ಪಾಟ್ನಾ (ಜೂ.26): ಸಿಡಿಲಿನ ಅಬ್ಬರಕ್ಕೆ ಬಿಹಾರದಲ್ಲಿ ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ 83 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡುವ ಮಾಹಿತಿ ಪ್ರಕಾರ ಬಿಹಾರದ 23 ಜಿಲ್ಲೆಗಳಲ್ಲಿ ಸಿಡಿಲು ಅಪ್ಪಳಿಸಿದೆ. ಈ ವೇಳೆ 83 ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ.
ಗೋಪಾಲ್ಗಂಜ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಣ ಹಾನಿ ಉಂಟಾಗಿದೆ. ಈ ಜಿಲ್ಲೆಯಲ್ಲೊಂದೇ 13 ಜನರು ಮೃತಪಟ್ಟಿದ್ದಾರೆ. ಉಳಿದಂತೆ ನವಾಡ ಹಾಗೂ ಮಧುಬನಿ ಸೇರಿ ಸಾಕಷ್ಟು ಜಿಲ್ಲೆಗಳು ಸಿಡಿಲಿನಿಂದ ತತ್ತರಿಸಿವೆ.
ಇದನ್ನೂ ಓದಿ: ಮೇ ತಿಂಗಳಿಂದಲೂ ಎಲ್ಎಸಿಯಲ್ಲಿ ಪಿಎಲ್ಎ ತುಕಡಿಗಳ ಜಮಾವಣೆ; ಇದು ಒಪ್ಪಂದ ಉಲ್ಲಂಘನೆ: ಭಾರತ ಆರೋಪ
ಸಿಡಿಲಿನ ಹೊಡೆತಕ್ಕೆ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ಚಿಕಿತ್ಸೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಘಟನೆ ವೇಳೆ ಮನೆ ಹಾಗೂ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಬಿಹಾರದಲ್ಲಿ ಭಾರೀ ಮಿಂಚು-ಗುಡುಗು ಸಹಿತ ಮಳೆ ಉಂಟಾಗಲಿದೆಯಂತೆ. ನೇಪಾಳದ ಜೊತೆ ಗಡಿ ಹಂಚಿಕೊಂಡ ಜಿಲ್ಲೆಗಳ ಭಾಗದಲ್ಲಿ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ