ಕೆನಡಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು (Mahatma Gandhi Statue) ವಿರೂಪಗೊಳಿಸಿದ ಘಟನೆ ಕೆನಡಾದಲ್ಲಿ ನಡೆದಿದೆ. ಖಲಿಸ್ತಾನಿ ಬೆಂಬಲಿಗರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದ್ದ, ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿರೋದು ಮಾತ್ರವಲ್ಲದೇ, ಖಲಿಸ್ತಾನಿ ಪರ (Khalistan Supporters) ಮತ್ತು ಭಾರತ ವಿರೋಧಿ ಬರಹಗಳನ್ನೂ ಬರೆಯಲಾಗಿದೆ.
ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್ ನಗರದ ಸಿಟಿ ಹಾಲ್ ಬಳಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, 2012ರಿಂದ ಸಿಟಿ ಹಾಲ್ ಬಳಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಮಹಾತ್ಮ ಗಾಂಧಿಯವರ ಈ ಪ್ರತಿಮೆ ಆರು ಅಡಿ ಎತ್ತರವಿದ್ದು, ಇದನ್ನು ಕಂಚಿನಿಂದ ತಯಾರಿಸಲಾಗಿದೆ. ಆಗ ಭಾರತ ಸರ್ಕಾರವು ಈ ಪ್ರತಿಮೆಯನ್ನು ಕೆನಡಾಕ್ಕೆ ಉಡುಗೊರೆಯಾಗಿ ನೀಡಿತ್ತು.
ದುಷ್ಕೃತ್ಯ ಇದೇ ಮೊದಲಲ್ಲ
ಕಳೆದ ಫೆಬ್ರವರಿ ತಿಂಗಳಲ್ಲಿ ಗ್ರೇಟರ್ ಟೊರೊಂಟೊ ಏರಿಯಾ (ಜಿಟಿಎ) ನಲ್ಲಿರುವ ಹಿಂದೂ ದೇವಾಲಯವನ್ನು ಸಹ ಇದೇ ರೀತಿಯ ಬಣ್ಣಗಳನ್ನು ಎರಚಿ ವಿರೂಪಗೊಳಿಸಲಾಗಿತ್ತು. ದೇವಾಲಯದ ಗೋಡೆಯ ಮೇಲೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಕಿಡಿಗೇಡಿಗಳು ಕೂಗಿದ್ದರು.
ಘಟನೆ ಸಂಬಂಧ ಹ್ಯಾಮಿಲ್ಟನ್ ಪೊಲೀಸರು ನಿನ್ನೆ ಮಧ್ಯಾಹ್ನ ಈ ಸಂಬಂಧ ದೂರು ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಕೃತ್ಯವಾಗಿದ್ದು, ಈ ಘಟನೆಯ ನಂತರ ಸ್ಥಳೀಯ ಪೊಲೀಸರು ದುಷ್ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಸದ್ಯ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ವಚ್ಛಗೊಳಿಸಲಾಗಿದೆ. ಆವರಣದ ತುಂಬೆಲ್ಲ ಹರಡಿದ್ದ ಬಣ್ಣವನ್ನು ಸಹ ಸ್ವಚ್ಛಗೊಳಿಸಲಾಗಿದೆ.
ಈ ಹಿಂದೆಯೂ ವಿಕೃತಿ ಮೆರೆದಿದ್ರು
ಇನ್ನು ಕಳೆದ ಜನವರಿ 30ರಂದು ಬ್ರಾಂಪ್ಟನ್ನ ಗೌರಿ ಶಂಕರ ದೇವಸ್ಥಾನದ ಮೇಲೂ ದಾಳಿ ನಡೆಸಲಾಗಿತ್ತು. ಅದಕ್ಕೂ ಮುನ್ನ ಅದೇ ವರ್ಷ ಜುಲೈ ತಿಂಗಳಲ್ಲಿ ರಿಚ್ಮಂಡ್ ಹಿಲ್ನಲ್ಲಿರುವ ವಿಷ್ಣು ದೇವಸ್ಥಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಇಂತಹ ಹಲವು ಭಾರತ ವಿರೋಧಿ ಘಟನೆಗಳಿಗೆ ಕೆನಡಾ ಸಾಕ್ಷಿಯಾಗಿದ್ದರೂ ಈ ದುಷ್ಕೃತ್ಯಗಳ ಹಿಂದೆ ಖಲಿಸ್ತಾನ್ ಬೆಂಬಲಿಗರ ಕೈವಾಡವಿದೆ.
ಅಚ್ಚರಿಯ ವಿಷಯ ಅಂದ್ರೆ ಕೆನಡಾದಲ್ಲಿ ಅಷ್ಟೆಲ್ಲ ದುಷ್ಕೃತ್ಯಗಳು ಸಂಭವಿಸಿದರೂ ಈ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಇತ್ತೀಚೆಗೆ ಕೆನಡಾ ಪ್ರಧಾನಿ ಭಾರತಕ್ಕೆ ಬಂದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ವಿರೋಧಿ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಸದ್ಯ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ರಾಜಕಾರಣದ ಮಹಾನ್ ನಾಯಕರೊಬ್ಬರನ್ನು, ವಿಶ್ವದಾದ್ಯಂತ ಮನ್ನಣೆ ಪಡೆದಿರುವ ಹಿರಿಯ ನಾಯಕರೊಬ್ಬರ ಪ್ರತಿಮೆಗೆ ಈ ರೀತಿ ದುಷ್ಕೃತ್ಯ ಎಸಗೋದು ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಸಮಾಧಾನಕ್ಕೆ ಕಾರಣವಾಗಿದ್ದು, ಖಲಿಸ್ತಾನ ಪರ ಬೆಂಬಲಿಗರು ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಮಾಡಿರುವ ಅಪಚಾರದ ವಿರುದ್ಧ ಕೆನಡಾ ಪೊಲೀಸ್ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ