ಇತ್ತೀಚೆಗೆ ಪರಿಸರ ಮಾಲಿನ್ಯ (Environmental Pollution) ಹೆಚ್ಚಾಗುತ್ತಿದೆ. ಇದರಲ್ಲೂ ವಾಯು ಮಾಲಿನ್ಯ ಉಂಟುಮಾಡುವ ವಾಹನಗಳು ರಸ್ತೆಯಲ್ಲಿ ಹೆಚ್ಚಾಗಿದೆ ಅಂತಾನೇ ಹೇಳ್ಬಹುದು.ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central Government) ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಸರ್ಕಾರಿ ಬಸ್ಸುಗಳು (Govt Busses), ಜೀಪುಗಳು ಸೇರಿದಂತೆ 15 ವರ್ಷಗಳನ್ನು ಪೂರೈಸಿರುವ ಯಾವುದೇ ವಾಹನಗಳಿಗೆ ಏಪ್ರಿಲ್ 1 ರಿಂದ ಮುಕ್ತಿ ಸಿಗಲಿದೆ ಎಂದು ಹೇಳಿದೆ. ಇದರಲ್ಲೂ 15 ವರ್ಷ ಪೂರೈಸಿದ್ದರೂ ಹೊಸ ರಿಜಿಸ್ಟ್ರೇಷನ್ ಆಗಿದ್ದರೂ ಯಾವುದೇ ಮುಲಾಜಿಲ್ಲದೇ ರದ್ದಾಗುವುದು ಎಂದು ಸರ್ಕಾರ ಘೋಷಿಸಿದೆ. ಇದಲ್ಲದೆ ಕರ್ನಾಟಕದ ಖಾಸಗಿ ಮತ್ತು ವಾಣಿಜ್ಯ ಬಳಕೆಯ 15 ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಈ ನಿಯಮಕ್ಕೆ ಒಳಪಡಿಸುವ ಬದಲು ಮಾಲೀಕರ ಆಯ್ಕೆಗೆ ಬಿಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಹೌದು, ಕೇಂದ್ರ ಮೋಟಾರು ನಿಯಮಗಳು 2023ರ ಹೊಸ ನಿಯಮ ಜಾರಿ ಬಂದಿದ್ದು, ಈ ಮೂಲಕ ವಿಷಕಾರಿ ಹೊಗೆಯನ್ನು ಹೊರಬಿಟ್ಟು ವಾಯು ಮಾಲಿನ್ಯವನ್ನು ಉಂಟುಮಾಡುವ ವಾಹನಗಳನ್ನು ಮತ್ತು 15 ವರ್ಷ ಪೂರೈಸಿರುವ ವಾಹನಗಳು ಇನ್ಮುಂದೆ ರಸ್ತೆಗಿಳಿಯುವಂತಿಲ್ಲ. ಈ ನಿಯಮ ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಹೊಸ ನವೀಕರಣಕ್ಕೆ ಸರ್ಕಾರದಿಂದ ನಿರ್ಬಂಧ
ಕೇಂದ್ರ ಮೋಟಾರು ವಾಹನಗಳ ನಿಯಮ 2023 ಇದೀಗ ಜಾರಿಗೆ ತರಲಾಗಿದೆ. ಗುಜರಿ ನೀತಿಯ ಭಾಗವಾಗಿ ಈ ನಿಯಮವನ್ನು ತಿದ್ದುಪಡಿಸಿರುವ ಪ್ರಕಾರ ಇದೇ ಏಪ್ರಿಲ್ ಒಂದರಿಂದ ದೇಶದೆಲ್ಲೆಡೆ ಜಾರಿಯಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆದೇಶ ಹೊರಡಿಸಿದೆ. ಇದಲ್ಲದೆ ಈ ನಿಯಮದ ಅನುಸಾರವಾಗಿ 15 ವರ್ಷ ಪೂರೈಸಿರುವ ಸರ್ಕಾರಿ ವಾಹನಗಳ ಹೊಸ ನವೀಕರಣ ನೋಂದಣಿಗೆ 2022ರ ನವೆಂಬರ್ 24 ಕ್ಕೆ ಕೇಂದ್ರ ಸರ್ಕಾರ ನಿರ್ಬಂಧವನ್ನುವಿಧಿಸಿದೆ.
ಕರ್ನಾಟಕದಲ್ಲಿ ಎಷ್ಟಿದೆ?
ಈ ನಿಯಮದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ 9 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿಯುವಂತಿಲ್ಲ. ಇದ್ರಲ್ಲೂ ಕೇವಲ ಕರ್ನಾಟಕದಲ್ಲೇ 40 ರಿಂದ 50 ಸಾವಿರಕ್ಕೂ ಹೆಚ್ಚು ಸರ್ಕಾರಿ ವಾಹನಗಳಿವೆ. ಇನ್ನು ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ಉಂಟು ಮಾಡದಂತಹ ವಾಹನಗಳನ್ನು ಅಂದರೆ ಎಲೆಕ್ಟ್ರಿಕ್ ಮಾದರಿಯ ವಾಹನಗಳನ್ನು ಖರೀದಿಸುವಂತೆ ಸಲಹೆ ನೀಡಲಾಗಿದೆ.
ಇನ್ಮುಂದೆ ಗುಜರಿ ಬಸ್ಗಳು ರಸ್ತೆಗೆ ಬರಲ್ಲ
ರಾಜ್ಯದಲ್ಲಿ ಹಲವಾರು ಹಳೇ ಬಸ್ಸುಗಳಿವೆ. ಅದ್ರಲ್ಲೂ ರಾಜ್ಯ ಕೆಎಸ್ಆರ್ಟಿಸಿ, ವಾಯುವ್ಯ, ಈಶಾನ್ಯ ಸಾರಿಗೆ ಮತ್ತು ಬಿಎಂಟಿಸಿಯ ಹಳೇ ಬಸ್ಸುಗಳೇ ಈಗಲೂ ರಸ್ತೆಗಳಲ್ಲಿ ಓಡಾಟುತ್ತಿವೆ. ಕೆಲವೊಂದು ಬಾರಿ ಈ ಹಳೇ ಬಸ್ಸುಗಳು ದಾರಿ ಮಧ್ಯೆ ಎಷ್ಟೋ ಬಾರಿ ಕೆಟ್ಟು ನಿಲ್ಲುತ್ತದೆ. ದಾರಿ ನಡುವಲ್ಲೇ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿದ ಘಟನೆಗಳು ಎಷ್ಟೋ ಇದೆ. ಇನ್ನು ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಹಳೆಯದಾದ ಬಸ್ಸುಗಳಿವೆ ಮತ್ತು ಬಿಎಂಟಿಸಿ ವ್ಯಾಪ್ತಿಯಲ್ಲೂ ಸಾವಿರಾರು ಬಸ್ಸುಗಳಿವೆ ಎಂದು ಹೇಳಲಾಗಿದೆ. ಆದರೆ ಇನ್ಮುಂದೆ ಈ ಸಮಸ್ಯೆಗಳೆಲ್ಲಾ ಯಾವುದೂ ಇರಲ್ಲ. ಏಪ್ರಿಲ್ 1 ರಿಂದ ಹೊಸ ಬಸ್ಗಳು ರಸ್ತೆಗೆ ಇಳಿಯುತ್ತವೆ.
ಯಾವ ವಾಹನಗಳಿಗೆ ವಿನಾಯಿತಿ ಇದೆ?
ಯಾವೆಲ್ಲಾ ವಾಹನಗಳು ಗುಜರಿ ನೀತಿಗೆ ಅನ್ವಯಿಸುತ್ತದೆ?
ಇನ್ನು ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಆಯಾ ರಾಜ್ಯಗಳಿಗೆ ಸಂಭಂಧಿಸಿದೆ. 15 ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ರಾಜ್ಯ ಸರ್ಕಾರ 2022ರ ಡಿಸೆಂಬರ್ 30 ರಂದು ಆದೇಶವನ್ನು ಹೊರಡಿಸಿತ್ತು. ಇದರ ಭಾಗವಾಗಿ ಮೊದಲ ಹಂತದಲ್ಲಿ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಮಾಲೀಕರಿಗೆ ಬಿಟ್ಟುಕೊಡಲಾಗಿದೆ. ಅವರ ಇಚ್ಚೆಗೆ ಅನುಸಾರವಾಗಿ ವಾಹನಗಳನ್ನು ಗುಜರಿ ನೀತಿಗೆ ಪರಿಗಣಿಸಬಹುದು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ನನಗೂ ಅಲ್ಲ ಕಾಂಗ್ರೆಸ್ಗೂ ಅಲ್ಲ, ಭಾರತದ ಜನರಿಗಾಗಿ: ರಾಹುಲ್ ಗಾಂಧಿ
ಜೊತೆಗೆ ಇದಕ್ಕಾಗಿ ಮಾಲೀಕರಿಗೆ ಠೇವಣಿ ಪ್ರಮಾಣಪತ್ರ (ಸಿಓಡಿ) ಯನ್ನು ನೀಡಲಾಗುತ್ತದೆ. ಈ ಮೂಲಕ ಹೊಸ ವಾಹನವನ್ನು ಖರೀದಿಸುವಾಗ ಸಾರಿಗೇತರ ವಾಹನಕ್ಕೆ ಶೇ.25 ರಷ್ಟು ಮತ್ತು ಸಾರಿಕೆ ವಲಯದ ವಾಹನಕ್ಕೆ ಶೇ. 15 ರಷ್ಟು ವಿನಾಯಿತಿ ಇರಲಿದೆ. ಇನ್ನು ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಮತ್ತು ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ