ನವ ದೆಹಲಿ: ಬಸ್ ಹಿಡಿದೋ, ಆಟೋ ಹಿಡಿದೋ ಎಲ್ಲೋ ಹೋಗ್ಬೇಕಿದ್ದವರು ದಾರಿ ತಪ್ಪಿ ಇನ್ನೆಲ್ಲೋ ಹೋಗೋದನ್ನು ನೋಡಿದ್ದೇವೆ. ನಡ್ಕೊಂಡು ಹೋಗೋವಾಗಲೂ ದಾರಿ ತಪ್ಪಿ ಇನ್ಯಾವುದೋ ಜಾಗಕ್ಕೆ ಹೋಗಿ ತಲೆ ಮೇಲೆ ಕೈ ಇಟ್ಟವರನ್ನೂ ನೋಡಿದ್ದೇವೆ. ಆದರೆ ವಿಮಾನದಲ್ಲೂ ಈ ತರ ಆಗುತ್ತೆ ಅಂದ್ರೆ ನೀವು ನಂಬಲೇಬೇಕು. ಯಾಕಂದ್ರೆ ಇಂಡಿಗೋ ವಿಮಾನದಲ್ಲಿ (Indigo Airlines) ಬಿಹಾರಕ್ಕೆ (Bihar) ಹೋಗಬೇಕಿದ್ದ ಪ್ರಯಾಣಿಕನೊಬ್ಬ ರಾಜಸ್ಥಾನಕ್ಕೆ (Rajasthan) ಬಂದಿಳಿದ ಯಡವಟ್ಟಿನ ಘಟನೆ ನಡೆದು ಹೋಗಿದೆ.
ಕಳೆದ ಜನವರಿ 30 ರಂದು ಈ ಘಟನೆ ನಡೆದಿದ್ದು ಅಫ್ಸಾರ್ ಹುಸೇನ್ ಎಂಬ ಪ್ರಯಾಣಿಕ ಇಂಡಿಗೋ ವಿಮಾನ 6E-214ನಲ್ಲಿ ಪಟನಾಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಜನವರಿ 30 ರಂದು ನಿಗದಿಯಾಗಿದ್ದ ವಿಮಾನ ಏರಲು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಅವರು ಬಿಹಾರಕ್ಕೆ ಹೋಗಬೇಕಿದ್ದ ವಿಮಾನ ಏರುವ ಬದಲು ಪ್ರಮಾದವಶಾತ್ ಉದಯಪುರಕ್ಕೆ ತೆರಳುವ ಇಂಡಿಗೋದ 6E-319 ವಿಮಾನ ಏರಿದ್ದರು.
ಇದನ್ನೂ ಓದಿ: Bengaluru Airport Terminal 2: ಜ.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ, ಮೊದಲ ವಿಮಾನ ಎಲ್ಲಿಗೆ?
ಅದೇ ದಿನ ವಾಪಸ್ ಕರೆ ತಂದ ಸಂಸ್ಥೆ
ಉದಯಪುರ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ನಂತರವಷ್ಟೇ ಪ್ರಯಾಣಿಕ ಅಫ್ಸಾರ್ ಹುಸೇನ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಕೂಡಲೇ ಉದಯಪುರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದ ಅವರು ಈ ವಿಚಾರದ ಬಗ್ಗೆ ವಿಮಾನಯಾನ ಸಂಸ್ಥೆಯನ್ನು ಎಚ್ಚರಿಸಿದ್ದಾರೆ. ಕೊನೆಗೆ ಇಂಡಿಗೋ ಸಂಸ್ಥೆಯು ಅದೇ ದಿನ ಅವರನ್ನು ದಿಲ್ಲಿಗೆ ವಾಪಸ್ ಕರೆ ತಂದು ಮರುದಿನ ಅಂದರೆ ಜನವರಿ 31ರಂದು ಪಟನಾಕ್ಕೆ ಕರೆದೊಯ್ದಿದೆ.
ತನಿಖೆಗೆ ಡಿಜಿಸಿಎ ಅಧಿಕಾರಿಗಳಿಂದ ಆದೇಶ
ಪಟನಾಕ್ಕೆ ತೆರಳಬೇಕಿದ್ದ ವಿಮಾನ ಏರುವ ಬದಲು ಅಲ್ಲಿಂದ ಸುಮಾರು 1400 ಕಿಮೀ ದೂರದಲ್ಲಿ ಇರುವ ಉದಯಪುರಕ್ಕೆ ಹೋಗುವ ಬೇರೆ ವಿಮಾನದಲ್ಲಿ ಪ್ರಯಾಣಿಕನನ್ನು ಹತ್ತಿಸಿಕೊಂಡ ಘಟನೆಯ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಈ ಘಟನೆಯ ಬಗ್ಗೆ ನಾವು ವರದಿ ಕೇಳಿದ್ದೇವೆ. ವಿಮಾನಯಾನ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಸಿಎ ತನಿಖೆಯ ಬಳಿಕ ಸತ್ಯಾಂಶ ಹೊರಕ್ಕೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು, ಪ್ರಯಾಣಿಕನ ಬೋರ್ಡಿಂಗ್ ಪಾಸ್ ಅನ್ನು ಸೂಕ್ಷ್ಮವಾಗಿ ಗಮನಿಸದೇ ಇದ್ದದ್ದು ಯಾಕೆ? ಜೊತೆಗೆ ಬೋರ್ಡಿಂಗ್ಗೂ ಮುನ್ನ ಎರಡು ಹಂತಗಳಲ್ಲಿ ಬೋರ್ಡಿಂಗ್ ಪಾಸ್ಗಳನ್ನು ಪರಿಶೀಲಿಸಬೇಕು ಎಂಬ ನಿಯಮ ಇರುವಾಗ ಅವರು ತಪ್ಪಾದ ವಿಮಾನಕ್ಕೆ ಏರಿದ್ದು ಹೇಗೆ ಎಂಬುದನ್ನು ಡಿಜಿಸಿಎ ತನಿಖೆ ಬಳಿಕ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೊಂದೆಡೆ ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಇಂಡಿಗೋ ಏರ್ಲೈನ್ಸ್ನ ಅಧಿಕಾರಿಗಳು, 6E 319 ದಿಲ್ಲಿ- ಉದಯಪುರ ವಿಮಾನದಲ್ಲಿ ಪ್ರಯಾಣಿಕನನ್ನು ಕರೆದೊಯ್ದ ಘಟನೆ ಬಗ್ಗೆ ನಮಗೆ ತಿಳಿದಿದೆ. ಈ ಘಟನೆಯ ಕುರಿತ ಮಾಹಿತಿಗಾಗಿ ನಾವು ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಪ್ರಯಾಣಿಕನಿಗೆ ಉಂಟಾದ ಅನನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಇಂಡಿಗೋ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ