ಹೈದರಾಬಾದ್: ಅಪ್ಪ (Father) ಕುಡಿದು ಬಂದು ಅಮ್ಮನನ್ನೂ (Mother), ನನ್ನನ್ನೂ ಪ್ರತಿದಿನವೂ ಹೊಡೆಯುತ್ತಾರೆ. ಪ್ರತಿದಿನ ಕುಡಿದು ಮನೆಗೆ ಬಂದು ಹೊಡೆಯುತ್ತಾರೆ ಎಂದು 4 ನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ತನ್ನ ತಂದೆ ವಿರುದ್ಧವೇ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ ಆಶ್ಚರ್ಯಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಪೊಲೀಸ್ ಠಾಣೆಗೆ ದಾವಿಸಿದ್ದು, ಕಣ್ಣೀರಿಡುತ್ತಾ ಪ್ರತಿದಿನ ತನ್ನ ತಂದೆ ನೀಡುತ್ತಿರುವ ಕಿರುಕುಳದ (Assult) ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.
ಪ್ರತಿದಿನ ಕುಡಿದು ಬಂದು ಹಲ್ಲೆ
ಕಾಮರೆಡ್ಡಿ ಜಿಲ್ಲೆಯ ಬಿರ್ಕೂ ರಾಮಮಂಡಲ ಕೇಂದ್ರದ ಲತೀಫ್ ಮತ್ತು ಗೌಶ್ಯ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಅತ್ತೆಯ ಮನೆಗೆ ಕಳುಹಿಸಲಾಗಿದೆ. ಕಿರಿಯ ಮಗಳು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕೂಲಿ ಕೆಲಸ ಮಾಡುವ ಲತೀಫ್ ಪ್ರತಿ ದಿನ ಕುಡಿದು ಬಂದು ತನ್ನ ಹೆಂಡತಿ ಮತ್ತು ಪುಟ್ಟ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಪರಿಣಾಮ ಫಾತಿಮಾ ಎಂಬ ಬಾಲಕಿ ತನ್ನ ತಂದೆ ಲತೀಫ್ ವಿರುದ್ಧ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ: Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!
ಚಿತ್ರಹಿಂದೆ ನೀಡುತ್ತಿದ್ದಾರೆಂದು ದೂರು
ಪೊಲೀಸ್ ಠಾಣೆಗೆ ಬಂದ ಬಾಲಕಿ ತಂದೆ ಸದಾ ಕುಡಿತದ ಅಮಲಿನಲ್ಲಿರುತ್ತಾರೆ. ಅವರು ನನ್ನ ತಾಯಿ ಮತ್ತು ನನಗೆ ಪ್ರತಿದಿನ ಚಿತ್ರಹಿಂಸೆ ಕೊಡುತ್ತಾರೆಂದು ಹೆಡ್ ಕಾನ್ಸ್ಟೇಬಲ್ ನಂದಾ ಮುಂದೆ ಹೇಳಿಕೊಂಡಿದ್ದಾಳೆ.
ಲತೀಫ್ಗೆ ಪೊಲೀಸ್ ಎಚ್ಚರಿಕೆ
ಬಾಲಕಿ ಮಾತಿಗೆ ತಕ್ಷಣ ಸ್ಪಂದಿಸಿದ ಪೊಲೀಸರು ಲತೀಫ್ನನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ಮಾಡಿದ್ದಾರೆ. ಇನ್ಮುಂದೆ ಮನೆಯಲ್ಲಿ ಸೌಹಾರ್ದತೆಯಿಂದ ಇರಬೇಕು, ಇಲ್ಲವಾದಲ್ಲಿ ಜೈಲಿಗೆ ಹೋಗಬೇಕಾಗುತ್ತದೆ ಎಂದು ಲತೀಫ್ಗೆ ಛೀಮಾರಿ ಹಾಕಿ ಕಳುಹಿಸಿದ್ದಾರೆ.
ಹೊಡೆತ ತಿನ್ನದ ದಿನಗಳಿಲ್ಲ
ಸದಾ ಕುಡಿದ ಮತ್ತಿನಲ್ಲಿದ್ದ ತಂದೆ ಯಾವಾಗ ಮನೆಗೆ ಬರುತ್ತಾರೋ ಗೊತ್ತಿಲ್ಲ ಎಂದು ಒಂಬತ್ತು ವರ್ಷದ ಫಾತಿಮಾ ಪೊಲೀಸರಿಗೆ ತಿಳಿಸಿದ್ದಾರೆ. ಕೆಲವೊಮ್ಮೆ ಮಧ್ಯರಾತ್ರಿ ಎರಡು ಗಂಟೆಗೆ ಮನೆಗೆ ಬರುತ್ತಾರೆ. ನನಗೆ ಮತ್ತು ನಾನು ಮತ್ತು ತಾಯಿ ಹೊಡೆತ ತಿನ್ನದಿರುವ ದಿನಗಳಿಲ್ಲ. ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಬಾಲಕಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.
100ಕ್ಕೆ ಡಯಲ್ ಮಾಡುವಂತೆ ಹೇಳಿದ ಪೊಲೀಸ್
ಠಾಣೆಯಲ್ಲಿ ಲತೀಫ್ಗೆ ಬುದ್ದಿ ಹೇಳಿರುವ ಪೊಲೀಸರು ಇನ್ಮುಂದೆ ಮನೆಯಲ್ಲಿ ಗಲಾಟೆ ಮಾಡದಂತೆ ಬುದ್ದಿ ಹೇಳಿದ್ದಾರೆ. ಇನ್ನು ಬಾಲಕಿಗೆ ಇನ್ಮುಂದೆ ನಿಮ್ಮ ತಂದೆ ಹೊಡೆಯುವುದನ್ನು ಮುಂದುವರಿಸಿದರೆ 100 ನಂಬರ್ಗೆ ಕರೆ ಮಾಡು, ನಾವು ಬರುತ್ತೇವೆ ಎಂದು ದೈರ್ಯ ತುಂಬಿ ಕಳುಹಿಸಿದ್ದಾರೆ.
ಇಷ್ಟ ಪಟ್ಟ ಬಟ್ಟೆ ಕೊಡಲಿಲ್ಲ ಎಂದು ಮಲತಾಯಿ ಮೇಲೆ ದೂರು
ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನ ಮಲತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ. ತನ್ನ ಮಲತಾಯಿ ತನಗೆ ಇಷ್ಟವಿರುವ ಬಟ್ಟೆಯನ್ನು ಹಾಕಿಕೊಳ್ಳಲು ಬಿಡುತ್ತಿಲ್ಲ, ಅಲ್ಲದೆ ನನ್ನ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಹೋಗುವುದಕ್ಕೂ ಬಿಡುತ್ತಿಲ್ಲ. ಪಾರ್ಟಿಗೆ ಹೋಗುತ್ತೇನೆ ಎಂದು ಹೇಳಿದ್ದಕ್ಕೆ ನನಗೆ ಹೊಡೆದಿದ್ದಾಳೆ ಎಂದು ಪೊಲೀಸರ ಮುಂದೆ ಬರೀ ಟವಲ್ ಸುತ್ತಿಕೊಂಡೇ ಬಂದಿದ್ದ ಬಾಲಕ ತನ್ನ ಅಳಲನ್ನು ತೋಡಿಕೊಂಡಿದ್ದ.
ಬಾಲಕನ ದೂರು ಆಲಿಸಿದ ನಂತರ ಪೊಲೀಸರು ಆ ತಾಯಿಯನ್ನೂ ಕರೆಯಿಸಿ, ಅವರಿಗೆ ಸೂಕ್ತವಾದ ಸಲಹೆ ನೀಡಿ, ಸಾಮರಸ್ಯದಿಂದ ಸಂಬಂಧವನ್ನು ಕಾಪಾಡಿಕೊಳ್ಳಲು ಹೇಳಿದ್ದಾರೆ. ಬಾಲಕ ದಿನೇಶ್ ಎಂಬಾತನ ತಾಯಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಆತನ ತಂದೆ ಎರಡನೇ ವಿವಾಹ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇನ್ನು ಮತ್ತೆ ಏನಾದರೂ ತೊಂದರೆ ಕೊಟ್ಟರೆ ನಮ್ಮನ್ನು ಬಂದು ಕಾಣುವಂತೆ ಬಾಲಕನಿಗೆ ಪೊಲೀಸರು ದೈರ್ಯತುಂಬಿ ಕಳುಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ