ ನಟಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, "ಮುಂಬೈ ಪಾಲಿಕೆಯು ನಟಿ ಕಂಗನಾ ರಾಣಾವತ್ ಅವರ ಕಚೇರಿಯ ಒಂದು ಭಾಗವನ್ನು ನೆಲಸಮಗೊಳಿಸಿರುವುದು ಕಾನೂನಿನ ದುರುಪಯೋಗವಲ್ಲದೆ ಬೇರೇನಲ್ಲ" ಎಂದು ಚೀಮಾರಿಹಾಕಿದೆ. ಅಲ್ಲದೆ, ಅವರ ಬಂಗಲೆ ಕೆಡವಲು ಪಾಲಿಕೆ ನೀಡಿದ್ದ ನೋಟಿಸ್ನ್ನು ಅದು ರದ್ದುಮಾಡಿದ್ದು, ಕೆಡವಿದ ಕಟ್ಟಡದ ಮೌಲ್ಯ ಮಾಪನ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.
ಸೆಪ್ಟೆಂಬರ್ 9 ರಂದು ಮುಂಬೈನ ಪಾಲಿಕೆ ಕಂಗನಾ ಅವರ ಒಡೆತನದ ಬಂಗಲೆಯಲ್ಲಿರುವ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿತ್ತು. ಮಹಾರಾಷ್ಟ್ರ ಸರ್ಕಾರ ಮತ್ತು ಆಡಳಿತಾರೂಡ ಶಿವಸೇನೆ ವಿರುದ್ಧ ಅವರು ಮಾಡಿದ ಟೀಕೆಗಳ ಪರಿಣಾಮವಾಗಿ ಪಾಲಿಕೆಯು ತನ್ನ ವಿರುದ್ಧದ ಕ್ರಮ ಕೈಗೊಂಡಿದೆ ಎಂದು ನಟಿ ಆರೋಪಿಸಿದ್ದರು.
ಇದನ್ನೂ ಓದಿ : ರಾಯ್ಟರ್ಸ್ ವರ್ಷದ ಪೋಟೋ ಪ್ರಶಸ್ತಿ; ದೆಹಲಿ ಕೋಮು ಹಿಂಸಾಚಾರದ ಚಿತ್ರ ಆಯ್ಕೆ!
"ಪಾಲಿಕೆಯು ನಾಗರಿಕರ ಹಕ್ಕುಗಳ ವಿರುದ್ಧ ನಡೆಯುತ್ತಿದೆ. ಇದು ಕಾನೂನಿನ ದುರುಪಯೋಗವಲ್ಲದೆ ಬೇರೆನಲ್ಲ" ಎಂದು ನ್ಯಾಯಮೂರ್ತಿಗಳಾದ ಎಸ್.ಜೆ. ಕಥಾವಾಲಾ ಮತ್ತು ಆರ್.ಐ.ಛಗ್ಲಾ ಅವರ ವಿಭಾಗೀಯ ಪೀಠ ಹೇಳಿದೆ. ಯಾವುದೇ ನಾಗರಿಕರ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ತೋರಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ