ಅಸ್ಸಾಂ(ಜು.12): ಖಾಸಗಿ ಆಸ್ಪತ್ರೆಗೆ ಖರ್ಚು ವೆಚ್ಚ ಭರಿಸಲಾಗದೆ ಬಹಳಷ್ಟು ಜನರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ (Govt Hospital) ಹೋಗುತ್ತಾರೆ. ಆದರೆವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು (Doctors), ಸಿಬ್ಬಂದಿ ಕೊರತೆ ಅಥವಾ ಅಲ್ಲಿದ್ದವರ ನಿರ್ಲಕ್ಷ್ಯದಿಂದಾಗಿ ಬಹಳಷ್ಟು ಸಲ ಅಚಾತುರ್ಯಗಳಾಗುತ್ತವೆ. ಇದೇ ರೀತಿಯ ಘಟನೆಯೊಂದು ಅಸ್ಸಾಂನಲ್ಲಿ ವರದಿಯಾಗಿದೆ. ಅಸ್ಸಾಂ (Assam) ರಾಜ್ಯದ ದಿಮಾ ಹಸಾವೊ ಜಿಲ್ಲೆಯಲ್ಲಿ ಬೀಗ ಹಾಕಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ಹೊರಗೆ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವಿನಿಂದ ರಕ್ತಸ್ರಾವ (Bleeding) ಆರಂಭವಾದ ಹಿನ್ನೆಲೆಯಲ್ಲಿ ವೈದ್ಯರು (Doctor) ಸೇರಿದಂತೆ ಒಂಬತ್ತು ಆರೋಗ್ಯ ಕಾರ್ಯಕರ್ತರನ್ನು ಅಮಾನತುಗೊಳಿಸಲಾಗಿದೆ.
ಭಾನುವಾರ ನಡೆದ ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು ವೈರಲ್ ಆಗಿದ್ದು, ನೌಕರರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಮಾಡಿದೆ. ನಂತರ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಖೆಪ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಈ ಘಟನೆ
ಜಿಲ್ಲಾ ಕೇಂದ್ರ ಕಛೇರಿ ಹಾಫ್ಲಾಂಗ್ನಿಂದ ಸುಮಾರು 85 ಕಿಮೀ ದೂರದಲ್ಲಿರುವ ದಿಮಾ ಹಸಾವೊದ ಮೈಬಾಂಗ್ ಉಪವಿಭಾಗದಲ್ಲಿರುವ ಖೆಪ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಈ ಘಟನೆ ನಡೆದಿದೆ.
ನೆಲದ ಮೇಲೆ ನರಳಾಡಿದ ಮಹಿಳೆ
ಬೀಗ ಹಾಕಲಾಗಿರುವ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ನೆಲದ ಮೇಲೆ ಮಹಿಳೆ ರಕ್ತಸ್ರಾವವಾಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಸಮೀಪದ ಗ್ರಾಮದ ನಿವಾಸಿಯಾಗಿರುವ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತಿಯೊಂದಿಗೆ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು.
ಇದನ್ನೂ ಓದಿ: Jayalalitha: ಜಯಲಲಿತಾ ತಂದೆಯೇ ನನ್ನ ತಂದೆ, ಅವ್ರ ಆಸ್ತಿಯಲ್ಲಿ ನನಗೂ ಪಾಲು ಬೇಕು! ಕೋರ್ಟ್ ಮೆಟ್ಟಿಲೇರಿದ ವೃದ್ಧ
“ಖೆಪ್ರೆ ಪಿಎಚ್ಸಿ ನಿಯಮಿತವಾಗಿ ನಡೆಯುತ್ತಿಲ್ಲ ಮತ್ತು ನಿಮ್ಮ ಮೇಲೆ ಜವಾಬ್ದಾರಿಗಳಿರುವುದರಿಂದ ನೀವು ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ ಎಂದು ಗಮನಿಸಲಾಗಿದೆ. ಹೀಗಾಗಿ, ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ನಿಮ್ಮನ್ನು ಅಮಾನತುಗೊಳಿಸಲಾಗಿದೆ' ಎಂದು ಡಿಮಾ ಹಸಾವೊದ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕಿ ಡಾ.ಕಲ್ಪನಾ ಕೆಂಪರೈ ಅವರು ಎಲ್ಲಾ 9 ಉದ್ಯೋಗಿಗಳಿಗೆ ಭಾನುವಾರ ಹೊರಡಿಸಿದ ಅಮಾನತು ಆದೇಶ ನೀಡಿದ್ದಾರೆ.
ವೈದ್ಯರ ಹೊರತಾಗಿ, ಅಮಾನತುಗೊಂಡ ನೌಕರರಲ್ಲಿ ಇಬ್ಬರು ಫಾರ್ಮಾಸಿಸ್ಟ್ಗಳು, ಇಬ್ಬರು ಸಹಾಯಕ ನರ್ಸ್ ಮಿಡ್ವೈವ್ಗಳು (ಎಎನ್ಎಂಗಳು), ಇಬ್ಬರು ಸಾಮಾನ್ಯ ನರ್ಸ್ ಮಿಡ್ವೈವ್ಗಳು (ಜಿಎನ್ಎಂ) ಮತ್ತು ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಸೇರಿದ್ದಾರೆ.
ಕಳ್ಳರ ಭಯದಿಂದ ಆರೋಗ್ಯ ಕೇಂದ್ರಕ್ಕೆ ಬೀಗ
ಕಳ್ಳರ ಭಯದಿಂದ ಆರೋಗ್ಯ ಕೇಂದ್ರದ ನೌಕರರು ಮುಖ್ಯ ಬಾಗಿಲಿಗೆ ಬೀಗ ಹಾಕಿದ್ದರು ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಹಿಳೆಯ ಅಳಲು ಕೇಳಿದ ಅವರು ಆಕೆಯನ್ನು ಭೇಟಿಯಾಗಿ ಮಗುವನ್ನು ಹೆರಿಗೆಗೆ ಸಹಾಯ ಮಾಡಿದರು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಸೋನಿಯಾಗೆ ಸಮನ್ಸ್, ಮಕ್ಕಳಿಗೆ ಕಿಚ್ಚನ ಸಹಾಯ! ಈ ಸಂಜೆಯ ಟಾಪ್ ನ್ಯೂಸ್ಗಳು ಇಲ್ಲಿವೆ
ಇಂಥಹ ಘಟನೆ ಅಸ್ಸಾಂ ಮಾತ್ರವಲ್ಲದೆ ಬಹಳಷ್ಟು ರಾಜ್ಯಗಳಲ್ಲಿ ವರದಿಯಾಗಿದೆ. ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರೂ ಆ್ಯಂಬುಲೆನ್ಸ್ ಸೌಕರ್ಯಗಳನ್ನೂ ನೀಡದ ಬಹಳಷ್ಟು ಘಟನೆಗಳು ವರದಿಯಾಗಿವೆ. ಸರ್ಕಾರಿ ಆರೋಗ್ಯ ಕೇಂದ್ರಗಳು ಬಹಳಷ್ಟು ಸಲ ರೋಗಿಗಳನ್ನು ನಿರ್ಲಕ್ಷ್ಯಿಸಿ ಟೀಕೆಗೊಳಗಾಗುತ್ತಲೇ ಇರುತ್ತದೆ.
ಆದರೆ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಕಷ್ಟಪಡುವಾಗ ರಕ್ತಸ್ರಾವವಾದರೂ ಅಲ್ಲಿ ವೈದ್ಯರ ಪತ್ತೆಯೇ ಇರದೆ, ಕನಿಷ್ಠ ಆರೋಗ್ಯ ಕೇಂದ್ರದ ಒಳಗೂ ಹೋಗಲಾಗದೆ ಇರುವಂತ ಘಟನೆ ನಿಜಕ್ಕೂ ಅಮಾನವೀಯ. ಈ ಘಟನೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ